ಮಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ:ನಟೋರಿಯಸ್ ರೌಡಿಯ ಕಾಲಿಗೆ ಗುಂಡೇಟು
ಮಂಗಳೂರು, ಮೇ 10:ಕಡಲತಡಿಯಲ್ಲಿ ಮತ್ತೆ ಗುಂಡಿನ ಶಬ್ದ ಮೊಳಗಿದೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ನಟೋರಿಯಸ್ ರೌಡಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರು ಹೊರವಲಯದಲ್ಲಿ ಗುರುವಾರ ತಡರಾತ್ರಿ (ಮೇ.10) ಈ ಘಟನೆ ನಡೆದಿದೆ.
ಮಂಗಳೂರಿನ ನಟೋರಿಯಸ್ ರೌಡಿ ಗೌರೀಶ್ ನನ್ನು ಬಂಧಿಸಲು ಪೊಲೀಸರು ಖೆಡ್ಡಾ ತೋಡಿದ್ದರು ಎಂದು ಹೇಳಲಾಗಿದೆ.ಮಂಗಳೂರು ಹೊರವಲಯದ ಜಪ್ಪಿನಮೊಗರು ಎಂಬಲ್ಲಿ ರೌಡಿ ಗೌರೀಶ್ ನನ್ನು ಬಂಧಿಸಲು ಪೊಲೀಸರು ಮುಂದಾದ ಸಂದರ್ಭದಲ್ಲಿ ಗೌರೀಶ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ:ಪೊಲೀಸರ ಬಳಿ ಮಹತ್ವದ ಸುಳಿವು
ಘರ್ಷಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಶೀನಪ್ಪ ಎಂಬುವವರು ಗಾಯಗೊಂಡಿದ್ದಾರೆ. ಪೊಲೀಸರ ಮೇಲೆ ಮಾರಣಾಂತಿಕ ದಾಳಿಗೆ ಮುಂದಾದ ಗೌರೀಶ್ ಮೇಲೆ ಜೀವರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗೌರೀಶ್ ಕಾಲಿಗೆ ಗುಂಡು ತಗುಲಿದ್ದು, ಆತ ಗಾಯಗೊಂಡಿದ್ದಾನೆ.
ನಟೋರಿಯಸ್ ರೌಡಿ ಆಕಾಶ ಭವನ್ ಶರಣ್ ನ ಸಹಚರನಾಗಿರುವ ಗೌರೀಶ್ ಮೇಲೆ 3 ಮರ್ಡರ್ ಸೇರಿದಂತೆ 6 ಪ್ರಕರಣಗಳಿವೆ. ಗೌರೀಶ್ ಇತ್ತೀಚೆಗೆ ಜನರಿಂದ ಹಫ್ತಾ ವಸೂಲಿ ಪಡೆಯುತ್ತಿದ್ದ ಬಗ್ಗೆ ದೂರು ಕೇಳಿ ಬಂದಿತ್ತು.
ಗಾಯಾಳು ಪೊಲೀಸ್ ಮತ್ತು ಗುಂಡು ತಗುಲಿ ಗಾಯಗೊಂಡಿರುವ ರೌಡಿ ಗೌರೀಶ್ ನನ್ನು ಹಾಗೂ ಘರ್ಷಣೆ ಯಲ್ಲಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ಶೀನಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.