ಕಡಬದಲ್ಲಿ ಮಾನಸಿಕ ಅಸ್ವಸ್ಥನ ಮೇಲೆ ಅಮಾನವೀಯ ಹಲ್ಲೆ ಮಾಡಿದ ಪೊಲೀಸ್ ಸಿಬ್ಬಂದಿ
ಮಂಗಳೂರು, ಏಪ್ರಿಲ್ 22:ಮಾನಸಿಕ ಅಸ್ವಸ್ಥರಾದ ವೃದ್ಧನ ಮೇಲೆ ಪೊಲೀಸ್ ಕ್ರೌರ್ಯ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಕಡಬ ಪೊಲೀಸ್ ಠಾಣೆ ಎದುರು ಈ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥನ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರಿಗೆ ಕರುಣೆ ಇಲ್ಲ. ಹೃದಯ ಇಲ್ಲದ ಕಟುಕರು ಎಂಬ ಮಾತಿದೆ. ಈ ಮಾತನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಅಕ್ಷರಶಃ ಸತ್ಯವಾಗಿಸಿದ್ದಾರೆ. ಕಡಬ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ವೃದ್ಧ ಮಾನಸಿಕ ಅಸ್ವಸ್ಥನ ಮೇಲೆ ಹಲ್ಲೆ ಮಾಡುವ ಮೂಲಕ ಈ ಮಾತನ್ನು ನಿಜಗೊಳಿಸಿದ್ದಾರೆ.
ಮಂಗಳೂರು : ಯುವಕನ ಮೇಲೆ ಪೊಲೀಸರ ದೌರ್ಜನ್ಯ?
ಮಾನಸಿಕ ಅಸ್ವಸ್ಥರಾದ ವೃದ್ಧ ವ್ಯಕ್ತಿ ಯಾರಿಗೋ ಬೈಯುತ್ತ ಕೈಯ್ಯಲ್ಲಿ ಕಲ್ಲು ಹಿಡಿದುಕೊಂದಿದ್ದ ಎನ್ನುವ ಕಾರಣಕ್ಕೆ ಆತನನ್ನು ಕಡಬ ಠಾಣೆಯ ಸಿಬ್ಬಂದಿ ಪಂಪಾಪತಿ ಎಂಬುವವರು ಲಾಠಿಯಿಂದ ಹೊಡೆದು ಸುಡು ಬಿಸಿಲಿನಲ್ಲಿ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದಾರೆ. ಈ ದೃಶ್ಯವನ್ನು ಅಲ್ಲೇ ದಾರಿಹೋಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಮಾನಸಿಕ ಅಸ್ವಸ್ಥನನ್ನು ಥಳಿಸುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿಯ ಈ ವರ್ತನೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಬ ಜಾತ್ರೆಯ ಪ್ರಯುಕ್ತ ದೇವರ ಮೆರವಣಿಗೆ ಕಡಬ ಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಪಂಪಾಪತಿ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.