ಲೋಕಾಂಡ್ವಾಲಾ ಗ್ಯಾಂಗ್ ಬಂಧನ; ಅನಾಹುತ ತಪ್ಪಿಸಿದ ಮಂಗಳೂರು ಪೊಲೀಸ್
ಮಂಗಳೂರು, ಅಕ್ಟೋಬರ್ 22; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವಿಷ ಬೀಜ ಬಿತ್ತಲು ತಯಾರಾಗಿದ್ದ ಗ್ಯಾಂಗ್ ಅನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಜ್, ತನ್ನ ಸಹಚರರನ್ನು ಸೇರಿಸಿಕೊಂಡು 'ಲೋಕಂಡ್ವಾಲಾ' ಎಂಬ ಗ್ಯಾಂಗ್ ರಚನೆ ಮಾಡಿದ್ದು, ಕೋಮು ಗಲಭೆ ನಡೆಸಲು ಸಂಚು ರೂಪಿಸಿದ್ದ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.
2017ರಲ್ಲಿ ಮಂಗಳೂರಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಮತ್ತೆ ಪಾತಕ ಲೋಕದಲ್ಲಿ ಕೈಯಾಡಿಸಿದ್ದಾನೆ. 2021ರ ಜನವರಿಯಲ್ಲಿ ಮಾರಣಾಂತಿಕವಾಗಿ ದಾಳಿಗೊಳಗಾದ ಮಹಮ್ಮದ್ ನವಾಜ್ ಆಲಿಯಾಸ್ ಪಿಂಕಿ ನವಾಜ್ ಈಗ ಮತ್ತೆ ಬಾಲಬಿಚ್ಚಿದ್ದು, ದೊಡ್ಡ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಮಾಡಲು ಸಂಚು ರೂಪಿಸಿದ್ದ.
ದೀಪಕ್ ರಾವ್ ಹತ್ಯೆ; ಪ್ರಮುಖ ಆರೋಪಿ ಕೊಲೆಗೆ ಯತ್ನ
ಮಾರಣಾಂತಿಕವಾಗಿ ಗಾಯಗೊಂಡ ಬಳಿಕ ಸೈಲೆಂಟ್ ಆಗಿದ್ದ ಪಿಂಕಿ ನವಾಜ್, ಈಗ ಹಲವು ಮಂದಿಯನ್ನು ಟಾರ್ಗೆಟ್ ಮಾಡಿ 'ಲೋಕಂಡ್ವಾಲಾ' ಎಂಬ ಗ್ಯಾಂಗ್ ಮಾಡಿಕೊಂಡು ಹಲವು ಮಂದಿಯ ಹತ್ಯೆಗೆ ಪ್ಲಾನ್ ಮಾಡಿರೋದು ಬೆಳಕಿಗೆ ಬಂದಿದೆ. ಗ್ಯಾಂಗ್ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ.
ಇತ್ತೀಚೆಗೆ ಸುರತ್ಕಲ್ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ಸ್ಮರಣಾರ್ಥವಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಶಾಸಕ ಭರತ್ ಶೆಟ್ಟಿ ಲೋಕಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಭರತ್ ಶೆಟ್ಟಿಯ ಜೊತೆ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷ್ಯ ನುಡಿದ ಸ್ಥಳೀಯರೂ ಭಾಗವಹಿಸಿದ್ದರು.
ಮಂಗಳೂರು; ಮಂಕಾದ ಖಾಕಿ, ಕಿಡಿಗೇಡಿಗಳಿಗೆ ಇಲ್ಲ ಲಗಾಮು!
ಈ ಫೋಟೋವನ್ನು 'ಲೋಕಾಂಡ್ವಾಲಾ' ವಾಟ್ಸಪ್ ಗ್ರೂಪ್ನಲ್ಲಿ ಪಿಂಕಿ ನವಾಜ್ ಹಾಕಿ ಆಡಿಯೋ ಮೆಸೇಜ್ ಮೂಲಕ ಹಲವು ಮಂದಿಯನ್ನು ಟಾರ್ಗೆಟ್ ಮಾಡಿದ್ದ. ಪಿಂಕಿ ನವಾಜ್ನ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ತನಿಖೆಗಿಳಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪಿಂಕಿ ನವಾಜ್ ಮತ್ತು ಆತನ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಘಾತಕಾರಿ ಮಾಹಿತಿಯನ್ನು ಆರೋಪಿಗಳು ಹೊರ ಹಾಕಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಪಿಂಕಿ ನವಾಜ್ 2017ರಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಬೇಲ್ ಮೂಲಕ ಹೊರಬಂದಿದ್ದ. ಆ ಬಳಿಕ 2021ರ ಜನವರಿಯಲ್ಲಿ ಪಿಂಕಿ ನವಾಜ್ ಮೇಲೆ ಕಾಟಿಪಳ್ಳದಲ್ಲಿ ಕೊಲೆ ಯತ್ನ ಮಾಡಲಾಗಿತ್ತು. ವೈಯಕ್ತಿಕ ದ್ವೇಷ ಮತ್ತು ಪ್ರೀತಿಯ ವಿಚಾರದಲ್ಲಿ ಪಿಂಕಿ ನವಾಜ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಆದರೆ ಆಯುಷ್ಯವಿದ್ದ ಕಾರಣ ಪಿಂಕಿ ನವಾಜ್ ಬದುಕುಳಿದಿದ್ದ ಎಂದರು.
ಆ ಬಳಿಕ ಸೈಲೆಂಟ್ ಆಗಿದ್ದ ಪಿಂಕಿ ನವಾಜ್ ಮೇಲೆ ಹಲವರು ಕೈ ಕಾಲು ಮುರಿದು ಪಿಂಕಿ ನವಾಜ್ ಮೂಲೆಯಲ್ಲಿ ಬಿದ್ದಿದ್ದಾನೆ ಅಂತಾ ಮೂದಲಿಸಿದ್ದರು. ಇದರಿಂದ ಕೆರಳಿದ ಪಿಂಕಿ ನವಾಜ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಟೋರಿಯಸ್ ತಂಡ ಮಾಡೋಕೆ ರೆಡಿಯಾಗಿದ್ದಾನೆ. ಸುಪಾರಿ ಕೊಲೆ, ಕೋಮುದ್ವೇಷಕ್ಕೆ ಹಲ್ಲೆ ಮಾಡಲು 'ಲೋಕಂಡ್ವಾಲಾ' ಎಂಬ ತಂಡ ತಯಾರು ಮಾಡಿದ್ದ ಎಂದು ಮಾಹಿತಿ ನೀಡಿದರು.
ಮಂಗಳೂರು; ಡಿಸಿಪಿ ವಾಹನದ ಮೇಲೆ ಲಾರಿ ಹತ್ತಿಸಿದ ಮರಳು ದಂಧೆಕೋರರು
ಪೊಲೀಸರು ಈ ತಂಡವನ್ನು ಬೇಧಿಸಿದ್ದು, ಕೋಮುದ್ವೇಷಕ್ಕೆ ಸಂಚು ರೂಪಿಸಿದ್ದ ಪಿಂಕಿ ನವಾಜ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಪಿಂಕಿ ನವಾಜ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ನಿಯಾಝ್, ಮೊಹಮ್ಮದ್ ನವಾಝ್, ಮೊಹಮ್ಮದ್ ಫೈಝಲ್, ಮೊಹಮ್ಮದ್ ಮುಸ್ತಾಫ ಎಂಬ ಗ್ಯಾಂಗ್ನ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಪರಿಸರದಲ್ಲಿ ನಮ್ಮ ಹವಾ ಇನ್ಮುಂದೆಯು ಇರಬೇಕು ಜನ ಹೆದರಿಕೊಳ್ಳುವಂತೆ ಇರಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್ ಪ್ರಮುಖರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ನಲ್ಲಿ ಇನ್ನಷ್ಟು ಆರೋಪಿಗಳು ಇರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸದ್ಯ ಬಂಧನ ಆಗಿರುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಒಟ್ಟಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ರೆಡಿಯಾಗಿದ್ದ ಗ್ಯಾಂಗ್ ಅಂದರ್ ಆಗಿರುವುದು ಜನರಿಗೆ ನೆಮ್ಮದಿಗೆ ತಂದಿದೆ.