'ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ವಿರೋಧ ವ್ಯಕ್ತಪಡಿಸುವುದಿಲ್ಲ'
ಮಂಗಳೂರು, ನವೆಂಬರ್. 26: ರಾಮ ಮಂದಿರ ನಿರ್ಮಾಣ ಆಗದಿದ್ದರೆ ರಾಷ್ಟ್ರಕ್ಕೆ ಅಪಮಾನ. ನಾಲ್ಕುವರೆ ವರ್ಷಗಳಿಂದ ಮಂದಿರಕ್ಕಾಗಿ ಕಾದಿದ್ದೇವೆ. ಇನ್ನು ಕಾಯುವ ಪ್ರಶ್ನೆ ಇಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು ಎಂದು ಪೇಜಾವರ ಶ್ರೀ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆಯೋಜಿಸಲಾಗಿದ್ದ ಬೃಹತ್ ಜನಾಗ್ರಹ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಶ್ರೀ ರಾಮ ಮಂದಿರ ನಿರ್ಮಾಣದ ಕುರಿತು ಪ್ರಧಾನ ಮಂತ್ರಿ ಕುಂಭ ಮೇಳದ ಒಳಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಭರವಸೆ ಇದೆ.
ಒಂದು ವೇಳೆ ಪ್ರಧಾನಿ ನಿರ್ಧಾರ ಕೈಗೊಳ್ಳದಿದ್ದರೆ ಫೆಬ್ರವರಿಯಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಸಂತರು ನಿರ್ಣಯ ಕೈಗೊಳ್ಳಲಿದ್ದಾರೆ. ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಸಂಸದರು ರಾಜೀನಾಮೆ ನೀಡಲು ಸಿದ್ದರಾಗಬೇಕು ಎಂದು ಅವರು ಕೇಂದ್ರ ಸರಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರ ಬೆಂಬಲ : ಕಾಂಗ್ರೆಸ್ ಮುಖಂಡ
ಕುಂಭಮೇಳದ ಮೊದಲು ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣದ ಕುರಿತು ಖಚಿತ ನಿರ್ಧಾರಕ್ಕೆ ಬರಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಕಾಂಗ್ರೆಸ್ ಕೂಡ ವಿರೋಧಿಸಿಲ್ಲ
ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಅಥವಾ ಸಂಸತ್ತಿನಲ್ಲಿ ಸಂಯುಕ್ತ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ ಶ್ರೀಗಳು ಕೋರ್ಟಿನಿಂದ ಹೊರಗೆ ಮಂದಿರ ನಿರ್ಮಾಣದ ಸಮಸ್ಯೆ ಬಗೆಹರಿದರೆ ಸಂತೋಷ . ಆದರೆ ಮಂದಿರ ನಿರ್ಮಾಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರೂ ವಿರೋಧ ವ್ಯಕ್ತಪಡಿಸುವುದಿಲ್ಲ.
ಚುನಾವಣೆಗಾಗಿ ಈ ಆಂದೋಲನವಲ್ಲ, ರಾಮ ಮಂದಿರ ನಿರ್ಮಾಣಕ್ಕೂ ಮುಂಬರುವ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಶ್ರೀರಾಮ ಈ ದೇಶದ ಸ್ವಾಭಿಮಾನ. ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಕೂಡ ವಿರೋಧಿಸಿಲ್ಲ. ಒಂದು ವೇಳೆ ಮಂದಿರ ನಿರ್ಮಾಣ ವನ್ನು ಕಾಂಗ್ರೆಸ್ ವಿರೋಧಿಸಿದರೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ.
ಸಂಸತ್ ಸದಸ್ಯರು ಈ ಸುಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮಸೂದೆ ಮಂಡನೆ?
ಎಲ್ಲಾ ಸಂತರ ಏಕಾಭಿಪ್ರಾಯ
ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆನ್ನುವುದು ಎಲ್ಲಾ ಸಂತರ ಏಕಾಭಿಪ್ರಾಯ. ಪ್ರಧಾನ ಮಂತ್ರಿಗಳು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿದೆ. ಪ್ರಧಾನಮಂತ್ರಿಗಳು ಸುಗ್ರೀವಾಜ್ಞೆ ಹೊರಡಿಸಿ ಅಥವಾ ಸಂಯುಕ್ತ ಸಭೆ ನಡೆಸಿ ರಾಮ ಮಂದಿರ ನಿರ್ಮಾಣದ ಕುರಿತು ನಿರ್ಧಾರ ಕೈಗೊಳ್ಳಲಿ. ರಾಮ ಮಂದಿರ ನಿರ್ಮಾಣ ಈ ಬಾರಿ ಘೋಷಣೆಯಾಗುತ್ತದೆ ಎಂದು ಹೇಳಿದ್ದೆ.
ಚುನಾವಣೆ ಮುನ್ನ ರಾಮಮಂದಿರದ ಬಗ್ಗೆ ನಿರ್ಧಾರವಾಗುತ್ತದೆ. ರಾಮಮಂದಿರ ನಿರ್ಮಾಣದ ಕುರಿತು ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ನಲ್ಲೂ ನಿರ್ಣಯ ಕೈಗೊಳ್ಳಲಾಗಿದೆ. ಚುನಾವಣೆ ಸಂದರ್ಭ ರಾಮಮಂದಿರ ಬಗ್ಗೆ ಮಾತನಾಡುತ್ತಾರೆ ಎಂದು ಕೆಲವರು ದೂಷಿಸುತ್ತಾರೆ. ಆದರೆ, ಇಲ್ಲಿ ಚುನಾವಣೆ ವಿಷಯವೇ ಇಲ್ಲ, ರಾಮಮಂದಿರ ನಿರ್ಮಾಣದ್ದು ಮಾತ್ರ ಎಂದು ಶ್ರೀಗಳು ಸ್ಪಷ್ಟ ಪಡಿಸಿದರು.
'ರಾಮಮಂದಿರಕ್ಕಾಗಿ ಆಗ್ರಹ' : ಅಯೋಧ್ಯೆಯ ಧರ್ಮಸಭೆಗೆ 2ಲಕ್ಷಕ್ಕೂ ಅಧಿಕ ಭಕ್ತರು
ಬಾಬರನ ಮಾನಸಿಕತೆ ಕಡಿಮೆಯಾಗಿಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ರಾಷ್ಟ್ರೀಯ ಸಂಯೋಜಕ್ ಸೋಹನ್ ಸಿಂಗ್ ಸೋಲಂಕಿ , ಈ ದೇಶ ಟಿಪ್ಪು, ಅಕ್ಬರ್, ಬಾಬರನದ್ದಲ್ಲ . ಕರ್ನಾಟಕದಲ್ಲಿ ಮತಾಂತರ ಮಾಡಿದ ದೇವಸ್ಥಾನಗಳನ್ನು ಲೂಟಿ ಗೈದ ಟಿಪ್ಪು ಜಯಂತಿ ಮಾಡಲಾಗುತ್ತಿದೆ. ಸ್ವಾಭಿಮಾನ ಇದ್ದರೆ ವಿಜಯನಗರ ಸಾಮ್ರಾಜ್ಯ ಕಟ್ಟಿದ ಹರಿಹರ, ಬುಕ್ಕ, ಕೃಷ್ಣದೇವರಾಯರ ಜಯಂತಿ ಆಚರಿಸಲಿ.
ಬಾಬರಿ ಮಸೀದಿ ನಾಶವಾಗಿದ್ದರೂ, ಈ ದೇಶದಲ್ಲಿ ಬಾಬರನ ಮಾನಸಿಕತೆ ಕಡಿಮೆಯಾಗಿಲ್ಲ. ಈ ದೇಶದಲ್ಲಿ ಬಾಬರನ ಸಂತಾನಿಗಳು ಇಂದಿಗೂ ಇದ್ದಾರೆ. ದೇಶದಲ್ಲಿ ರಾಮ ಅಲ್ಲಾನ ಆರಾಧಿಸುವ ಕೋಟ್ಯಂತರ ಜನರಿದ್ದಾರೆ. ಸುಪ್ರೀಂ ಕೋರ್ಟಿಗೆ ರಾಮ ಮಂದಿರದ ಬಗ್ಗೆ ವಿಚಾರಣೆ ನಡೆಸಲು ಸಮಯ ಇಲ್ಲ.
ಆದರೆ ಶಬರಿಮಲೆ, ಕರುಣಾನಿಧಿ, ದೀಪಾವಳಿ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲು ಸಮಯ ಇದೆಯೇ ? ಎಂದು ಅವರು ಪ್ರಶ್ನಿಸಿದರು. ರಾಮಮಂದಿರಕ್ಕಾಗಿ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಿ. ರಾಮಮಂದಿರ ನಿರ್ಮಾಣ ಆದಾಗಲೇ ದೇಶದಲ್ಲಿ ಅಚ್ಚೇ ದಿನ್ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯೋಚಿಸುವ ಮಾತೇ ಇಲ್ಲ
ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಯೋಚಿಸುವ ಮಾತೇ ಇಲ್ಲ . ಲೋಕ ಸಭಾ ಸದಸ್ಯ ಸ್ಥಾನ ಎರಡನೇ ಆಯ್ಕೆ, ರಾಮ ಮಂದಿರ ಮೊದಲ ಆಯ್ಕೆ. ನಾನು ಮೊದಲು ಹಿಂದೂ. ಹಿಂದೂವಾಗಿ ನನ್ನ ಒತ್ತಾಯವೂ ರಾಮಮಂದಿರ ಆಗಬೇಕು. 1992ರ ಕರಸೇವೆಯಲ್ಲಿ ನಾನೂ ಭಾಗಿಯಾಗಿದ್ದೆ. 2019 ರಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಖಂಡಿತವಾಗಿ ಆಗಲಿದೆ ಎಂದು ತಿಳಿಸಿದರು.