ಚಪ್ಪಲಿಗೆ ಭಾವಚಿತ್ರ ಹಾಕಿ ನರೇಂದ್ರ ಮೋದಿಗೆ ಅವಮಾನ
ಉಳ್ಳಾಲ, ಜ. 21 : ಮನೆಯೊಂದರ ಮುಂಭಾಗದಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ಚಪ್ಪಲಿಯಲ್ಲಿಟ್ಟು ದುಷ್ಕರ್ಮಿಗಳು ಅವಮಾನ ಎಸಗಿರುವ ಘಟನೆ ತೊಕ್ಕೊಟ್ಟು ಕಲ್ಲಾಪುಪಟ್ಲ ಸಮೀಪದ ಮುಡಿಪೋಡಿ ಎಂಬಲ್ಲಿ ಸೋಮವಾರ ನಡೆದಿದೆ.
ಉಳ್ಳಾಲ ಮಂಡಲ ಪಂಚಾಯಿತಿನ ಮಾಜಿ ಮಂಡಲ ಪ್ರಧಾನ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ದಿ| ಮಹಾಬಲ ಶೆಟ್ಟಿ ಎಂಬವರ ಮನೆಯ ಗೇಟಿನಲ್ಲಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಅವರ ಪುತ್ರ ಜಯರಾಮ ಶೆಟ್ಟಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭ ನರೇಂದ್ರ ಮೋದಿಯನ್ನು ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ.
ಚರಂಡಿ ಗಲಾಟೆಯ ಸೇಡು ತೀರಿಸಿದರೇ?
ಜಯರಾಮ ಶೆಟ್ಟಿ ಅವರ ಮನೆ ತೋಟದ ಮಧ್ಯೆ ಇದ್ದು, ತಗ್ಗು ಪ್ರದೇಶದಲ್ಲಿದೆ. ಸುತ್ತಮುತ್ತಲಿನ ಸುಮಾರು 50ಕ್ಕೂ ಹೆಚ್ಚಿನ ಮನೆಗಳ ಚರಂಡಿ ನೀರು ಇವರ ಮನೆಯ ಮುಂದೆ ಹರಿಯುತ್ತಿರುವುದರಿಂದ ಕೆರೆ ಮತ್ತು ಬಾವಿಯ ನೀರು ಕಲುಷಿತಗೊಂಡಿದೆ. ಈ ಕುರಿತು ಆರೋಗ್ಯ ಇಲಾಖೆಯಿಂದ ಕಲುಷಿತಗೊಂಡಿರುವ ವರದಿಯೂ ಸಿಕ್ಕಿದೆ. ಅದಕ್ಕಾಗಿ ಸಂಬಂಧಿಸಿದ ಪುರಸಭೆ ಮತ್ತು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದರು.
ಆದರೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚರಂಡಿ ನೀರು ಬಾವಿಯತ್ತ ಹರಿಯದಂತೆ ಜಯರಾಮ್ ಅವರು ತಡೆಗಟ್ಟಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಮನೆ ಸಮೀಪದವರು ಇವರ ಜತೆಗೆ ಗಲಾಟೆ ನಡೆಸುತ್ತಿದ್ದರು. ಇತ್ತೀಚೆಗೆ ತಂಡವೊಂದು ಮರದ ಕೊಂಬೆಗಳನ್ನು ಹಿಡಿದು ತಂದು ಬೆದರಿಸಿದ್ದರು. ಇದೇ ವಿಚಾರದಲ್ಲಿ ಮನೆ ಸಮೀಪದ ಯುವಕರ ತಂಡ ಕೃತ್ಯ ಎಸಗಿದ್ದಾರೆ ಎಂದು ಜಯರಾಮ್ ಅವರ ತಾಯಿ ಅನುಸೂಯ ಆರೋಪಿಸಿದ್ದಾರೆ.
ಪುರಸಭೆ ಸದಸ್ಯೆ ತರಾಟೆಗೆ
ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾಧಿಕಾರಿ ಸವಿತ್ರ ತೇಜ ಮತ್ತು ಎಸ್.ಐ ಭಾರತಿ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಪುರಸಭಾ ಸದಸ್ಯೆ ಶಾಂತಿ ಡಿಸೋಜಾ ಅವರನ್ನು ಕರೆಸಿದ್ದರು. ಅಲ್ಲಿ ಸ್ಥಳೀಯರು ಈ ಭಾಗದಲ್ಲಿ ಹಿಂದೂ - ಮುಸ್ಲಿಂ ಮನೆಗಳಿದ್ದರೂ, ಅನ್ಯೋನ್ಯವಾಗಿ ಬಾಳುತ್ತಿದ್ದೇವೆ. ಆದರೆ ಪುರಸಭಾ ಸದಸ್ಯರ ನಿರ್ಲಕ್ಷ್ಯದಿಂದಾಗಿ, ಪ್ರಜ್ಞೆಯಿಲ್ಲದ ಯುವಕರು ಕೃತ್ಯಗಳನ್ನು ಎಸಗುವುದರಿಂದ ಗಲಭೆಗೆ ಆಸ್ಪದ ನೀಡುವಂತಾಗಿದೆ. ಎಂದು ಸದಸ್ಯೆಯನ್ನು ತರಾಟೆಗೆ ತೆಗೆದುಕೊಂಡಾಗ, ಅವರು ಕಣ್ಣೀರಿಟ್ಟು, ತಾನು ಸಹಾ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದೇನೆ ಎಂದರು.
ಮುಖ್ಯಾಧಿಕಾರಿ ವಿಶ್ವಾಸ
ಉಳ್ಳಾಲ ಪುರಸಭೆಯ ಮುಖ್ಯಾಧಿಕಾರಿ ರೂಪಾ.ಟಿ.ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ, ಜಯರಾಮ ಶೆಟ್ಟಿ ನೀಡಿದ ದೂರಿನಂತೆ ಈವರೆಗೆ ಪ್ರದೇಶಕ್ಕೆ ಮೂರು ಬಾರಿ ಭೇಟಿ ನೀಡಿದ್ದೇನೆ. ಕಾನೂನಿನ ತೊಡಕಿನಿಂದ ಕಾಮಗಾರಿ ಕೈಗೊಳ್ಳಲು ಅಸಾಧ್ಯವಾಗಿತ್ತು. ಹಿಂದೆ ಭೇಟಿಯ ವೇಳೆ ತ್ಯಾಜ್ಯ ನೀರಿಗೆ ಬ್ಲೀಚಿಂಗ್ ಹುಡಿ ಹಾಕಿ ಶುದ್ಧೀಕರಣ ನಡೆಸಲಾಗಿತ್ತು. ಶಾಶ್ವತ ಕಾಮಗಾರಿ ಮುಂದಿನ ಎರಡು ತಿಂಗಳಲ್ಲಿ ನಡೆಸುವುದಾಗಿ ತಿಳಿಸಿದ ಅವರು ತಾತ್ಕಾಲಿಕವಾಗಿ ರಿಂಗ್ ಕಟ್ಟಿಕೊಡುವ ವಿಶ್ವಾಸ ನೀಡಿದರು. ಉಳ್ಳಾಲ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.