ಕಡಬದ ಹೊಸ್ಮಠ ಸೇತುವೆ ಮುಳುಗಡೆ: ವಾಹನ ಸವಾರರಿಗೆ ಸಂಕಷ್ಟ
ಮಂಗಳೂರು, ಜುಲೈ 13: ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಲ್ಲಿ ಇಂದು ಸಹ ಭಾರೀ ಮಳೆ ಸುರಿಯುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ ,ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯ ನದಿ ಪಾತ್ರದ ಪ್ರದೇಶಗಳಲ್ಲಿ ನೆರೆಯ ಪರಿಸ್ಥಿತಿ ಉಂಟಾಗಿದೆ.
ಕರವಳಿಯ ನೇತ್ರಾವತಿ, ಕುಮಾರಧಾರಾ, ಪಯಶ್ವಿನಿ, ಫಲ್ಗುಣಿ ಸೇರಿದಂತೆ ಇನ್ನಿತರ ನದಿಗಳು ಉಕ್ಕಿ ಹರಿಯುತ್ತಿವೆ. ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯಾ ಹೊಳೆಗೆ ಅಡ್ಡಲಾಗಿರುವ ಹೊಸ್ಮಠ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಮುಕ್ತವಾಗಿಲ್ಲ.
ತುಂಬಿ ಹರಿದ ಕುಮಾರಧಾರಾ: ಐದನೇ ಬಾರಿ ಮುಳುಗಿದ ಹೊಸಮಠ ಸೇತುವೆ
ಕಳೆದ 56 ಗಂಟೆಗಳಿಂದ ಕಡಬದ ಹೊಸ್ಮಠ ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.
ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ - ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಂದ್ ಆಗಿರುವ ಕಾರಣ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿರುವ ಭಕ್ತರು ಪರದಾಡುವಂತಾಗಿದೆ. ಹೊಸ್ಮಠ ಸೇತುವೆಯ ಮೇಲೆ ನದಿ ನೀರು ಹರಿಯತೊಡಗಿದ ಕಾರಣ ಕಳೆದ 56 ಗಂಟೆಗಳಿಂದ ಹೊಸ್ಮಠ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಇದೇ ವೇಳೆ, ಸಂಗಮ ಕ್ಷೇತ್ರ ಉಪ್ಪಿನಂಗಡಿ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಸಂಗಮಗೊಂಡು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ನೀರು ನುಗ್ಗಿದೆ.
ಹೇಮಾವತಿ ಜಲಾಶಯದ ನೀರಿನ ಮಟ್ಟ, ಮಳೆ ಪ್ರಮಾಣ ವಿವರ
ಕಳೆದ 60 ವರ್ಷಗಳಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿರುವ ಇಲ್ಲಿಯ ಜನ ಪರಿತಪಿಸುವಂತಾಗಿದೆ. ಈ ಸೇತುವೆಗೆ ಪರ್ಯಾಯ ವ್ಯವಸ್ಥೆ ಮಾಡುವತ್ತ ಗಮನ ಹರಿಸಿಲ್ಲ.ಇಲ್ಲಿಯ ಜನ ಕಾಲ್ನಡಿಗೆಯನ್ನೇ ಪರ್ಯಾಯವಾಗಿಸಿಕೊಂಡಿದ್ದಾರೆ.
ಸ್ಥಳೀಯರು ಮುಳುಗು ಸೇತುವೆಯ ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ಸಂಚರಿಸುತ್ತಾ ತಮ್ಮ ದಿನ ನಿತ್ಯದ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದಾರೆ.