ಸಚಿವ ಯು ಟಿ ಖಾದರ್ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸ
ಮಂಗಳೂರು ಫೆಬ್ರವರಿ 02: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಕ್ಷೇತ್ರ ದಲ್ಲಿ ಅಕ್ರಮ ಮರಳು ಮಾಫಿಯಾ ದಂಧೆ ಮಿತಿ ಮೀರುತ್ತಿದೆ.
ದಿನ ದಿಂದ ದಿನಕ್ಕೆ ಈ ಅಕ್ರಮ ದಂಧೆ ಕೋರರ ಅಟ್ಟಾಹಾಸ ಹೆಚ್ಚಾಗುತ್ತಿದೆ. ಸಚಿವರ ಕ್ಷೇತ್ರದಲ್ಲಿ ಸರ್ಕಾರ ಭರವಸೆಯಿಂದ ಕಾದು ಸುಸ್ತಾದ ಉಳಿಯ ಪಾವೂರು ಎಂಬಲ್ಲಿನ ಜನ ತಮ್ಮ ಗ್ರಾಮ, ಕ್ಕೆ ತಾವೇ ಸೇತುವೆ ನಿರ್ಮಿಸಿದ್ದರು .
ಮಂಗಳೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮಕ್ಕೆ ಒಳಪಡುವ ಉಳಿಯ, ನೇತ್ರಾವತಿ ನದಿಯ ಮಧ್ಯೆ ನೂರು ಎಕರೆಯಷ್ಟು ಇರುವ ಒಂದು ಸಣ್ಣ ದ್ವೀಪ ಪ್ರದೇಶ. ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ.
ದಶಕಗಳಿಂದ ಇಲ್ಲೊಂದು ಸೇತುವೆ ನಿರ್ಮಾಣ ಮಾಡಬೇಕೆಂದು ನಡೆಸಿಕೊಂಡು ಬಂದ ಹೋರಾಟಕ್ಕೆ ಲೆಕ್ಕವಿಲ್ಲ . ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಊರ ಜನರು ತಾವೇ ಹಣ ಸಂಗ್ರಹಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದರು. ಆದರೆ ನಿನ್ನೆ ತಡರಾತ್ರಿ ಅಕ್ರಮ ಮರಳು ದಂಧೆಕೋರರು ಸೇತುವೆಯನ್ನು ಧ್ವಂಸ ಮಾಡಿದ್ದಾರೆ.
ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ದೂರು ನೀಡಿರೋದಕ್ಕೆ ಗ್ರಾಮದ ಜನರನ್ನೇ ಅಕ್ರಮ ದಂಧೆ ಕೋರರು ಟಾರ್ಗೆಟ್ ಮಾಡಿದ್ದಾರೆ. ದುಷ್ಕರ್ಮಿಗಳು ಕಾಲ್ಸೆತುವೆ ಮಾತ್ರವಲ್ಲದೆ. ಅಲ್ಲೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಗ್ರಾಮದ ಜನರ ಆಟೋ,ಬೈಕ್ ಗಳನ್ನು ಧ್ವಂಸ ಮಾಡಿದ್ದಾರೆ.
ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ.ನದಿಯಿಂದ ಅಕ್ರಮ ಮರಳು ತೆಗೆಯೋದರ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದು,ನಿನ್ನೆ ಬೆಳಗ್ಗೆ ಅಧಿಕಾರಿಗಳು 5 ಬೋಟ್ ವಶಪಡಿಸಿಕೊಂಡಿದ್ದರು.ಇದರ ದ್ವೇಷವನ್ನು ಗ್ರಾಮದ ಜನರ ಮೇಲೆ ತೀರಿಸಿರುವ ದಂಧೆಕೋರರು,ಜನರೇ ನಿರ್ಮಿಸಿದ ಸೇತುವೆಯನ್ನು ಧ್ವಂಸ ಮಾಡಿದ್ದಾರೆ .
ಸೇತುವೆ ಪಕ್ಕ ನಿಲ್ಲಿಸಿದ್ದ ಆಟೋ ರಿಕ್ಷಾ ಬೈಕ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ.ಸಚಿವ ಯುಟಿ ಖಾದರ್ ಕ್ಷೇತ್ರದಲ್ಲೇ ಈ ಕೃತ್ಯ ನಡೆದಿದ್ದು ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ,ದಂಧೆಕೋರರು ದಾಳಿ ನಡೆಸಿದ್ದು ಗ್ರಾಮದ ಜನರನ್ನು ಆತಂಕಕ್ಕೆ ದೂಡಿದೆ.