'ಸುಧಾ'ಗೆ ಕಣ್ಣೀರಿನ ವಿದಾಯ ಹೇಳಿದ ಮಂಗಳೂರಿನ ಪೊಲೀಸರು
ಮಂಗಳೂರು, ಜುಲೈ 24: ಅಲ್ಲಿ ದುಃಖದ ಸಾಗರ ಕಟ್ಟೆಯೊಡೆದಿತ್ತು, ಎಲ್ಲರ ಕಣ್ಣಲ್ಲೂ ಕಣ್ಣೀರಿನ ಕೋಡಿ ಹರಿದಿತ್ತು. ಎಲ್ಲರೂ ಶೋಕತೃಪ್ತರಾಗಿ ಸುತ್ತ ನಿಂತಿದ್ದರೆ, ನಡುವಲ್ಲಿ ಸುಧಾ ಏನೂ ಅರಿವಿಲ್ಲದಂತೇ ಗಂಭೀರ ಚಿತ್ತದಿಂದ ಮಲಗಿದ್ದಳು. ಇಂತಹ ಭಾವುಕ ಕ್ಷಣಕ್ಕೆ ಸಾಕ್ಷಿಯಾದವರು ಮಂಗಳೂರಿನ ಪೊಲೀಸರು.
ಕಳೆದ ಹತ್ತು ವರ್ಷಗಳಿಂದ ಮಂಗಳೂರು ಅಪರಾಧ ಜಗತ್ತಿನ ಕ್ಲಿಷ್ಟಕರ ಪ್ರಕರಣಗಳನ್ನು ಬಯಲಿಗೆಳೆದಿದ್ದ ಶ್ವಾನ 'ಸುಧಾ' ಅನಾರೋಗ್ಯದಿಂದ ಮೃತಪಟ್ಟಿದೆ. ಸುಧಾಗೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಉನ್ನತ ಶ್ರೇಣಿಯ ಅಧಿಕಾರಿಗಳು ಈ ಅಂತಿಮ ನಮನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಶ್ವಾನಕ್ಕೆ ವಿದಾಯ ಹೇಳಿದ್ದಾರೆ.
ಸುಧಾ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಎತ್ತಿದ ಕೈಯಾಗಿದ್ದಳು. ಕೊಲೆ, ಸುಲಿಗೆ, ಕಳ್ಳತನ ಹೀಗೆ ಸಾವಿರಾರು ಪ್ರಕರಣಗಳನ್ನು ಭೇದಿಸುವಲ್ಲಿ ಈಕೆಯ ಪಾತ್ರ ಪ್ರಮುಖವಾಗಿತ್ತು.
ಆದರೆ ಅನಾರೋಗ್ಯ ಕಾರಣದಿಂದಾಗಿ ಸುಧಾ ಸಾವನ್ನಪ್ಪಿದೆ. ಸುಧಾಗೆ ಯಾವ ರೀತಿ ಮನುಷ್ಯನಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೋ, ಅದೇ ರೀತಿಯ ಗೌರವ ನೀಡಲಾಗಿದೆ. ಸಕಲ ಸರಕಾರಿ ಗೌರವಗಳ ಜೊತೆ ಈ ಸುಧಾಳ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗಿದೆ.
ಸುಧಾ ಅಂತ್ಯಕ್ರಿಯೆಯ ವೇಳೆಯಲ್ಲಿ ಶ್ವಾನದಳದ ಸಿಬ್ಬಂದಿಗಳು ತನ್ನ ಅಚ್ಚುಮೆಚ್ಚಿನ ಶ್ವಾನದ ಅಗಲುವಿಕೆಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. ಸುಧಾಗೆ ಕಳೆದ ಮೂರು ತಿಂಗಳಿನಿಂದ ಶ್ವಾಸಕೋಶದಲ್ಲಿ ಗಡ್ಡೆಯಂತಹ ವಸ್ತು ಪತ್ತೆಯಾಗಿತ್ತು. ಆ ಬಳಿಕ ನಿರಂತರವಾಗಿ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಕಳೆದ ಎರಡು ದಿನಗಳಿಂದ ಯಾವುದೇ ಆಹಾರ ಸೇವಿಸದೆ ಸುಧಾ ಸಂಪೂರ್ಣ ಬಡವಾಗಿತ್ತು.