ಮಂಗಳೂರು: ವಿದ್ಯಾರ್ಥಿನಿ ಅಂಜನಾ ವಸಿಷ್ಠ ಕೊಲೆ ಆರೋಪಿ ಬಂಧನ
ಮಂಗಳೂರು, ಜೂನ್ 08: ಮಂಗಳೂರಿನಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಸಂದೀಪ್ ರಾಥೋಡ್ ಎಂದು ಗುರುತಿಸಲಾಗಿದೆ. ವಿಜಯಪುರದ ಸಿಂದಗಿ ತಾಲೂಕಿನಲ್ಲಿ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು : ಅತ್ತಾವರದಲ್ಲಿ ಕಾಲೇಜು ವಿದ್ಯಾರ್ಥಿನಿ ಹತ್ಯೆ
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಅತ್ತಾವರದ ಬಾಡಿಗೆ ಮನೆಯೊಂದರಲ್ಲಿ ನಿನ್ನೆ ಸಂಜೆ ಕಾಲೇಜು ವಿದ್ಯಾರ್ಥಿನಿ ಮೃತದೇಹ ಪತ್ತೆಯಾಗಿತ್ತು. ಮೃತ ವಿದ್ಯಾರ್ಥಿನಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಅಂಜನಾ ವಸಿಷ್ಠ ಎಂದು ಗುರುತಿಸಲಾಗಿತ್ತು. ಬಾಡಿಗೆ ಮನೆಯಲ್ಲಿ ಮಂಚದ ಸರಳುಗಳ ನಡುವೆ ಕತ್ತು ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು.
5 ದಿನಗಳ ಹಿಂದೆ ಪ್ರಿಯಕರ ಸಂದೀಪ್ ರಾಥೋಡ್ ಜೊತೆ ದಂಪತಿ ಸೋಗಿನಲ್ಲಿ ಬಾಡಿಗೆ ಮನೆಗೆ ಬಂದಿದ್ದ ಅಂಜನಾ ಅವರನ್ನು ಪ್ರಿಯಕರ ಕೊಲೆಗೈದು ಪರಾರಿಯಾಗಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿತ್ತು. ಕೊಲೆಯಾದ ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ಆಧಾರದ ಮೇಲೆ ಗುರುತು ಪತ್ತೆ ಹಚ್ಚಿದ ಪೊಲೀಸರು, ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸಿ ಸಂದೀಪ್ ರಾಥೋಡ್ ನನ್ನು ಬಂಧಿಸಿದ್ದಾರೆ.