Breaking: ಬೈಕಿನ ಹಿಂಬದಿ ಸವಾರರಿಗೆ ನಿರ್ಬಂಧ; ಬೆಳಗ್ಗೆ ಆದೇಶ- ಸಂಜೆ ವಾಪಸ್
ಮಂಗಳೂರು ಆಗಸ್ಟ್ 04: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ನಡೆಯದಂತೆ ವಿಧಿಸಲಾಗಿದ್ದ ಬೈಕ್ನಲ್ಲಿ ಹಿಂಬದಿ ಸವಾರರ ನಿರ್ಬಂಧ ಆದೇಶವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ವಾಪಾಸ್ ಪಡೆದಿದ್ದಾರೆ.
ಗುರುವಾರ ಬೆಳಗ್ಗೆ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಅವರು ನಾಳೆ ಶುಕ್ರವಾರದಿಂದ ಬೈಕ್ನಲ್ಲಿ ಹಿಂಬದಿ ಪುರುಷ ಸವಾರರು ಸಂಚರಿಸುವಂತಿಲ್ಲ. ಹಿರಿಯ ನಾಗರಿಕರು ಮತ್ತು ಮಕ್ಕಳ ಹೊರತು ಯುವಕರು ಬೈಕ್ ಹಿಂದೆ ಕೂತು ಸಂಚರಿಸುವಂತಿಲ್ಲ. ಸಂಜೆ ನಂತರ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಸಂಜೆ 6ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಬೈಕ್ನಲ್ಲಿ ಹಿಂದೆ ಕೂತು ಸಂಚರಿಸಲು ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು.
ಬೈಕ್ ಸವಾರರ ಜತೆಗೆ ಸಹ ಸವಾರರು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಇತರ ರಾಜ್ಯಗಳಂತೆ ಜಿಲ್ಲೆಯಲ್ಲೂ ಬೈಕ್ ಸವಾರರ ಮೇಲೆ ನಿಗಾ ಇಡಲಾಗುವುದು ಎಂದು ಅಧಿಕಾರಿಗಳ ಜತೆ ಸಭೆ ನಡೆಸಿ ನಂತರ ಸುದ್ದಿಗಾರರಿಗೆ ಅಲೋಕ್ ಕುಮಾರ್ ತಿಳಿಸಿದ್ದರು. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ದೃಷ್ಟಿಯಿಂದ ಬೈಕ್ ಹಿಂಬದಿ ಕೂತು ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದು ನಾಳೆಯಿಂದಲೇ ಜಾರಿ ಬರಲಿದೆ ಎಂದಿದ್ದರು.
ನಿರ್ಬಂಧ ನೀರ್ಧಾರ ವಾಪಾಸ್ ಏಕೆ?
ಹತ್ಯೆ, ಕೋಮು ಗಲಭೆ ಸೇರಿದಂತೆ ಅನೇಕ ಅಹಿತಕರ ಘಟನೆಗಳ ಹಿನ್ನೆಲೆ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ನಿರ್ಬಂಧಗಳನ್ನು ಈಗಾಗಲೇ ವಿಧಿಸಲಾಗಿದೆ. ಇದರ ಮಧ್ಯೆ ಯುವಕರಿಗೆ ಬೈಕ್ ಹಿಂಬದಿ ಸವಾರರಿಗೆ ಸಂಚಾರ ಅವಕಾಶ ನಿರಾಕಿಸುವ ಅಗತ್ಯತೆ ಇಲ್ಲ. ಈ ನಿಯಮಗದ ಅಗತ್ಯತೆ ಇಲ್ಲ ಎಂದು ಪರಿಗಣಿಸಿ ಆದೇಶ ವಾಪಸ್ ಪಡೆಯಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದರು.