ಯಕ್ಷಗಾನದಲ್ಲಿ ಮೋದಿ ಕಥಾ ಪ್ರಸಂಗ ಪ್ರದರ್ಶನ
ಮಂಗಳೂರು, ಜನವರಿ 07: ಯಕ್ಷಗಾನ ಕರಾವಳಿ ಭಾಗದ ಗಂಡುಕಲೆ. ದೇವರುಗಳ ಹಾಗೂ ದೇವಲೋಕದ ಇತಿಹಾಸವನ್ನು ಸಾಂಸ್ಕೃತಿಕ ಕಲೆ ಯಕ್ಷಗಾನದ ಮೂಲಕ ತೋರಿಸುವುದು ಸಾಮಾನ್ಯ. ಆದರೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯನ್ನೇ ಯಕ್ಷಗಾನದಲ್ಲಿ ತೋರಿಸಿದ್ದಾರೆ. ಈ ಯಕ್ಷಗಾನದಲ್ಲಿ ಭಾರತದ ಸೈನಿಕರು ದೇವರುಗಳಾದರೆ, ಪಾಕಿಸ್ತಾನ ಸೈನಿಕರು ಮತ್ತು ಭಯೋತ್ಪಾದಕರು ರಾಕ್ಷಸರಾಗಿದ್ದರು.
ಸಾಮಾನ್ಯವಾಗಿ ಯಕ್ಷಗಾನದಲ್ಲಿ ದೇವಲೋಕದ ಇತಿಹಾಸ, ರಾಮಾಯಣ, ಮಹಾಭಾರತದಂತಹ ಪುರಾಣ ಪ್ರಸಿದ್ಧ ಘಟನಾವಳಿಗಳ ಒಂದು ತುಣುಕನ್ನ ಪ್ರದರ್ಶಿಸಲಾಗುತ್ತೆ. ಇನ್ನು ಈ ಯಕ್ಷಗಾನದಲ್ಲಿ ಬರುವ ತಿಳಿಹಾಸ್ಯ ಜನರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಹೊಂದಿರುತ್ತೆ.
ಯಕ್ಷಗಾನಕ್ಕೆ ತನ್ನದೇ ಆದ ಒಂದು ಗತ್ತು, ಗಾಂಭೀರ್ಯವಿದೆ. ಇದನ್ನು ಮನರಂಜನೆಗಾಗಿ ಹೇಗೆ ನೋಡುತ್ತಾರೊ ಅದರ ಹತ್ತು ಪಟ್ಟು ದೈವಿಕ ಮನೋಭಾವದಿಂದಲೂ ನೋಡುತ್ತಾರೆ. ಆದರೆ ಮಂಗಳೂರಿನಲ್ಲಿ ನಡೆದ ಒಂದು ಯಕ್ಷಗಾನ ಇಡೀ ಯಕ್ಷಗಾನದ ಇತಿಹಾಸವನ್ನೆ ಬದಲಿಸಿದೆ.
ಯಕ್ಷಗಾನ ಪ್ರಿಯರೆ, ವೆಬ್ಸೈಟ್ಲ್ಲಿ ಸಿಗಲಿವೆ 5 ಸಾವಿರ ಯಕ್ಷಗಾನ ಪ್ರಸಂಗ
ಭಾರತೀಯ ಸೈನಿಕರು ದೇವರುಗಳು, ಪಾಕಿಸ್ತಾನದವರು ರಾಕ್ಷಸರು
ಮಂಗಳೂರಿನ ಟಿ.ವಿ.ರಮಣ ಪೈ ಹಾಲ್ ನಲ್ಲಿ ನಡೆದ ಯಕ್ಷಗಾನದಲ್ಲಿ ಒಬ್ಬ ಮನುಷ್ಯನ ಜೀವನ ಚರಿತ್ರೆಯನ್ನು ಕಥೆಯನ್ನಾಗಿಸಿ ಯಕ್ಷಗಾನ ನಡೆಸಲಾಗಿದೆ. ಅಷ್ಟಕ್ಕೂ ಅಲ್ಲಿನ ಕಥಾವಸ್ತು ಯಾರೆಂದರೆ ಭಾರತದ ಪ್ರಧಾನಮಂತ್ರಿ ನರೇಂದ್ರ ದಾಮೋದರ ದಾಸ್ ಮೋದಿಯ ಜೀವನ ಚರಿತ್ರೆ. ಹೌದು ಮಂಗಳೂರಿನ ಪಂಚಾಯತ್ ಕನ್ನಡ ಆಯೋಜಿಸಿದ್ದ ಯಕ್ಷಗಾನಕ್ಕೆ "ನರೇಂದ್ರ ವಿಜಯ' ಅನ್ನೋ ಹೆಸರಿಡಲಾಗಿತ್ತು.
ತೀರ್ಥಹಳ್ಳಿಯ ಗಾಯಿತ್ರಿ ಯಕ್ಷಗಾನ ಮಂಡಳಿಯ ಜ್ಯೋತಿ ಶಾಸ್ತ್ರಿ ಮತ್ತು ಬಳಗ ಈ ಯಕ್ಷಗಾನವನ್ನು ನಡೆಸಿಕೊಟ್ಟರು. ಇನ್ನು ನರೇಂದ್ರ ಮೋದಿ ಜೀವನ ಚರಿತ್ರೆಯ ಕಾಲ್ಪನಿಕ ಪ್ರಸಂಗವನ್ನು ಇಲ್ಲಿ ವಿವರಿಸಲಾಯಿತು.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋದ್ರಾ ಹತ್ಯಾಕಾಂಡದ ಪ್ರಕರಣದಲ್ಲಿ ಜೈಲಿನಲ್ಲಿದ್ದ ಅಮಿತ್ ಶಾ ಅವರನ್ನು ಬಿಡಿಸುವ ದಿನದಿಂದ ಈ ಯಕ್ಷಗಾನ ಆರಂಭವಾಗುತ್ತೆ. ಬಳಿಕ ಮೋದಿ ಪ್ರಧಾನಿಯಾದ ಇತಿಹಾಸವನ್ನು ಸಾರುವ ಕಥೆಯನ್ನು ಯಕ್ಷಗಾನದ ರೂಪದಲ್ಲಿ ತೋರಿಸಲಾಯ್ತು.
ತ್ರಿವಳಿ ತಲಾಕ್ ರದ್ದುಗೊಳಿಸಿದ್ದು ಯಕ್ಷಗಾನ ರೂಪದಲ್ಲಿ
ನರೇಂದ್ರ ಮೋದಿ ಅವರ ತಾಯಿಯ ಕಥೆಯಲ್ಲಿ ಸಾಕ್ಷಾತ್ ಪರಮೇಶ್ವರ ಕನಸಿನಲ್ಲಿ ಬಂದು ನರೇಂದ್ರ ಎಂಬ ಮಗ ಇಡೀ ಭರತ ಖಂಡವನ್ನೇ ಬೆಳಗುತ್ತಾನೆ ಎಂದು ಹೇಳುವ ದೃಶ್ಯವನ್ನು ಕೂಡ ಯಕ್ಷಗಾನದಲ್ಲಿ ತೋರಿಸಲಾಗಿದೆ. ಇನ್ನು ಮೋದಿ ಪ್ರಧಾನಿ ಆದ ನಂತರ ತೆಗೆದುಕೊಂಡು ಮಹತ್ವದ ನಿರ್ಧಾರಗಳ ಮೇಲೆ ಕೂಡ ಕಥೆಯನ್ನು ರೂಪಿಸಲಾಗಿತ್ತು.
"ಅರಬ್ ದೇಶದಲ್ಲಿರುವ ಗಂಡ ಮೂರ್ನಾಲ್ಕು ಮದುವೆಯಾಗಿ ತನ್ನ ಪತ್ನಿಗೆ ತಲಾಕ್ ನೀಡಿದಾಗ, ಆಕೆ ಮೋದಿ ಬಳಿ ಬಂದು ಅವಲತ್ತುಕೊಳ್ಳೋದು, ಆಗ ಮೋದಿ ತ್ರಿವಳಿ ತಲಾಕ್ ಅನ್ನು ರದ್ದುಗೊಳಿಸಿದ್ದನ್ನು ಯಕ್ಷಗಾನ ರೂಪದಲ್ಲಿ ಹೇಳಲಾಯಿತು. ಮೋದಿ ಕಾರ್ಯಗಳು ಯಕ್ಷಗಾನದ ಮೂಲಕ ಕರಾವಳಿಗರಿಗೆ ಬಹುಬೇಗ ತಲುಪುತ್ತದೆ ಅನ್ನೋ ಉದ್ದೇಶದಿಂದ "ನರೇಂದ್ರ ವಿಜಯ' ಯಕ್ಷಗಾನ ಪ್ರದರ್ಶನ ಮಾಡಿದ್ದೇವೆ'' ಎನ್ನುತ್ತಾರೆ ಆಯೋಜಕರು.
ಮೋದಿ ಹಲವು ನಿರ್ಧಾರಗಳ ಪ್ರದರ್ಶನ
ಇನ್ನು ಯಕ್ಷಗಾನದಲ್ಲಿ ಮೋದಿಯ ವೇಗವನ್ನು ನೋಡಿದ ದೇವರುಗಳು ಈಶ್ವರನಿಗೆ ಈತನ ವೇಗವನ್ನು ತಟಸ್ಥ ಮಾಡಿ ಎಂದು ಹೇಳುತ್ತಾರೆ. ಆದರೆ ಈಶ್ವರನೂ ಮೋದಿಯ ವೇಗವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕಲಿಯುಗದಲ್ಲಿ ಮೋದಿ ಅವತಾರ ಎತ್ತಿರುವುದು ವಿಷ್ಣು. ತನ್ನ ಅವತಾರದಿಂದ ಇಡೀ ಭೂಮಂಡಲವನ್ನು ಸರಿದಾರಿಗೆ ತಂದು ಉದ್ಧಾರ ಮಾಡುತ್ತಾನೆ ಅಂತ ಹೇಳುವ ದೃಶ್ಯವಿದೆ.
ಅಷ್ಟೇ ಅಲ್ಲದೇ ಪುಲ್ವಾಮ ದಾಳಿ, ಚಂದ್ರಯಾನ, ಕಾಶ್ಮೀರದಲ್ಲಿ 370 ವಿಧಿಯನ್ನು ಹಿಂಪಡೆದಿದ್ದು... ಹೀಗೆ ಮೋದಿಯ ಹಲವು ಕಾರ್ಯಕ್ರಮಗಳನ್ನು ಯಕ್ಷಗಾನದ ರೂಪದಲ್ಲಿ ತೋರಿಸಲಾಯ್ತು. ಇನ್ನು ಕೇದಾರನಾಥದಲ್ಲಿ ಮೋದಿ ಧ್ಯಾನಕ್ಕೆ ಕುಳಿತ ಪ್ರಸಂಗವನ್ನು ಕೂಡ ತೋರಿಸಲಾಯ್ತು.
ಯಕ್ಷಗಾನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಸಂಸ್ಕೃತಿ ಸಚಿವ
ಕರಾವಳಿ ಭಾಗದ ವಿವಿಧ ಕಡೆ ಪ್ರದರ್ಶನ
ಇಂತಹ ಹಲವು ದೃಶ್ಯಗಳು ನೆರೆದಿದ್ದವರನ್ನು ರಂಜಿಸಿದವು. ಕೊನೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಕೂಡ ಯಕ್ಷಗಾನ ಪ್ರಸಂಗದಲ್ಲಿ ವಿವರಿಸಲಾಯ್ತು. "ನರೇಂದ್ರ ವಿಜಯ" ಯಕ್ಷಗಾನ ವೀಕ್ಷಿಸಲು ಸಾಕಷ್ಟು ಜನರು ಜಮಾಯಿಸಿದ್ದರು.
ಇನ್ನು ಮನುಷ್ಯನೊಬ್ಬನ ಜೀವನ ಚರಿತ್ರೆ ಯಕ್ಷಗಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ. ನಂತರದ ದಿನಗಳಲ್ಲಿ ಕರಾವಳಿಯ ವಿವಿಧ ಕಡೆಗಳಲ್ಲಿ ಈ ಪ್ರದರ್ಶನವನ್ನು ಮಾಡುವ ಬಗ್ಗೆ ಕೂಡ ಯೋಚನೆ ನಡೆಸಲಾಗಿದೆ.