ಏ.13 ರಂದು ಬಂದರು ನಗರಿಯಲ್ಲಿ ಮೋದಿ ಪ್ರಚಾರ: ಬಿಗಿ ಭದ್ರತೆಗೆ ಕ್ರಮ
ಮಂಗಳೂರು, ಏಪ್ರಿಲ್ 11:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ದಕ್ಷಿಣ ಕನ್ನಡ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದು, ಪ್ರಧಾನಿ ಮೋದಿ ಏಪ್ರಿಲ್ 13 ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಂದು ಮೋದಿ ಬಿಜೆಪಿಯ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ವ್ಯಾಪಕ ಭದ್ರತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಚುನಾವಣಾ ಪ್ರಚಾರಕ್ಕಾಗಿ ಏ.13 ರಂದು ಮಂಗಳೂರು, ಉಡುಪಿಗೆ ಬರಲಿದ್ದಾರೆ ಮೋದಿ
ಪ್ರಧಾನಿ ಭದ್ರತೆಗೆ ನಿಯೋಜಿಸಲಾಗಿರುವ ಎಸ್ ಪಿಜಿ ಪಡೆಯ ಅಧಿಕಾರಿಗಳು ಈಗಾಗಲೇ ಮಂಗಳೂರಿಗೆ ಬಂದಿದ್ದು, ಮೈದಾನದಲ್ಲಿ ಸಿದ್ಧತೆ ಪರಿಶೀಲಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಮೈದಾನಕ್ಕೆ ಮೋದಿ ರಸ್ತೆಯ ಮೂಲಕ ಆಗಮಿಸಲಿದ್ದು, ರಸ್ತೆಯುದ್ದಕ್ಕೂ ಭದ್ರತೆ ದೃಷ್ಠಿಯಿಂದ ಪರಿಶೀಲನೆ ನಡೆಸಿದ್ದಾರೆ.
ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದ ಭದ್ರತೆಗೆ 1472 ಪೊಲೀಸರ ನಿಯೋಜನೆಗೆ ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ. ಇದರಲ್ಲಿ 5 ಎಸ್ಪಿ , 10 ಡಿವೈಎಸ್ಪಿ, 36 ಇನ್ಸ್ ಪೆಕ್ಟರ್ , 67 ಪಿಎಸ್ಐ, 147 ಎಎಸ್ಐ , 1207 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 1,472 ಪೊಲೀಸರನ್ನು ಭಧ್ರತೆಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಕರಾವಳಿಯಲ್ಲಿ ಕೇಸರಿ ಪಡೆಗೆ ಮೋದಿ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ!
ಅದಲ್ಲದೇ 5 ಕೆಎಸ್ಆರ್ ಪಿ ತುಕಡಿ, 19 ಸಿಎಆರ್ ತುಕಡಿ ಮತ್ತು 2 ಸಿಆರ್ ಪಿಎಫ್ ತುಕಡಿಗಳ ಅಧಿಕಾರಿ ಮತ್ತು ಸಿಬ್ಬಂದಿ, 4 ಎಎಸ್ ಸಿ ತಂಡ, 1 ಬಿಡಿಎಸ್ ತಂಡ, 30 ಡಿಎಫ್ಎಂಡಿ ಎಚ್ಎಚ್ಎಂಡಿಯನ್ನು ಬಂದೋಬಸ್ತು ಕರ್ತವ್ಯದಲ್ಲಿ ಒಟ್ಟು 34 ಸೆಕ್ಟರ್ ಮೊಬೈಲ್ಗಳು ಹಾಗೂ 144 ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ಪಾಯಿಂಟ್ಗಳು ಕಾರ್ಯನಿರ್ವಹಿಸಲಿವೆ.
ನಗರದ ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಹೋಟೆಲ್ ಲಾಡ್ಜ್ ಗಳನ್ನು ತಪಾಸಣೆ ಮಾಡಲಾಗುತ್ತಿದೆ. ವಿಮಾನ, ರೈಲು ನಿಲ್ದಾಣಗಳಲ್ಲಿ ನಿಗಾ ಇಡಲಾಗಿದೆ. ಏಪ್ರಿಲ್ 13 ರಂದು ಮೋದಿ ಅವರು ಭಾಗವಹಿಸುವ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ.