ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಟ್ರಂಪ್ ಮಾರ್ಗದರ್ಶನವೂ ಪಡೆಯಲಿ: ಎಚ್ ಡಿ ಕುಮಾರಸ್ವಾಮಿ
ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ), ಆಗಸ್ಟ್ 18: "ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಅಲ್ಲ, ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ನೀಡಲಿ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರ ಜತೆಗೆ ಮಾತನಾಡುತ್ತಾ ಹೇಳಿದ್ದಾರೆ.
ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸಿಬಿಐಗೆ ವಹಿಸುವ ನಿರ್ಧಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಬಿಐ ತನಿಖೆಗೆ ಸಹಕರಿಸಲು ನಾವು (ಜೆಡಿಎಸ್) ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಕೂಡ ಹೇಳಿರುವ ಅವರು, ಈ ಪ್ರಕರಣದ ಬಗ್ಗೆ ಲಘು ಧಾಟಿಯಲ್ಲಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಫೋನ್ ಕದ್ದಾಲಿಕೆ ಸಿಬಿಐಗೆ : ಇದು ದ್ವೇಷದ ರಾಜಕೀಯ ಹೇಗೆ?
"ಅಂತರರಾಷ್ಟ್ರೀಯ ತನಿಖಾ ಸಂಸ್ಥೆಗಳು ಮಾತ್ರವಲ್ಲ, ತನಿಖೆಗೆ ಅಗತ್ಯ ಎಂದು ಕಂಡುಬಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ಗದರ್ಶನವನ್ನು ಕೂಡ ಪಡೆಯಲಿ" ಎಂದು ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ತೀರ್ಮಾನಕ್ಕೆ ಕುಮಾರಸ್ವಾಮಿ ಅವರು ಗೇಲಿ ಮಾಡಿದ್ದಾರೆ.
ಮುಖ್ಯಮಂತ್ರಿ ಕಚೇರಿಯಿಂದಲೇ ಫೋನ್ ಕದ್ದಾಲಿಕೆ
ಈ ಮಧ್ಯೆ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆಯೇ ಎಚ್. ವಿಶ್ವನಾಥ್ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಕಚೇರಿಯಿಂದಲೇ ಫೋನ್ ಕದ್ದಾಲಿಕೆಗೆ ಸೂಚನೆ ನೀಡಲಾಗಿದೆ. ಇಂಥ ನಡವಳಿಕೆ ಖಂಡನೀಯ, ಅಸಹ್ಯಕರ ಎಂದು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ಒತ್ತಡಕ್ಕೆ ಮಣಿಯಲ್ಲ
ಇನ್ನು, ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಧ್ಯಮಗಳೇ ನನ್ನ ಹೆಸರನ್ನು ಎಳೆದುತರುತ್ತಿವೆ ಎಂದು ಸಹ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ಮೀಡಿಯಾಗಳ ಒತ್ತಡಕ್ಕೆ ಬಗ್ಗಲ್ಲ. ಮಾಧ್ಯಮಗಳು ಏನು ಬೇಕಾದರೂ ತೋರಿಸಲಿ. ಮಾಧ್ಯಮಗಳು ಫೋನ್ ಕದ್ದಾಲಿಕೆಯ ಸ್ಟೋರಿ ಮಾಡಿ, ಬಿಲ್ಡಪ್ ತೆಗೆದುಕೊಳ್ಳುವ ಪ್ರಯತ್ನದಲ್ಲಿವೆ. ಆದರೆ ಇದರಲ್ಲಿ ಅವುಗಳು ಯಶಸ್ವಿಯಾಗಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ
ಸಚಿವ ಸ್ಥಾನದ ವಿಷಯದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಟೋಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿ ಇದೀಗ ಕೆಟ್ಟ ಪರಿಸ್ಥಿತಿಯಿದೆ. ರಾಜ್ಯದ ಜನತೆಗೆ ಸರಕಾರದಿಂದ ಹಲವು ನಿರೀಕ್ಷೆಯಿದೆ. ಜನರ ಹಿತಕ್ಕೆ ಪೂರಕವಾಗಿ ಸರಕಾರ ಕೆಲಸ ಮಾಡಬೇಕು. ಸರಕಾರ ಉಳಿಯುತ್ತೋ, ಬೀಳುತ್ತೋ ಹೇಳೋಕ್ಕಾಗಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ
ಫೋನ್ ಕದ್ದಾಲಿಕೆ ಬಗ್ಗೆ ಚರ್ಚೆ ಆಗುತ್ತಿರುವ ಸದ್ಯದ ಪರಿಸ್ಥಿತಿ ನಿವಾರಣೆಯ ದೃಷ್ಟಿಯಲ್ಲಿ ನಾನು ಸರಕಾರದ ಜೊತೆಗಿದ್ದೇವೆ ಎಂದು ಅವರು ಹೇಳಿದರು. ಈ ಮೊದಲು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿದಿದರು.