ರೈಲಿನ ನರಕಯಾತನೆಯ ಪ್ರಯಾಣ ಬಿಚ್ಚಿಟ್ಟ ಪ್ರಯಾಣಿಕ
ಮಂಗಳೂರು: ರೈಲಿನಲ್ಲಿ ಕತ್ತಿನಲ್ಲಿದ್ದ ಚೈನೆಳೆಯುವ ಕಳ್ಳರು, ಕುಡುಕರ ಕಾಟ, ರೈಲಿನ ಚೈನೆಳೆದರೂ ದೂರಿದರೂ ಕಿವಿಗೊಡದ ಅಧಿಕಾರಿಗಳು, ಎಲ್ಲೋ ನಡೆದ ಘಟನೆಗೆ ಇನ್ನಾವುದೋ ಸ್ಟೇಷನ್ ನಲ್ಲಿ ದೂರು ನೀಡಲು ಸೂಚನೆ, ದೂರು ದಾಖಲಿಸದ ಪೊಲೀಸರು, ಕಾಲಿಡದ ಟಿಸಿ, ಹೀಗೆ ಅವ್ಯವಸ್ಥೆಯ ಪಾರಮಾವಧಿಯಿಂದಾಗಿ ಪ್ರಯಾಣಿಕರೊಬ್ಬರು ರೈಲಿನಲ್ಲಿ ಕ್ಷಣ ಕ್ಷಣವೂ ಭಯದಿಂದಲೇ ಎರಡೂವರೆ ದಿನಗಳನ್ನು ಕಳೆಯಬೇಕಾಗಿ ಬಂದಿದೆ ಎಂದರೆ ನಂಬುತ್ತೀರಾ?
ಹೌದು, ನಂಬಲೇಬೇಕು. ಹಿಮಾಚಲದ ಮನಾಲಿಕ್ಕೆ ಪ್ರವಾಸ ತೆರಳಿದ್ದ ಮಡಿಕೇರಿ ಮೂಲದ ಪ್ರಯಾಣಿಕರಾದ ಮಣಿ ಮತ್ತು ಅವರ ಮೊಮ್ಮಗಳು ಗಾನಶ್ರೀ ಸಂಬಂಧಿಕರಾದ ಪೂಜಾ, ಪ್ರಶಾಂತ್, ವಸಿನ್, ಶ್ರೀಧರ್ ರೈಲಿನಲ್ಲಿ ಇಂಥಹದ್ದೊಂದು ನರಕ ಯಾತನೆ ಅನುಭವಿಸಿದ್ದಾರೆ.
ಹಿಮಾಚಲದ ಮನಾಲಿ ಪ್ರವಾಸದಿಂದ "ನಿಜಾಮು ದ್ದೀನ್ ತ್ರಿವೇಂಡ್ರಮ್ ಎಕ್ಸ್ಪ್ರೆಸ್" ರೈಲಿನಲ್ಲಿ ಊರಿಗೆ ವಾಪಸಾಗುತ್ತಿದ್ದ ವೇಳೆ ಕಳ್ಳರ ದಾಂಧಲೆಯ ಕಹಿ ಅನುಭವ, ಪ್ರಾಣಾಪಾಯದ ಭಯದಿಂದ ನಡುಗಿ ಇಂದು ಊರು ತಲುಪಿದ ಇವರು ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ರೈಲಲ್ಲಿ ಏನಾಯ್ತು
ಮಡಿಕೇರಿಯ ಮಣಿ ಮತ್ತು ಅವರ ಕುಟುಂಬಸ್ಥರು ಮನಾಲಿ ಪ್ರವಾಸದಿಂದ ಹಿಂದಿರುಗಲು ಜುಲೈ 14 ರಂದು ಕೊಂಕಣ ರೈಲು ಮಾರ್ಗದಲ್ಲಿ ಚಲಿಸುವ "ನಿಜಾಮುದ್ದೀನ್ ತ್ರಿವೆಂಡ್ರಮ್ ಎಕ್ಸ್ಪ್ರೆಸ್" ರೈಲು ಹತ್ತಿದ್ದಾರೆ.
ಜುಲೈ 15 ರಂದು ಬೆಳಗ್ಗೆ ಇವರ ಬೋಗಿಯಲ್ಲಿ ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಕಳವಾಗಿದೆ. ಇದೆ ಬೋಗಿಯಲ್ಲಿ ಯುವಕರ ತಂಡವೊಂದು ಪದೇ ಪದೇ ದಾಂಧಲೆ ಎಬ್ಬಿಸುತ್ತಿತ್ತು. ಇದರಿಂದ ಇವರಿಗೆ ಬಹಳ ತೊಂದರೆಯಾಗುತ್ತಿತ್ತು. ಈ ಬಗ್ಗೆ ಕಂಟ್ರೋಲ್ ರೂಂಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರೈಲು ವಸಾಯಿ ರೋಡ್ ಗೆ ಬರುವಾಗ ಕೀಟಲೆ ಮಾಡುತ್ತಿದ್ದ ಗುಂಪು ಇಳಿದು ಹೋಗಿದೆ. ಇವರೆಲ್ಲ ಒಮ್ಮೆ ನಿಟ್ಟುಸಿರು ಬಿಟ್ಟು ಮಲಗಿದ್ದಾರೆ.
ಮಣಿ ಅವರು ಕಣ್ಣಿಗೆ ಆಗಷ್ಟೇ ಮಂಪರು ಹತ್ತಿತ್ತಷ್ಟೇ. ಅಪರಿಚಿತನೊಬ್ಬ ಮಲಗಿದ್ದ ಮಣಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆಯಲು ಪ್ರಯತ್ನಿಸಿದ್ದಾನೆ. ಕೂಡಲೇ ಎಚ್ಚರಗೊಂಡ ಮಣಿಯವರು ಬೊಬ್ಬೆ ಹಾಕಿದ್ದ ಕಾರಣ ಆತ ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಓಡಿದ್ದಾನೆ. ಚಿನ್ನದ ಸರ ಮಾತ್ರ ಮಣಿಯವರ ಕೈಯಲ್ಲೇ ಉಳಿದಿದೆ.
ಕೂಡಲೇ ಅಪಾಯವನ್ನರಿತ ನಾಗರಶ್ರೀ ಮತ್ತಿತರರು 2 ಬಾರಿ ರೈಲಿನ ಚೈನನ್ನು ಎಳೆದು ರೈಲು ನಿಲ್ಲಿಸುತ್ತಾರೆ. ಆದರೆ ಯಾರೂ ಏನನ್ನೂ ವಿಚಾರಿಸದೆ ಮತ್ತೆ ರೈಲು ಹೋರಡುತ್ತದೆ. ಇದರಿಂದ ನಿರಾಶರಾದ ಇವರು ಮೂರನೇ ಬಾರಿ ರೈಲು ಚೈನ್ ಎಳೆದು ನಿಲ್ಲಿಸುವಾಗ ಓಡಿ ಬಂದ ಅಧಿಕಾರಿ ಚೈನ್ ಎಳೆಯಬೇಡಿ ಎಂದು ಗದರಿಸಿದ್ದಾರೆ.
ಈ ಸಂದರ್ಭ ಇವರು ಸಮಸ್ಯೆಯನ್ನು ಹೇಳಿದಾಗ "ಇದೆಲ್ಲ ರೈಲಿನಲ್ಲಿ ಕಾಮನ್, ಟೆನ್ಷನ್ ಮಾಡ್ಬೇಡಿ. ನನ್ನತ್ರ ಹೇಳಿ ಪ್ರಯೋಜನವಿಲ್ಲ. ಪನ್ವೇಲ್ ನಲ್ಲಿ ನೀವು ದೂರು ಕೊಡಿ," ಎಂದು ತಿಳಿಸಿದ್ದಾರೆ.
ರೈಲು ಪನ್ವೇಲ್ ಸ್ಟೇಷನ್ ಬಂದಾಗ ಆರ್ ಪಿ ಎಫ್ ಸಿಬ್ಬಂದಿ ವಿವರ ಪಡೆದುಕೊಂಡು, "ನಿಮ್ಮೂರಿಗೆ ಹೋಗಿ ದೂರು ನೀಡಿ, ನಾವು ದಾಖಲಿಸುವುದಿಲ್ಲ ಎಂದಿದ್ದಾರೆ. ಬೋಗಿಯಲ್ಲಿ ಸುತ್ತಮುತ್ತ ಮದ್ಯಪಾನ ಮಾಡುತ್ತಿದ್ದಾರೆ. ದಯವಿಟ್ಟು ಸೆಕ್ಯೂರಿಟಿ ಗೌರ್ಡ್ ಕಳಿಸಿ," ಎಂದು ವಿನಂತಿಸಿದರೂ ಅವರು ಕಿವಿಗೆ ಹಾಕಿಕೊಳ್ಳಲೇ ಇಲ್ಲ.
ಪನ್ವೇಲ್ ಸ್ಟೇಷನ್ ಬಂದಾಗ ಮಹಾರಾಷ್ಟ್ರ ಪೋಲೀಸರ ತಂಡವೊಂದು ಬಂದು ಕಾಟಾಚಾರಕ್ಕೆ ಬಿಳಿ ಹಾಳೆಯಲ್ಲಿ ಹೆಸರು, ಪಿಎನ್ಆರ್, ವಿಳಾಸ, ವಿವರ ಪಡೆದುಕೊಂಡು ಹೋದರು. ಆದರೆ ದೂರು ದಾಖಲು ಮಾಡಲಿಲ್ಲ.
ಇದರ ವಿರುದ್ಧ ರೈಲಿನಲ್ಲಿ ಅನ್ಯ ಪ್ರಯಾಣಿಕರು ಮತ್ತು ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದರೂ ಅವರು ಕ್ಯಾರೇ ಅನ್ನಲಿಲ್ಲ ಎಂದು ಪ್ರಯಾಣಿಕರು ನೋವಿನಿಂದ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.