ಬರಗಾಲದಲ್ಲೂ ಪಾಳು ಬಿದ್ದ ಕ್ವಾರಿಯಲ್ಲಿ ಉಕ್ಕಿತು ಜಲಧಾರೆ
ಮಂಜೇಶ್ವರದ ಪೈವಳಿಕೆ ಗ್ರಾ. ಪಂ. ವ್ಯಾಪ್ತಿಯ ಬಾಯಾರು ಪದವಿನಿಂದ ಸುಮಾರು 6 ಕಿ.ಮೀ ದೂರವಿರುವ ಚೆನ್ನಿಮೂಲೆ ಎಂಬಲ್ಲಿ ಪಾಳು ಬಿದ್ದ ಕಲ್ಲಿನ ಕ್ವಾರಿಯೊಂದಿತ್ತು. ಇದರಲ್ಲಿ ಬುಲ್ಡೋಜರ್ ಮೂಲಕ ಮಣ್ಣು ತೆಗೆದಾಗ ನೀರು ಸಿಕ್ಕಿದೆ.
ಮಂಗಳೂರು, ಏಪ್ರಿಲ್ 25: ಬಿರು ಬೇಸಿಗೆಯಲ್ಲಿ ನೀರಿಲ್ಲದೆ ಜನರು ಪರದಾಡುತ್ತಿರುವಾಗ ಪಾಳು ಬಿದ್ದ ಕಲ್ಲಿನ ಕ್ವಾರಿಯಲ್ಲಿ ನೀರು ಉಕ್ಕಿದರೆ ಎಷ್ಟು ಸಂಭ್ರಮವಾಗಬಹುದು? ಇಲ್ಲೂ ಆಗಿದ್ದು ಅದೇ.
ಕಾಸರಗೋಡಿನ ಮಂಜೇಶ್ವರದ ಪೈವಳಿಕೆ ಗ್ರಾ. ಪಂ. ವ್ಯಾಪ್ತಿಯ ಬಾಯಾರು ಪದವಿನಿಂದ ಸುಮಾರು 6 ಕಿ.ಮೀ ದೂರವಿರುವ ಚೆನ್ನಿಮೂಲೆ ಎಂಬಲ್ಲಿ ಪಾಳು ಬಿದ್ದ ಕಲ್ಲಿನ ಕ್ವಾರಿಯೊಂದಿತ್ತು. ಇದರಲ್ಲಿ ಬುಲ್ಡೋಜರ್ ಮೂಲಕ ಮಣ್ಣು ತೆಗೆದಾಗ ನೀರು ಒರತೆ ಕಾಣಿಸಿದೆ. ಇದು ಗ್ರಾಮಸ್ಥರಲ್ಲಿ ಸಂತಸದ ಜತೆಗೆ ಆಚ್ಚರಿಗೂ ಕಾರಣವಾಗಿದೆ.[ಅಂಥಿಂಥ ಉಪ್ಪಿನಕಾಯಿ ನೀನಲ್ಲ, ನಿನ್ನಂಥ ಉಪ್ಪಿನಕಾಯಿ ಇನ್ನಿಲ್ಲ!]
ಮೂರು ವರ್ಷಗಳ ಹಿಂದೆ ಚೆನ್ನಿ ಮೂಲೆಯಲ್ಲಿ ಕೆಂಪು ಕಲ್ಲಿನ ಕ್ವಾರಿಯೊಂದನ್ನು ಆರಂಭಿಸಲಾಗಿತ್ತು. 20 ಅಡಿ ಆಳದಲ್ಲಿ ಮಣ್ಣು ಸಿಕ್ಕ ಸಂದರ್ಭ ಕ್ವಾರೆಯನ್ನು ಅರ್ಧದಲ್ಲಿ ನಿಲ್ಲಿಸಿ ಅಲ್ಲಿಯೇ ಸಮೀಪದ ಇನ್ನೊಂದು ಜಾಗದಲ್ಲಿ ಕೆಂಪು ಕಲ್ಲಿನ ಕ್ವಾರೆ ಆರಂಭಿಸಲಾಗಿತ್ತು.
ಇದೇ ಹಳೇ ಕ್ವಾರಿ ಇದ್ದ ಜಾಗದಲ್ಲಿ ದಿನಗಳ ಹಿಂದೆ ಜೆಸಿಬಿ ಮೂಲಕ ಗುಂಡಿಯನ್ನು ತೋಡಿದಾಗ ನೀರಿನ ಸಣ್ಣ ಒರತೆ ಕಾಣಿಸಿದೆ. ಸುಮಾರು 7ರಿಂದ ಹತ್ತು ಅಡಿ ಆಳವಿರುವ ಗುಂಡಿಯಲ್ಲಿ ನೀರು ಸಿಕ್ಕಿರುವುದು ಸಂತಸ ತಂದಿದೆ ಎನ್ನುತ್ತಾರೆ ಕ್ವಾರಿ ಮಾಲಕ ಮಹಮ್ಮದ್ ಬಂದ್ಯೋಡು.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]
ಬೇಸಿಗೆ ಸಮಯ ಕ್ವಾರಿಯಲ್ಲಿ ದುಡಿಯುವ ಕಾರ್ಮಿಕರಿಗೂ ಬಹಳಷ್ಟು ನೀರಿನ ಅವಶ್ಯಕತೆ ಸೃಷ್ಟಿಯಾಗಿತ್ತು. ಸಮೀಪದ ಜಲನಿಧಿ ಟ್ಯಾಂಕಿನಲ್ಲಿಯೂ ನೀರು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ನೀರು ಸಿಕ್ಕಿದ್ದು, ಕಡಿಯುವ ನೀರು ಮತ್ತು ಅಡುಗೆ ಅವಶ್ಯಕತೆಯನ್ನು ನೆರವೇರಿಸಲು ಸಹಕಾರಿಯಾಗಿದೆ. ಹೆಚ್ಚಿನ ನೀರು ಸಿಕ್ಕಿರುವುದರಿಂದ ಸಮೀಪದ ಮನೆ ಮಂದಿಯೂ ಇಲ್ಲಿಂದಲೇ ನೀರು ಕೊಂಡೊಯ್ಯುತ್ತಿದ್ದಾರೆ.
ಸ್ಥಳೀಯಾಡಳಿತ ಆಸಕ್ತಿ ವಹಿಸಿದಲ್ಲಿ ಸಣ್ಣಗುಂಡಿಯನ್ನು ಬಾವಿ ರೂಪದಲ್ಲಿ ಅಗಲೀಕರಿಸಿ ಅವಶ್ಯಕತೆಯ ನೀರನ್ನು ಪೂರೈಸಬಹುದು ಎನ್ನುತ್ತಾರೆ ಕ್ವಾರಿ ಮಾಲಕರು. ಎತ್ತರದ ಪ್ರದೇಶದಲ್ಲಿರುವ ಈ ಕಲ್ಲಿನ ಕ್ವಾರೆಯಲ್ಲಿ ಹೇಗೆ ನೀರು ಸಿಕ್ಕಿದೆ ಎನ್ನುವುದು ಮಾತ್ರ ಜನರ ಅಚ್ಚರಿಗೆ ಕಾರಣವಾಗಿದೆ !
ನೀರಿನ ಒರತೆ ಕಾಣಿಸಿಕೊಂಡ ಕಲ್ಲಿನ ಕೋರೆಯನ್ನು ಮಳೆಗಾಲದ ಸಂದರ್ಭ ನೀರು ಶೇಖರಿಸುವ ಇಂಗು ಗುಂಡಿಯಾಗಿ ಪರಿವರ್ತಿಸಲಾಗುವುದು. ಸುಮಾರು 20 ಅಡಿ ಆಳವಿರುವ ಹೊಂಡದಲ್ಲಿ ನೀರು ಇಂಗಿಸಿದರೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲುದು ಎನ್ನುತ್ತಾರೆ ಕ್ವಾರಿಯ ಮಾಲಕರು.
ಜಿಲ್ಲೆಯಲ್ಲಿನ ಇತರ ಪಾಳು ಬಿದ್ದ ಕ್ವಾರಿಗಳಲ್ಲಿಯೂ ಇದೇ ರೀತಿ ಹೊರ ರಕ್ಷಣಾ ಗೋಡೆ ನಿರ್ಮಿಸಿ ನೀರು ಶೇಖರಿಸಿ, ಇಂಗಿಸುವ ಕ್ರಮವನ್ನು ಅನುಸರಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ಕ್ಷಾಮ ಇಲ್ಲವಾಗಿಸಬಹುದಾಗಿದೆ.