ದ.ಕ ಜಿಲ್ಲೆಯಲ್ಲಿ 24 ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಲಭ್ಯ!
ಮಂಗಳೂರು, ಮೇ 3: ಚಾಮರಾಜನಗರ ಆಕ್ಸಿಜನ್ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ರಾಜ್ಯದಲ್ಲಿ ಆಕ್ಸಿಜನ್ ಅಲಭ್ಯತೆಗೆ ಚಾಮರಾಜನಗರ ಘಟನೆಯೇ ಸಾಕ್ಷಿ ಅನ್ನುವ ತರಹ ಬಿಂಬಿತವಾಗಿದೆ.
ಇದರ ನಡುವೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಆಕ್ಸಿಜನ್ ಕೊರತೆಯ ಬಗ್ಗೆ ಆತಂಕ ಎದುರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಂದಿನ 24 ಗಂಟೆಗಳಿಗಾಗವಷ್ಟು ಮಾತ್ರ ಆಕ್ಸಿಜನ್ ಲಭ್ಯ ಎಂದು ಸ್ವತಃ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ-ಸರ್ಕಾರಿ ಆಸ್ಪತ್ರೆ ಸೇರಿದಂತೆ ಒಟ್ಟು 66 ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಗೆ ಈ ಹಿಂದೆ ಕೇರಳದ ಪಾಲಕ್ಕಾಡ್ನಿಂದ ಆಕ್ಸಿಜನ್ ಪೂರೈಕೆಯಾಗುತಿತ್ತು. ಆದರೆ ಈಗ ಪಾಲಕ್ಕಾಡ್ನಿಂದ ಬರುವ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದರು.
ಸದ್ಯ ಪಾಲಕ್ಕಾಡ್ ನಿಂದ ಬರುವ ಆಕ್ಸಿಜನ್ ಅನ್ನು ಬಳ್ಳಾರಿಯಿಂದ ತರಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಮಾಣವನ್ನು ಜಾಸ್ತಿ ಮಾಡಲು ರಾಜ್ಯ ಸರ್ಕಾರದ ಕೋವಿಡ್ ನೋಡಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ದ.ಕ ಜಿಲ್ಲೆಗೆ ವಿವಿಧ ಜಿಲ್ಲೆಗಳಿಂದಲೂ ಕೊರೊನಾ ಸೋಂಕಿತರು ಚಿಕಿತ್ಸೆಗೆಂದು ಆಗಮಿಸುತ್ತಿರುವುದರಿಂದ ಕೆಲವು ಸಮಸ್ಯೆಗಳಾಗುತ್ತಿದೆ. ಒಮ್ಮೆಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾದರೆ ಸಮಸ್ಯೆ ಬಹಳ ಕಠಿಣವಾಗುತ್ತದೆ. ಆಕ್ಸಿಜನ್ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದರು.
ಆದರೆ ಈಗ ಪೂರೈಕೆಯಾಗುತ್ತಿರುವಷ್ಟೇ ಆಕ್ಸಿಜನ್ ಬಂದರೆ ಯಾವುದೇ ಸಮಸ್ಯೆಗಳು ಉಂಟಾಗೋದಿಲ್ಲ, ಸದ್ಯದ ಪರಿಸ್ಥಿತಿಯ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಗಂಟೆಗಳಿಗಾಗುವಷ್ಟು ಆಕ್ಸಿಜನ್ ಲಭ್ಯ ಇದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ.
Recommended Video