ಶಿರಾಡಿ ಘಾಟ್ ಬಂದ್; ದಕ್ಷಿಣ ಕನ್ನಡದಲ್ಲೂ ತೀವ್ರ ವಿರೋಧ
ಮಂಗಳೂರು, ಜನವರಿ 19; ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ನ್ನು ಮತ್ತೆ ಬಂದ್ ಮಾಡಲು ಹಾಸನ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಕಿ. ಮೀ. ರಸ್ತೆ ನಿರ್ಮಾಣಕ್ಕಾಗಿ 6 ತಿಂಗಳು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಟೆಂಡರ್ ಪಡೆದಿರುವ ರಾಜ್ ಕಮಲ್ ಕಂಪನಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಹೆದ್ದಾರಿ ಬಂದ್ ವಿಚಾರ ಸುದ್ದಿಯಾಗಯತ್ತಿದ್ದಂತೆಯೇ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಬಂದ್ ಮಾಡಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಬಂದರು ನಗರಿ ಮತ್ತು ರಾಜ್ಯ ರಾಜಧಾನಿಯ ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಬಂದ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.
ಮತ್ತೆ ಬಂದ್ ಆಗಲಿದೆಯಾ ಶಿರಾಡಿ ಘಾಟ್ ರಸ್ತೆ?; ಆತಂಕದಲ್ಲಿ ವಾಹನ ಸವಾರರು!
ಕಳೆದ ಕೆಲ ವರ್ಷಗಳಿಂದ ಹಾಸನದಿಂದ ಸಕಲೇಶಪುರವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು ಇನ್ನು ಆಮೆಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣಗೊಳಿಸೋದಾಗಿ ಟೆಂಡರ್ ವಹಿಸಿಕೊಂಡ ಕಂಪನಿ ಜಿಲ್ಲಾಡಳಿತಕ್ಕೆ ಭರವಸೆ ನೀಡಿದೆ.
ಶಿರಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿದ ಮರಗಳು; ವಾಹನ ಸಂಚಾರ ಬಂದ್
ಈ ನಡುವೆ ಸಕಲೇಶಪುರಪುರದ ಆನೆಮಹಲ್ನಿಂದ ಶಿರಾಡಿ ಘಾಟ್ ಆರಂಭದ ಮಾರನಹಳ್ಳಿಯವರೆಗಿನ 10 ಕಿ. ಮೀ. ರಸ್ತೆ ಕಾಮಗಾರಿ ಮಾಡಲು ಆರು ತಿಂಗಳು ಘಾಟ್ ರಸ್ತೆ ಬಂದ್ ಮಾಡಬೇಕೆಂದು ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಟೆಂಡರ್ ವಹಿಸಿಕೊಂಡ ಕಂಪನಿ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಕೂಡಾ ಹಾಸನ ಜಿಲ್ಲಾಡಳಿತಕ್ಕೆ ಹೆದ್ದಾರಿ ಬಂದ್ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸುಪ್ರೀಂ ಒಪ್ಪಿಗೆ
ಈ ವಿಚಾರ ಈಗ ಉಭಯ ಜಿಲ್ಲೆಗಳ ಜನರಲ್ಲಿ ಆಕ್ರೋಶ ಮೂಡಿಸಿದೆ. ಹಾಸನ ಗಡಿಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಜನರು ಈ ಪ್ರಸ್ತಾವನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ಮಳೆ, ಗುಡ್ಡ ಕುಸಿತದ ನೆಪದಲ್ಲಿ ಹೆದ್ದಾರಿ ಬಂದ್ ಮಾಡಿ ಸಾವಿರಾರು ಜನರ ಬದುಕಿಗೆ ಸಂಚಕಾರ ತಂದಿದ್ದ ಹೆದ್ದಾರಿ ಪ್ರಾಧಿಕಾರ, ಈಗ ರಸ್ತೆ ಕಾಮಗಾರಿ ನೆಪದಲ್ಲಿ ಹೆದ್ದಾರಿ ಬಂದ್ ಮಾಡಲು ಸೂಚಿಸಿದೆ. ಹೆದ್ದಾರಿ ಬಂದ್ ಮಾಡಿದರೆ ಹೋರಾಟ ಮಾಡುವುದಾಗಿ ಉಭಯ ಜಿಲ್ಲೆಗಳ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಶಿರಾಡಿ ಘಾಟ್ ಅಂತ್ಯವಾಗುವ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಲ್ಲೂ ವ್ಯಾಪಾರಸ್ಥರು ಪ್ರಾಧಿಕಾರದ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಲೆನಾಡು ಹಿತ ರಕ್ಷಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೋವಿಡ್ ಸಂದರ್ಭದಲ್ಲಿ ಸೇರಿದಂತೆ ಮಳೆಗಾಲದಲ್ಲಿ ಪೂರ್ತಿ ರಸ್ತೆ ಬಂದ್ ಮಾಡಿ ಹೆದ್ದಾರಿ ಪಕ್ಕದಲ್ಲಿ ವ್ಯಾಪಾರ ವಹಿವಾಟು ಮಾಡುವ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈಗ ಕಾಮಗಾರಿ ನೆಪದಲ್ಲಿ ಮತ್ತೆ ರಸ್ತೆ ಬಂದ್ ಮಾಡಿದರೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ರಸ್ತೆ ಕಾಮಗಾರಿಯನ್ನು ಕುಂಠಿತಗೊಳಿಸಿ, ನಿಧಾನಗತಿಯಲ್ಲಿ ಮಾಡಿದ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳೋವುದು ಬಿಟ್ಟು,ಅಮಾಯಕ ಜನರ ಮೇಲೆ ಇದರ ಪರಿಣಾಮವನ್ನು ಹಾಕುವುದು ಸರಿಯಲ್ಲ. ಇದರ ಹೊರತಾಗಿಯೂ ರಸ್ತೆ ಬಂದ್ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಸಾಗಬೇಕಾದರೆ ಘನ ವಾಹನಗಳು ಸೇರಿದಂತೆ ವಾಣಿಜ್ಯ ವ್ಯವಹಾರದ ಸಾಗಾಟದ ವಾಹನಗಳೂ ಇದೇ ಮಾರ್ಗದಲ್ಲಿ ಸಂಚಾರ ಮಾಡಬೇಕಾಗುತ್ತದೆ. ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಆದರೆ ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಮತ್ತು ಶನಿವಾರ ಸಂತೆಯಿಂದ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಬಿಸಿಲೆ ಘಾಟ್ ಪರ್ಯಾಯ ಮಾರ್ಗವಾಗಿ ಬಳಸಲು ಸೂಚಿಸಲಾಗಿದೆ.
ಆದರೆ ಈ ಎರಡೂ ಘಾಟ್ ಗಳು ಕಿರಿದಾದ ರಸ್ತೆ ಮಾರ್ಗ ಮತ್ತು ಸೂಕ್ಷ್ಮ ತಿರುವುಗಳನ್ನು ಹೊಂದಿದ್ದು, ಘನ ವಾಹನ ಸಂಚಾರಕ್ಕೆ ಅನುಕೂಲಕರವಾಗಿಲ್ಲ ಎಂಬುದು ವಾಸ್ತವ. ಸದ್ಯ ಹೆದ್ದಾರಿ ಬಂದ್ ಮಾಡುವ ವಿಚಾರ ಹಾಸನ ಜಿಲ್ಲಾಡಳಿತದ ವಿವೇಚನಾ ನಿರ್ಧಾರಕ್ಕೆ ಬಿಟ್ಟಿದ್ದು, ಹಾಸನ ಜಿಲ್ಲಾಧಿಕಾರಿ ಗಿರೀಶ್ ಈ ಬಗ್ಗೆ ಸರ್ವರ ಸಭೆ ಕರೆದು ನಿರ್ಧಾರ ಮಾಡೋದಾಗಿ ಹೇಳಿದ್ದಾರೆ.
ಹೆದ್ದಾರಿ ಬಂದ್ಗೆ ಮಾಜಿ ಸಚಿವ ಎಚ್. ಡಿ. ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡಾ ವಿರೋಧ ವ್ಯಕ್ತಪಡಿಸಿದ್ದು, ರಸ್ತೆ ಕಾಮಗಾರಿ ಆಗಬೇಕಾದರೆ ಹೆದ್ದಾರಿ ತಡೆ ಮಾಡುವ ಬದಲು ಏಕಮುಖ ಸಂಚಾರಕ್ಕೆ ಅವಕಾಶ ನೀಡಬೇಕು ಅಂತಾ ಸಲಹೆ ನೀಡಿದ್ದಾರೆ.
Recommended Video
ಒಟ್ಟಿನ್ನಲ್ಲಿ ಮಂಗಳೂರು-ಬೆಂಗಳೂರು ಸಂಪರ್ಕದ ಶಿರಾಡಿ ಘಾಟ್ ರಸ್ತೆ ಬಂದ್ ವಿಚಾರ ಪರ-ವಿರೋಧದ ಚರ್ಚೆಗೆ ಕಾರಣ ವಾಗಿದ್ದು ಹೆದ್ದಾರಿ ಬಂದ್ ಮಾಡುವ ನೆಪದಲ್ಲಿ ಬಡ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯದಿರಲಿ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.