ಮಕ್ಕಳ ಕುಂಚಗಳಲ್ಲಿ ಅರಳಿದ 'ವಿಶ್ವ ಪರಿಸರ ದಿನಾಚರಣೆ'ಯ ಚಿತ್ರಗಳು
ಮಂಗಳೂರು,ಜೂನ್ 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳೂರಿನ ರೇಡಿಯೋ ವಾಹಿನಿಯೊಂದ 15 ವರ್ಷದ ಒಳಗಿನ ಮಕ್ಕಳಿಗೇೂಸ್ಕರ ನಗರದ ಭಾರತ್ ಮಾಲ್ ನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಸುಮಾರು 80ಕ್ಕಿಂತಲೂ ಹೆಚ್ಚಿನ ಮಕ್ಕಳು ಇದರಲ್ಲಿ ಭಾಗವಹಿಸಿದ್ದರು. ಮಕ್ಕಳ ಪರಿಸರ ಜಾಗೃತಿ ಮೂಡಿಸುವ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿರುವುದನ್ನು ಕಂಡು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಕುಳಿತಿರುವ ಮಂಗಗಳು, ಪರಿಸರ ನಾಶ ಬರಗಾಲಕ್ಕೆ ಆಹ್ವಾನ ನಿರೂಪಿಸುವ ಚಿತ್ರ, ಮನುಷ್ಯನಿಂದ ಜೀವ ಭಿಕ್ಷೆ ಬೇಡುತ್ತಿರುವ ವೃಕ್ಷ ದೇವತೆ, ಸುಂದರ ಪರಿಸರದ ರಮಣೀಯ ಚಿತ್ರಗಳು ಮಕ್ಕಳ ಕುಂಚಗಳಲ್ಲಿ ಮೂಡಿ ಬಂತು.
ಇದಲ್ಲದೆ, ಮರಗಳ ನಾಶದಿಂದ ಮನುಷ್ಯ ಉಸಿರಾಟಕ್ಕೆ ತೊಂದರೆಯಾಗುವ ಮುನ್ನುಡಿ, ವಾಯುಮಾಲಿನ್ಯದಿಂದ ಮನುಷ್ಯ ಮತ್ತು ಅರಣ್ಯ, ವನ್ಯಜೀವಿಗಳಿಗೆ ಆಗುವ ತೊಂದರೆ, ಮಾಲಿನ್ಯದಿಂದ ತನ್ನ ಮೂಲ ಸೌಂದರ್ಯ ಕಳೆದುಕೊಳ್ಳುತ್ತಿರುವ ತಾಜ್ ಮಹಲ್, ಜಾಗತಿಕ ತಾಪಮಾನದಿಂದ ಕರಗುತ್ತಿರುವ ಭೂಮಿ, ಕೆರೆಗಳ ಜಾಗದಲ್ಲಿ ನಿರ್ಮಾಣವಾಗುತ್ತಿರುವ ನಗರ... ಹೀಗೆ ಪರಿಸರ ಸೌಂದರ್ಯ ಹೇಳುವ, ಮನುಷ್ಯನಿಂದ ಪ್ರಕೃತಿಗೆ ಹೇಗೆ ತೊಂದರೆಯಾಗಿದೆ ಎಂದು ತೋರುವ ಚಿತ್ರಗಳನ್ನು ಪುಟ್ಟ ಮಕ್ಕಳು ಬಿಡಿಸಿದರು.
ಮನುಷ್ಯ ಪರಿಸರವನ್ನು ವಿನಾಶ ಮಾಡುತ್ತಿದ್ದಾನೆ. ನಮ್ಮ ಅಭಿವೃದ್ಧಿ ಸಂಪತ್ತು, ಬೃಹತ್ ಕೈಗಾರಿಕೆಗಳು ಶಾಶ್ವತವಲ್ಲ. ಪ್ರಕೃತಿಯೇ ಅಜರಾಮರ. ಈ ನಿಟ್ಟಿನಲ್ಲಿ ಪರಿಸರ ಪೋಷಿಸುವ ಕೆಲಸ ಮಾಡಬೇಕಿದೆ ಎಂದು ಆರ್ ಜೆ ಎರೊಲ್ ಗೊನ್ಸಾಲ್ವೆಸ್ ಮಕ್ಕಳಿಗೆ ತಿಳಿಸಿದರು.