30 ವರ್ಷಗಳಿಂದ ತಲೆ ತಪ್ಪಿಸಿಕೊಂಡಿದ್ದವ ಕೊನೆಗೂ ಕಂಬಿ ಎಣಿಸಿದ
ಮಂಗಳೂರು, ಸೆಪ್ಟೆಂಬರ್ 6: ಮೂವತ್ತು ವರ್ಷಗಳಿಂದ ಕಾನೂನಿನಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಕೊನೆಗೂ ಜೈಲು ಸೇರಿದ್ದಾನೆ. ಆತನನ್ನು ಹಿಡಿಯುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಲ್ಲಾಳ ಪೊಲೀಸ್ ಠಾಣೆ ಸರಹದ್ದಿನ ಕಿನ್ಯಾ ಗ್ರಾಮದ ನಿವಾಸಿ ಶೇಕಬ್ಬ (50) ಎಂಬಾತ ಬಂಧಿತ ವ್ಯಕ್ತಿ.
ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ವಿಕಿ ಶೆಟ್ಟಿ ಸಹಚರ ಅರೆಸ್ಟ್
1989ರಲ್ಲಿ ಫಕೀರ್ ಬೀರಿ ಹಾಗೂ ಮೊಹಮದ್ ಎಂಬುವರ ಮೇಲೆ ಶೇಕಬ್ಬ ಹಲ್ಲೆ ನಡೆಸಿದ್ದು, ಐಪಿಸಿ ಸೆಕ್ಷನ್ 314, 324 ಹಾಗೂ 34ರ ಅಡಿಯಲ್ಲಿ ಈತನ ಮೇಲೆ ಉಲ್ಲಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ನ್ಯಾಯಾಲಯದ ಯಾವುದೇ ವಿಚಾರಣೆಗೆ ಈತ ಹಾಜರಾಗಿರಲಿಲ್ಲ. ಹಲವು ಬಾರಿ ವಾರೆಂಟ್ ನೀಡಿದರೂ ವಿಚಾರಣೆಗೆ ಬರಲಿಲ್ಲ. ಅಂದಿನಿಂದಲೂ ತಪ್ಪಿಸಿಕೊಂಡೇ ಓಡಾಡುತ್ತಿದ್ದನು. 2004ರಲ್ಲಿ ಅಂತಿಮವಾಗಿ ವಾರೆಂಟ್ ನೀಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ.
ಹಲವು ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಶೇಕಬ್ಬ, ತನ್ನ ವಿರುದ್ಧದ ಈ ಪ್ರಕರಣ ರದ್ದುಗೊಂಡಿರುತ್ತದೆ, ತನ್ನನ್ನು ಪೊಲೀಸರು ಹುಡುಕುತ್ತಿಲ್ಲ ಎಂದೇ ಭಾವಿಸಿ ಮತ್ತೆ ಕಿನ್ಯಾಗೆ ಬಂದು ಸೇರಿದ್ದ. ಆದರೆ ಸ್ಥಳೀಯರಿಂದ ಮಾಹಿತಿ ಪಡೆದು ಆತನ ಸುಳಿವನ್ನು ಕಂಡುಕೊಂಡು ಬಂಧಿಸಿದ್ದಾರೆ. ಕೊನೆಗೂ ಶೇಕಬ್ಬನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.