ಕಿಡಿಗೇಡಿಗಳ ಗೋಡೆ ಬರಹ; ಮಾಹಿತಿ ನೀಡುವಂತೆ ಜನರಲ್ಲಿ ಮನವಿ
ಮಂಗಳೂರು, ನವೆಂಬರ್ 30: ನಗರದ ಕಟ್ಟಡಗಳ ಮೇಲೆ ಕಾಣಿಸಿಕೊಳ್ಳುತ್ತಿರುವ ಕಿಡಿಗೇಡಿಗಳ ಗೋಡೆ ಬರಹ ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಪದೇ ಪದೇ ಈ ರೀತಿ ಗೋಡೆ ಬರಹಗಳು ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದೆ.
ಈಚೆಗೆ ನಗರದ ಬಿಜೈ ಅಪಾರ್ಟ್ ಮೆಂಟ್ ಆವರಣದಲ್ಲಿ ಉಗ್ರರ ಪರ ದೇಶದ್ರೋಹಿ ಗೋಡೆ ಬರಹ ಕಾಣಿಸಿಕೊಂಡಿತ್ತು. ಈ ಸಂಬಂಧ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಸಂಗತಿ ಬೆನ್ನಲ್ಲೇ ಮತ್ತೊಂದು ಗೋಡೆ ಬರಹ ಕಾಣಿಸಿಕೊಂಡಿದೆ. ಮಂಗಳೂರು ನ್ಯಾಯಾಲಯದ ಆವರಣದಲ್ಲಿ ಭಾನುವಾರ "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು" ಎಂಬ ಸಂದೇಶದ ಗೋಡೆ ಬರಹ ಕಾಣಿಸಿಕೊಂಡಿದೆ.
ಮಂಗಳೂರಿನಲ್ಲಿ ಮತಾಂಧರ ಮತ್ತೊಂದು ಗೋಡೆ ಬರಹ: ಸರ್ಕಾರಕ್ಕೆ ತಲೆನೋವು
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಜನರಿಗೆ ಈ ಗೋಡೆ ಬರಹ ಬರೆದವರ ಸುಳಿವಿದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿನಂತಿ ಮಾಡಿದ್ದಾರೆ.
ಇಂತಹ ಕೆಲಸ ಮಾಡುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ, ಉಪ ಪೊಲೀಸ್ ಆಯುಕ್ತರು- ಕಾನೂನು ಹಾಗೂ ಸುವ್ಯವಸ್ಥೆ ವಿಭಾಗ, ಉಪ ಪೊಲೀಸ್ ಆಯುಕ್ತರು- ಅಪರಾಧ ಮತ್ತು ಸಂಚಾರ ವಿಭಾಗ, ನಗರ ನಿಯಂತ್ರಣ ಕೊಠಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಸಮಾಜದಲ್ಲಿ ಶಾಂತಿ ಕಾಪಾಡಲು ಇಂಥ ಅಪರಾಧಗಳನ್ನು ತಡೆಗಟ್ಟುವುದು ಅವಶ್ಯಕ. ಆದ್ದರಿಂದ ಇದರ ಹಿಂದಿರುವ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.