ಓಮ್ನಿ ಆ್ಯಂಬುಲೆನ್ಸ್ ಗಳಿಗೆ ಬಿತ್ತು ರೆಡ್ ಸಿಗ್ನಲ್
ಮಂಗಳೂರು, ಜೂನ್ 9: ರಾಜ್ಯದಲ್ಲಿ ಭರ್ತಿ ಸಾವಿರಕ್ಕೂ ಅಧಿಕ ಓಮ್ನಿ ಆ್ಯಂಬುಲೆನ್ಸ್ ಗಳಿದ್ದು, ಇನ್ನು ಮುಂದೆ ರಸ್ತೆಗೆ ಇಳಿಯುವಂತಿಲ್ಲ. ರಾಜ್ಯದ ಸಾರಿಗೆ ಆಯುಕ್ತರು ಇನ್ನು ಮುಂದೆ ಓಮ್ನಿ ಆ್ಯಂಬುಲೆನ್ಸ್ ಗಳಿಗೆ ಅರ್ಹತಾ ಪತ್ರ ಕೂಡಲೇಬಾರದು ಎಂದು ಖಡಕ್ ಆಗಿ ರಾಜ್ಯದ ಆರ್'ಟಿಓ ಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಈ ಹಿಂದೆ ಅಂದರೆ ಏಪ್ರಿಲ್ 27 ರಂದು ಸಾರಿಗೆ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಓಮ್ನಿ ಆ್ಯಂಬುಲೆನ್ಸ್ ಗಳು ರೋಗಿಗಳನ್ನು ಕರೆದುಕೊಂಡು ಹೋಗಲು ಅರ್ಹವಾಗಿಲ್ಲ. ಈ ಕಾರಣದಿಂದ ಇವುಗಳ ಅರ್ಹತಾ ಪತ್ರವನ್ನು ರದ್ದು ಮಾಡಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಬೆಂಗಳೂರಿನ ಸಾರಿಗೆ ಇಲಾಖೆಯಲ್ಲಿ ಮೇ 10 ರಂದು ಸಭೆ ನಡೆದು ಆ ಬಳಿಕ ಆಯುಕ್ತರು ಓಮ್ನಿ ಆ್ಯಂಬುಲೆನ್ಸ್ ಗಳಿಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಬೇಡಿ ಎನ್ನುವ ಆದೇಶ ಹೊರಡಿಸಿದ್ದಾರೆ.
ಮಂಗಳೂರು ಆರ್'ಟಿಓ ಅಧಿಕಾರಿ ಜಿ.ಎಸ್. ಹೆಗ್ಡೆ ಹೇಳುವಂತೆ, "ಮೇ 10 ರಂದು ಬೆಂಗಳೂರಿನಿಂದ ಇಂತಹ ಆದೇಶ ಬಂದಿದೆ. ಆದರೆ ನಮಗೆ ಆದೇಶದ ಪ್ರತಿ ತಲುಪುವಾಗ ಕೊಂಚ ತಡವಾಗಿದೆ. ಓಮ್ನಿ ಆ್ಯಂಬುಲೆನ್ಸ್ ಸಾಗಿಸುವ ಸಮಯದಲ್ಲಿ ಅವರ ಸಂಬಂಧಿಕರು ಹಾಗೂ ಬೇಕಾದ ತುರ್ತು ಸಾಮಗ್ರಿಗಳನ್ನು ಇಡುವಂತಹ ಸ್ಥಳಾವಕಾಶದ ಕೊರೆತೆಯಿದೆ ಎನ್ನುವ ಆಧಾರದಲ್ಲಿ ಓಮ್ನಿಗೆ ಅರ್ಹತೆ ಪತ್ರವನ್ನು ನೀಡಬೇಡಿ ಎಂದು ಆದೇಶ ಬಂದಿದೆ," ಎಂದು ಹೇಳಿದ್ದಾರೆ.
ದಿಲ್ಲಿಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ತಾಂತ್ರಿಕ ಸಮಿತಿಯ ವರದಿಯ ಆಧಾರದಲ್ಲಿ ಇಂತಹ ಓಮ್ನಿ ಆ್ಯಂಬುಲೆನ್ಸ್ ನಿಷೇಧ ಮಾಡಬೇಕು ಎಂದು ಅರೋಗ್ಯ ಸಚಿವರು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರವಾಗಿ ಸಾರಿಗೆ ಇಲಾಖೆ ಇಂತಹ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಓಮ್ನಿ ಆಂಬುಲೆನ್ಸ್ ಗಳು ರಸ್ತೆಗೆ ಇಳಿಯದಂತೆ ಮಾಡಿದೆ.
ಆದರೆ, "ಎಲ್ಲೆಡೆ ಟೆಂಪೋ ಟ್ರಾವೆಲ್ಲರ್ ಅಥವಾ ಟಾಟಾ ಮಿನಿ ಟ್ರಾವೆಲ್ಲರ್ ಮಾದರಿಯ ಆ್ಯಂಬುಲೆನ್ಸ್ ಹೋಗುವಂತಹ ರಸ್ತೆಗಳು ಕಡಿಮೆ ಇದೆ. ನಗರದ ಒಳ ರಸ್ತೆಗಳಲ್ಲಿ ಇಂತಹ ಓಮ್ನಿ ಆಂಬುಲೆನ್ಸ್ ಗಳೇ ಹೋಗ ಬೇಕಾದ ಪರಿಸ್ಥಿತಿ ಇದೆ," ಎನ್ನುತ್ತಾರೆ ರೋಗಿ ಯೋಗಿಶ್.
"ಏಕಾಏಕಿ ಈ ನಿರ್ಧಾರ ಸರಿಯಲ್ಲ, ನಾವು ಅರ್ಹತಾ ಪತ್ರ ಮಾಡಿಸಲು ಆರ್'ಟಿಓ ಕಚೇರಿಗೆ ಹೋದಾಗ ಈ ವಿಚಾರ ಗಮನಕ್ಕೆ ಬಂತು. ಸ್ವಲ್ಪ ಸಮಯ ಅವಕಾಶ ನೀಡಬೇಕಿತ್ತು," ಎನ್ನುತ್ತಾರೆ ಅಂಬ್ಯುಲೆನ್ಸ್ ಓಡಿಸುತ್ತಿರುವವ ಅಶೋಕ್ ಶೆಟ್ಟಿ.