ಮದುವೆ ದಿನದಂದೇ ವಧು ಸಾವು ಎಂಬ ಸುದ್ದಿ: ಒಂದು ಸ್ಪಷ್ಟೀಕರಣ
ಮಂಗಳೂರಿನ ವಾಟ್ಸಪ್ ಸುದ್ದಿ ಕುರಿತಂತೆ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಲೇಖನದಲ್ಲಿ ತಪ್ಪಾಗಿ ಬೇರೆಯೊಬ್ಬರ ಚಿತ್ರ ಕಾಣಿಸಿಕೊಂಡಿದ್ದು, ಈ ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸುತ್ತೇವೆ.
ಮಂಗಳೂರು, ಜನವರಿ 30 : 'ಮಂಗಳೂರಿನ ಉಳ್ಳಾಲ ಅಲೇಕಳ ಎಂಬ ಊರಿನ ಯುವಕನ ಮದುವೆ ರದ್ದಾಗಿದೆ. ಎಲ್ಲರೂ ಸಹಕರಿಸಿ' ಎಂಬ ಸುದ್ದಿ ರವಿವಾರ ಬೆಳಗ್ಗೆಯಿಂದ ವಾಟ್ಸಾಪ್ ನಲ್ಲಿ ಮಾಹಿತಿಯೊಂದನ್ನ ಹರಿಯಬಿಡಲಾಗಿತ್ತು.
ಈ ಬಗ್ಗೆ ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಲೇಖನದಲ್ಲಿ ತಪ್ಪಾಗಿ ಬೇರೆಯೊಬ್ಬರ ಚಿತ್ರ ಕಾಣಿಸಿಕೊಂಡಿದ್ದು, ಈ ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸಿ, ಕ್ಷಮೆಯಾಚಿಸುತ್ತೇವೆ. ಇದೊಂಡು ವಾಟ್ಸಪ್ ನಲ್ಲಿ ಹರಿದಾಡಿದ ಸುದ್ದಿಯಾಗಿದ್ದು, ಈ ಬಗ್ಗೆ ವಿವರಣೆ ಮುಂದಿದೆ.
ಅಂದಹಾಗೇ ಈ ಯುವಕನಿಗೆ ಕೃಷ್ಣಾಪುರದ ಚೊಕ್ಕಬೆಟ್ಟು ಎಂಬ ಊರಿನ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತಂತೆ. ಆದರೆ ವಧು ನಿಕಾಹ್ ಗೆ ಇನ್ನೇನು ಕೆಲ ಗಂಟೆಗಳು ಇರುವಾಗಲೇ ಹೃದಯಾಘಾತಕ್ಕೊಳಗಾಗಿ ಆಕೆ ನಿಧನಳಾಗಿದ್ದಾಳೆ. ಹೀಗಾಗಿ ಈ ಮದುವೆ ರದ್ದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದನ್ನ ಹರಿಯಬಿಡಲಾಗಿತ್ತು. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಭಾರೀ ಆತಂಕವನ್ನೂ ಉಂಟು ಮಾಡಿತ್ತು.
ಈ ಬಗ್ಗೆ ನಾವು ಹುಡುಗ, ಹುಡುಗಿಯ ಕಡೆಯವರಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದೆವು.. ಕೊನೆಗೆ ಹುಡುಗನ ಸ್ನೇಹಿತರ ಕಡೆಯವರು ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ರದ್ದಾಗಿದ್ದು ಹೌದು ಎಂದು ಹೇಳಿದರು.
ಅಲ್ಲದೇ ಯಾರೋ ಮದುವೆ ಆಮಂತ್ರಣ ಪತ್ರಿಕೆ, ಹುಡುಗ - ಹುಡುಗಿ ಜೊತೆ ಇರುವ ಫೋಟೋವೊಂದನ್ನು ನಮಗೆ ತಲುಪಿಸಿದರು. ನಾವು ಸುದ್ದಿ ನಿಜ ಎಂದು ತಿಳಿದು ಸುದ್ದಿಯನ್ನು ಪ್ರಕಟಿಸಿದೆವು. ಆದರೆ ಯಾರೋ ಕಿಡಿಗೇಡಿಗಳು ಯಾರದೋ ಫೋಟೋವನ್ನ ನಮಗೆ ರವಾನಿಸಿದ್ದಾರೆ ಎಂಬುದು ಸುದ್ದಿ ಪ್ರಕಟವಾದ ನಂತರ ಗೊತ್ತಾಯಿತು. ಈ ಬಗ್ಗೆ ಓದುಗರು ನಮಗೆ ಮಾಹಿತಿ ನೀಡಿದರು. ತಕ್ಷಣ ನಾವು ಫೋಟೋವನ್ನ ತೆಗೆದು ಹಾಕಿ ಸುದ್ದಿಯನ್ನು ತಿದ್ದುಪಡಿ ಮಾಡಿದೆವು.
ಸಂಜೆ ನಂತರ ಬೇರೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದೇನೆಂದರೆ ವಧು, ವರನನ್ನ ಮದುವೆಯಾಗಲು ತಿರಸ್ಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಹುಡುಗನ ಕಡೆಯವರು ' ವಧು ಸತ್ತಿದ್ದಾಳೆಂದು' ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹರಿಯ ಬಿಡಲಾಯಿತು.
ಈ ಅಂಶವನ್ನು ಸಹ ನಾವು ಇದೇ ಸುದ್ದಿಯಲ್ಲಿ ಸೇರಿಸಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಎಚ್ಚರಿಸಿದ್ದೆವು. ಅಷ್ಟೇ ಅಲ್ಲ, ಈ ಕುರಿತು ಮಾಹಿತಿಯನ್ನು ಪಡೆಯಲು ನಾವು ಇಬ್ಬರು ಮನೆಯವರನ್ನ ಸಂಪರ್ಕಿಸಲು ಪ್ರಯತ್ನಿಸಿದರೂ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿಯನ್ನು ಹಾಗೂ ಆಮಂತ್ರಣ ಪತ್ರಿಕೆಯ ಚಿತ್ರವನ್ನು ಪ್ರಕಟಿಸಿದ್ದೆವು. ಈ ಸುದ್ದಿ ಪ್ರಕಟಿಸಿರುವುದು ಯಾರಿಗಾದರೂ ನೋವುಂಟು ಮಾಡಿದ್ದಲ್ಲಿ ನಾವು ವಿಷಾದಿಸುತ್ತೇವೆ. ಈ ಸುದ್ದಿಯನ್ನು ಪ್ರಕಟಿಸುವುದರ ಹಿಂದೆ ನಮಗೆ ಯಾವುದೇ ದುರುದ್ದೇಶವಿರಲಿಲ್ಲ. ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.