ಝಾಕಿರ್ ನಾಯಕ್ ಬೆಂಬಲಿಸಿ ಮಂಗಳೂರಿನಲ್ಲಿ ಪ್ರತಿಭಟನೆ
ಮಂಗಳೂರು, ಜುಲೈ 14 : ಇಸ್ಲಾಂ ಪ್ರವಚನಕಾರ, ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಝಾಕಿರ್ ನಾಯಕ್ ವಿರುದ್ಧದ ಪಕ್ಷಪಾತೀಯ ಮಾಧ್ಯಮ ವಿಚಾರಣೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ ಹಲವಾರು ಮುಸ್ಲಿಂ ಸಂಘಟನೆಗಳು ಶುಕ್ರವಾರ ಮಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ.
ಮುಂಬೈನ ಇಸ್ಲಾಂ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯಕ್ ಅವರ ಬಗ್ಗೆ ಮಾಧ್ಯಮಗಳಲ್ಲಿ ನಡೆಸಲಾಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಜುಲೈ 15ರಂದು ಮುಸ್ಲಿಮ್ ಸಂಘಟನೆಗಳ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. [ಝಾಕೀರ್ ನಾಯ್ಕ್ ತಲೆಗೆ ಬೆಲೆ ಕಟ್ಟಿದ ಸಾಧ್ವಿ ಪ್ರಾಚಿ]
ಜಗತ್ತಿನ ಪ್ರತಿಯೊಬ್ಬ ಮುಸ್ಲಿಂನು ಭಯೋತ್ಪಾದಕನಾಗಬೇಕು, ಮುಸ್ಲಿಂ ಮಹಿಳಾ ಆಯಾಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಪ್ರತಿ ಪುರುಷನಿಗೆ ಹಕ್ಕಿದೆ ಮುಂತಾದ ವಿವಾದಾತ್ಮಕ ಹೇಳಿಕೆ ನೀಡಿ ಝಾಕಿರ್ ವಿವಾದಕ್ಕೆ ಗುರಿಯಾಗಿದ್ದರು. ಬಾಂಗ್ಲಾ ದೇಶದಲ್ಲಿ ರಂಜಾನ್ ದಿನ ನಡೆದ ರಕ್ತದೋಕುಳಿಯ ಹಿಂದೆ ಝಾಕಿರ್ ಮಾತಿನ ಪ್ರಚೋದನೆಯಿತ್ತು ಎಂದು ಆರೋಪಿಸಲಾಗಿದೆ.
ಜು.15ರಂದು ಅಪರಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನಾ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಘಟನೆಗಳ ಒಕ್ಕೂಟದ ಸಂಚಾಲಕ ಅತಾವುಲ್ಲಾ ಜೋಕಟ್ಟೆ, ಪುತ್ತೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ, ಪಿಎಫ್ಐನ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಜಮಾ ಅತೇ ಇಸ್ಲಾಮೀ ಹಿಂದ್ನ ಮುಹಮ್ಮದ್ ಕುಂಞಿ, ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ನ ಇಸ್ಮಾಯಿಲ್ ಶಾಫಿ, ದ.ಕ. ಜಿಲ್ಲಾ ಸೆಂಟ್ರಲ್ ಕಮಿಟಿಯ ಹಮೀದ್ ಕಂದಕ್ ಭಾಗವಹಿಸಲಿದ್ದಾರೆ.
ಇವರಲ್ಲದೆ, ಜಮೀಯತುಲ್ ಫಲಾಹ್ನ ಹಾಜಿ ಅಬ್ದುಲ್ಲತೀಫ್, ಯುನಿವೆಫ್ ಕರ್ನಾಟಕದ ರಫೀವುದ್ದೀನ್ ಕುದ್ರೋಳಿ, ದ.ಕ. ಜಿಲ್ಲಾ ಎಸ್ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಕೆ. ಅಶ್ರಫ್, ಮುಸ್ಲಿಂ ಐಕ್ಯತಾ ವೇದಿಕೆಯ ಮುಸ್ತಫಾ ಕೆಂಪಿ, ಮಂಗಳೂರು ಸೆಂಟ್ರಲ್ ಕಮಿಟಿಯ ಅಝೀಝ್ ಕುದ್ರೋಳಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ರಫೀಕ್ ಮಾಸ್ಟರ್, ಮುಸ್ಲಿಂ ಲೇಖಕರ ಸಂಘದ ಉಮರ್ ಯು.ಎಚ್., ಹೋಪ್ ಫೌಂಡೇಶನ್ನ ಸೈಫ್ ಸುಲ್ತಾನ್ ಮತ್ತಿತರರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.