ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಕಾನೂನು ಬಿಜೆಪಿ ಅವರನ್ನೇ ಕಾಡುತ್ತಿದೆ - ಐವನ್ ಡಿಸೋಜಾ
ಮಂಗಳೂರು, ಏಪ್ರಿಲ್ 24: 'ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು, ಮೋದಿ ಸರ್ಕಾರದ ಕಠಿಣ ಕ್ರಮ. ಸಿದ್ದು ಸರ್ಕಾರಕ್ಕೆ ಈಗಲೂ ನಿದ್ದೆ' ಎಂದು ಬಿಜೆಪಿಯವರು ಇಂದಿನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದಾರೆ. ಆದರೆ ಈ ಕಾನೂನು ಬಿಜೆಪಿಗೇ ಮುಖ್ಯವಾಗಿ ಅನ್ವಯಿಸುತ್ತದೆ. ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆದ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ನೀಡಲು ಕೇಂದ್ರ ಕ್ರಮ ಕೈಗೊಂಡಿದೆ. ಆದರೆ 12 ವರ್ಷಕ್ಕಿಂತ ಮೇಲಿನ ಮಕ್ಕಳ ಗತಿ ಏನು ಎಂದು ಪ್ರಶ್ನಿಸಿದರು. ಅತ್ಯಾಚಾರಕ್ಕೆ ವಯಸ್ಸಿನ ಮಿತಿ ಹೇರಿದ್ದು ಸರಿಯಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಬಿಜೆಪಿ ನಾಯಕರ ದೊಡ್ಡ ಪಟ್ಟಿಯೇ ಇದೆ. ಅವರ ಬಗ್ಗೆ ಬಿಜೆಪಿ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ಈ ಕಾನೂನು ಬಿಜೆಪಿ ನಾಯಕರನ್ನೇ ಈಗ ಕಾಡುತ್ತಿದೆ ಎಂದು ಲೇವಡಿ ಮಾಡಿದರು.
ರಾಹುಲ್ ಎಂದರೆ ಬೆಳಕು. ಮೋದಿ, ಶಾ ಎಂದರೆ ಕತ್ತಲು; ಇದೇ ನಮ್ಮ ಘೋಷವಾಕ್ಯ
ಬಿಜೆಪಿ ಆರಂಭಿಸಿರುವ 'ನಮ್ಮ ಬಿಜೆಪಿ, ನಮ್ಮ ಮನೆ' ಅಭಿಯಾನ ಚುನಾವಣಾ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ. ಯಾವುದೇ ಮನೆಯನ್ನು ಬಿಜೆಪಿಯ ಮನೆ ಎಂದು ಹೇಳುವಂತಿಲ್ಲ. ಈ ಮೂಲಕ ಬಿಜೆಪಿ ಜನರಿಗೆ ಆಮಿಷ ನೀಡಿದಂತಾಗುತ್ತದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡರಿಗೆ ಚುನಾವಣೆಯಲ್ಲಿ ಜನರ ಮತ ಕೇಳುವ ನೈತಿಕತೆ ಇಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದಿಂದ ಹೇಳಿಕೊಳ್ಳುವ ಯಾವುದೇ ಸಾಧನೆ ನಡೆದಿಲ್ಲ. ದಿನದಿಂದ ದಿನಕ್ಕೆ ಅಗತ್ಯ ಬೆಲೆಗಳ ದರ ಗಗನಕ್ಕೆ ಏರುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನಸಾಮಾನ್ಯರು ಬಿಜೆಪಿಯನ್ನು ನಂಬುತ್ತಿಲ್ಲ ಎಂದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ. ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.