ಯಶ್ ಪಾಲ್, ಮುತಾಲಿಕ್ ತಲೆಗೆ ಹತ್ತು ಲಕ್ಷ ಆಫರ್ ಕೊಟ್ಟಿದ್ದ ಮಹಮ್ಮದ್ ಶಫಿ ಬಂಧನ
ಮಂಗಳೂರು ಜೂನ್ 19: ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಮತ್ತು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಲೆಗೆ ಹತ್ತು ಲಕ್ಷ ರೂಪಾಯಿ ಘೋಷಣೆ ಮಾಡಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಾರಿ ಗುಡಿ_06 ಎಂಬ ಪೇಜ್ ಮೂಲಕ ಕೊಲೆ ಬೆದರಿಕೆ ಹಾಕಿದ್ದ. ಈ ಎರಡು ತಲೆ ಕಡಿದರೆ 20 ಲಕ್ಷ, ಒಂದು ತಲೆಗೆ 10 ಲಕ್ಷ, ಇನ್ನೊಂದು ತಲೆಗೆ 10 ಲಕ್ಷ ನಿಮ್ಮ ಖಾತೆಗೆ ಜಮಾ ಆಗಲಿದೆ. 100% ಈ ಎರಡು ತಲೆ ಉರುಳೋದು ಖಚಿತ ಎಂದು ಮಂಗಳೂರಿನ ಬಜ್ಪೆ ನಿವಾಸಿ ಮಹಮ್ಮದ್ ಶಫಿ ಪೋಸ್ಟ್ ಮಾಡಿದ್ದ. ಉಡುಪಿಯ ಕಾಪು ಪೊಲೀಸರು ಈತನನ್ನು ಶನಿವಾರ ಬಂಧಿಸಿದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ವೈರಲ್ ಪೋಸ್ಟ್; ಮುತಾಲಿಕ್, ಯಶ್ ಪಾಲ್ ತಲೆಗೆ ತಲಾ 20 ಲಕ್ಷ ಘೋಷಣೆ
ಮಂಗಳೂರು ನಗರ ಹೊರವಲಯದ ಸುರತ್ಕಲ್ನಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ. ಐಪಿ ವಿಳಾಸದ ಮೂಲಕ ಆರೋಪಿ ಬಂಧಿಸಿರುವ ಕಾಪು ಪೊಲೀಸರು ಮತ್ತಷ್ಟು ಮಹತ್ವದ ಅಂಶಗಳನ್ನು ಬಯಲಿಗೆಳೆದಿದ್ದಾರೆ. ಮಹಮ್ಮದ್ ಶಫಿ ಮಂಗಳೂರಿನ ಬಜ್ಪೆ ನಿವಾಸಿಯಾಗಿದ್ದು, ಸುರತ್ಕಲ್ ಭಾಗದಲ್ಲಿ ಲಾಜಿಸ್ಟಿಕ್ ನಲ್ಲಿ ಕೆಲಸ ಮಾಡುತ್ತಿದ್ದ. ಲಾರಿಗಳ ಸೂಪರ್ ವೈಸರ್ ಆಗಿರುವ ಮಹಮ್ಮದ್ ಶಫಿ, ಕಾಂಗ್ರೆಸ್ ಕಾರ್ಯಕರ್ತನೂ ಆಗಿದ್ದ ಎನ್ನಲಾಗಿದೆ.
ಮಳಲಿ ಮಸೀದಿಯಲ್ಲಿ ದೇವಾಲಯ ಪತ್ತೆ ವಿವಾದಕ್ಕೆ ಹೊಸ ತಿರುವು
ಹಿಂದೂ ನಾಯಕರ ಟಾರ್ಗೆಟ್
ಮಳಲಿ ವಿಚಾರ ಮತ್ತು ಹಿಜಾಬ್ ದಲ್ಲಿ ಯಶ್ ಪಾಲ್ ಸುವರ್ಣ ಅವರನ್ನು ಟಾರ್ಗೆಟ್ ಮಾಡಿರುವುದಾಗಿ ಒಪ್ಪಿಕೊಂಡಿರುವ ಮಹಮ್ಮದ್ ಶಫಿ, ತನ್ನ ಜೊತೆಗೆ ಮತ್ತೊಬ್ಬ ಆರೋಪಿ ಇರುವ ಬಗ್ಗೆಯೂ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ. ದುಬೈ ನಲ್ಲಿ ನೆಲೆಸಿರುವ ಮಹಮ್ಮದ್ ಆಸಿಫ್ ಅಲಿಯಾಸ್ ಆಶಿಕ್ ಎರಡನೇ ಆರೋಪಿಯಾಗಿದ್ದು, ಮಹಮ್ಮದ್ ಶಫಿ ಬಂಧನದ ಬಳಿಕ ಇನ್ಸ್ಟಾಗ್ರಾಮ್ ನ ಮಾರಿಗುಡಿ ಪೇಜ್ ನಲ್ಲಿರುವ ಎಲ್ಲಾ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಇನ್ ಸೈಟ್ ಆಪ್ ಮೂಲಕ ಮಾರಿಗುಡಿ ಪೇಜ್ ಮಾಡಿರುವ ಮಹಮ್ಮದ್ ಶಫಿ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹಿಜಾಬ್ ವಿರುದ್ಧ ಹೋರಾಟ ಮಾಡಿದ್ದ ಯಶ್ಪಾಲ್
ಈ ಹಿಂದೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಬಿಜೆಪಿ ಮುಖಂಡ ಯಶ್ ಪಾಲ್ ತಲೆ ಕಡಿದರೆ ತಲೆಗೆ ತಲಾ 20 ಲಕ್ಷ ಘೋಷಣೆ ಮಾಡಿರುವ ಪೋಸ್ಟ್ ವೈರಲ್ ಆಗಿತ್ತುಇಸ್ಟಾಗ್ರಾಮ್ನಲ್ಲಿ ಮಾರಿಗುಡಿ ಪೇಜ್ನಲ್ಲಿ ಬಹಿರಂಗ ಬೆದರಿಕೆ ಹಾಕಲಾಗಿತ್ತು. ಉಡುಪಿಯಲ್ಲಿ ಹಿಜಾಬ್ ಸಂಘರ್ಷ ನಡೆದಾಗ ಯಶ್ ಪಾಲ್ ಸುವರ್ಣ ಸಿಎಫ್ಐ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಎಂದಿದ್ದರು. ಹಿಜಾಬ್ ವಿರುದ್ಧದ ಕಾನೂನು ಹೋರಾಟದ ನೇತೃತ್ವ ವಹಿಸಿದ್ದರು. ಇತ್ತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಸೀದಿಗಳಲ್ಲಿನ ಮೈಕ್ ತೆರವು ಸೇರಿದಂತೆ ವಿವಿಧ ವಿಚಾರಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಕಾಪು ಬಿಜೆಪಿ ಯುವ ಮೋರ್ಚಾ ಲಿಖಿತ ರೂಪದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು..
ರಾಷ್ಟ್ರೀಯತೆ ವಿಚಾರದಲ್ಲಿ ರಾಜಿಯಿಲ್ಲ
ಬೆದರಿಕೆ ಕುರಿತು ಮಾತನಾಡಿದ್ದ ಬಿಜೆಪಿ ಮುಖಂಡ ಯಶ್ ಪಾಲ್ , " ಈ ಇನ್ಸ್ಟಾಗ್ರಾಮ್ ಪೇಜ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಆದರೆ ನನ್ನ ತಲೆಗೆ ಬೆಲೆ ಕಟ್ಟಿದವನ ಯಾರೆಂದು ಗೊತ್ತಾದರೆ ಸಂತೋಷವಾಗುತ್ತದೆ. ನನ್ನ ಬೆಲೆ, ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ. ನಾನು ದುಡಿದು ತಿನ್ನುವವನು. ನಾನು ದೇಶ, ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ, ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದರು.
ಕಾರ್ಯಕರ್ತರಲ್ಲಿ ಭಯ ಸೃಷ್ಠಿಸುವ ಹುನ್ನಾರ
"ಹೊರ ರಾಜ್ಯ, ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು. ಆದರೆ ನಮ್ಮ ಜಿಲ್ಲೆಯಲ್ಲಿದ್ದು ಅವರಿಗೆ ಸಂದೇಶ ರವಾನಿಸುವವರನ್ನು ಪತ್ತೆ ಹಚ್ಚಬೇಕು. ಇಂತಹ ಪೇಜ್ಗಳೊಂದಿಗೆ ತೊಡಗಿಸಿ ಕೊಂಡವರು ನಮ್ಮ ಊರಿನಲ್ಲಿದ್ದರೆ ಮಾರಕ. ಇಂಥವರಿಂದ ನಮ್ಮ ಕಾರ್ಯಕರ್ತರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮನೆಯಲ್ಲೇ ಮನಸ್ಥಾಪ ಸೃಷ್ಟಿಯಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಆಗಬಹುದು. ಹೀಗಾಗಿ ಮಾರಿಗುಡಿ ಪೇಜ್ ಹಿಂದೆ ಇರುವವರನ್ನು ಕಡಿವಾಣ ಹಾಕಬೇಕಿದೆ" ಎಂದು ಯಶ್ ಪಾಲ್ ಸುವರ್ಣ ಹೇಳಿದ್ದರು.