BREAKING: ಮಂಗಳೂರಿನಲ್ಲಿ ಸಿಡಿದ ಪೊಲೀಸ್ ಗುಂಡು; ಮೂವರ ಸ್ಥಿತಿ ಗಂಭೀರ
ಮಂಗಳೂರು, ಡಿಸೆಂಬರ್ 19: ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಹಾರಿಸಿದ ಗುಂಡಿಗೆ ಮೂವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶುಕ್ರವಾರ ಸೆಕ್ಷನ್ 144 ಜಾರಿ ನಂತರವೂ ರಾಜ್ಯದ ಹಲವು ಕೇಂದ್ರ ಸರಕಾರದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಮಂಗಳೂರಿನಲ್ಲಿಯೂ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭವಾಗಿತ್ತು. ಒಂದು ಹಂತದಲ್ಲಿ ಇದು ವಿಕೋಪಕ್ಕೆ ತಿರುಗುವ ಸೂಚನೆ ಸಿಕ್ಕಿತ್ತು. ಈ ಸಮಯದಲ್ಲಿ ಪೊಲೀಸರು ಕರ್ಫ್ಯೂ ಜಾರಿಗೊಳಿಸಿದ್ದರು.
ದಿನದ ಅಂತ್ಯದ ವೇಳೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕರ್ಫ್ಯೂ ಜಾರಿ ನಂತರವೂ ಪ್ರತಿಭಟನೆ ಮುಂದುವರಿದಿತ್ತು. ಮಂಗಳೂರಿನ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. "ಈವರೆಗೆ ಒಟ್ಟು 6 ಜನರನ್ನು ಆಸ್ಪತ್ರೆ ದಾಖಲು ಮಾಡಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುಗೆ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ನೀಡದಂತೆ ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ಹೊರಗೆ ಜನ ನೆರೆದಿದ್ದು ಭಯವಾಗುತ್ತಿದೆ,'' ಎಂದು ಮಂಗಳೂರಿನ ಯೂನಿಟಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು 'ಒನ್ ಇಂಡಿಯಾ ಕನ್ನಡಕ್ಕೆ' ಮಾಹಿತಿ ನೀಡಿದರು.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನದ್ದು ಎನ್ನಲಾದ ಚಿಕ್ಕದೊಂದು ವಿಡಿಯೋ ಹರಿದಾಡುತ್ತಿದೆ. ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಬೋರಲಾಗಿ ಬಿದ್ದಿದ್ದು ಬೆನ್ನಿಗೆ ಗುಂಡೇಟು ಬಿದ್ದಿರುವ ದೃಶ್ಯವಾಗಿದೆ.
ರಾಜ್ಯದ ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ಅಗ್ರ ಸ್ಥಾನದಲ್ಲಿರುವ ಮಂಗಳೂರಿನಲ್ಲಿ ಗುರುವಾರದಿಂದಲೇ ಪೊಲೀಸರು ಪ್ರತಿಭಟನೆ ನಡೆಸದಂತೆ ತಡೆಯುವ ಪ್ರಯತ್ನ ಆರಂಭಿಸಿದ್ದರು. ಕೇಂದ್ರ ಸರಕಾರ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳಿಗೆ ಹಲವು ಸಂಘಟನೆಗಳು ಇಲ್ಲಿ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿಲಾಗಿತ್ತು. ಹಾಗಿದ್ದರು ಶುಕ್ರವಾರ ಮುಂಜಾನೆಯಿಂದಲೇ ಸಾವಿರಾರು ಜನ ಮಂಗಳೂರಿನ ಬೀದಿಗಳಲ್ಲಿ ಪ್ರತಿಭಟನೆ ಆರಂಭಿಸಿದ್ದರು.
ಇದೀಗ ಪೊಲೀಸರ ಫೈರಿಂಗ್ ಸುದ್ದಿ ಹೊರಬಿದ್ದಿದ್ದು ಒಟ್ಟು 6 ಜನ ಗಾಯಗೊಂಡಿದ್ದಾರೆ, ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಮಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ 'ಮಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಯಾವುದೇ ಕಾರಣಕ್ಕೂ ಪೊಲೀಸ್ ಅಧಿಕಾರಿಗಳು ಈ ರೀತಿಯ ಘಟನೆಗೆ ಅವಕಾಶ ಕೊಡಬಾರದೆಂದು ಸೂಚನೆ ನೀಡಿದ್ದೇನೆ. ಪೊಲೀಸ್ ಉನ್ನತಾಧಿಕಾರಿಯೊಬ್ಬರನ್ನು ಕೂಡಲೇ ಮಂಗಳೂರಿಗೆ ಕಳುಹಿಸುತ್ತೇನೆ' ಎಂದಿದ್ದಾರೆ.