400 ವರ್ಷ ಹಳೆಯ ಬ್ರಹ್ಮರಥಕ್ಕೆ ಇದು ಕೊನೆಯ ಚಂಪಾಷಷ್ಠಿ
ಮಂಗಳೂರು, ಡಿಸೆಂಬರ್ 12 : ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಈಗ ಚಂಪಾ ಸೃಷ್ಠಿಯ ಸಡಗರ . ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಚಂಪಾಷಷ್ಠಿ ಈ ಬಾರಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಜಾತ್ರಾ ಮಹೋತ್ಸವದ ಕೊನೆಯದಿನ ಬ್ರಹ್ಮರಥಕ್ಕೆ ಇದು ಕೊನೆಯ ಜಾತ್ರಾ ಮಹೋತ್ಸವ . 400 ವರ್ಷ ಹಳೆಯ ಈ ಬ್ರಹ್ಮರಥಕ್ಕೆ ಇದೇ ಕೊನೆಯ ಚಂಪಾಷಷ್ಠಿ.
ಈ ಬಾರಿಯ ಜಾತ್ರೆಯಲ್ಲಿ ಕೊನೆಯ ಬಾರಿಗೆ ಈ ತೇರನ್ನು ಎಳೆಯಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಸಹಸ್ರಾರು ಭಕ್ತರ ಸಮ್ಮುಖ ಶ್ರದ್ಧಾಭಕ್ತಿಯಿಂದ ಎಳೆಯುವ ಬ್ರಹ್ಮರಥಕ್ಕೆ 400ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ತೇರನ್ನು ಈ ಬಾರಿಯ ಜಾತ್ರೆಯಲ್ಲಿ ಕೊನೆಯ ಬಾರಿಗೆ ಎಳೆಯಲಾಗುತ್ತಿದ್ದು, ಬಳಿಕ ಅದು ಇತಿಹಾಸದ ಪುಟಗಳನ್ನು ಸೇರಲಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ 134 ಭಕ್ತರಿಂದ ಎಡೆ ಮಡೆ ಸ್ನಾನ ಸೇವೆ
ಹಳೆಯ ಬ್ರಹ್ಮರಥ ಎಷ್ಟು ಪ್ರಾಚೀನ ಎಂದು ನಿಖರವಾಗಿ ತಿಳಿದಿಲ್ಲ. ದಾಖಲೆಗಳ ಪ್ರಕಾರ 400 ವರ್ಷಗಳ ಹಿಂದೆ ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ ರಥ ನಿರ್ಮಿಸಿ ಕೊಟ್ಟಿದ್ದ ಎಂದು ಹೇಳಲಾಗುತ್ತದೆ. ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳಿಂದ ಈ ರಥದ ರಚನೆಯಾಗಿದೆ. ವಿವಿಧ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವ ವಿಧಿ-ವಿಧಾನ, ನಿಯಮ ಅನುಸರಿಸಿ ರಚಿಸಿದ್ದಾಗಿದೆ.
ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ
ಬ್ರಹ್ಮರಥದಲ್ಲಿ ಪ್ರಪಂಚದ ಎಲ್ಲ ರೀತಿಯ ಜೀವರಾಶಿಗಳ ಚಿತ್ರಗಳ ಕೆತ್ತನೆಯಿದೆ. ಈ ಕೆತ್ತನೆಗಳು ಕಾಲಾಂತರದಲ್ಲಿ ನಶಿಸಿ ಹೋಗಿದ್ದು, ಬಹುತೇಕ ಚಿತ್ರಗಳು ಈಗ ಗೋಚರಿಸುತ್ತಿಲ್ಲ. ರಥದ ಮರದ ಚಕ್ರಗಳು ಇತರೆ ಬಿಡಿಭಾಗಗಳು ಬಿರುಕು ಪಡೆದು ಶಿಥಿಲಾವಸ್ಥೆಯ ಹಂತಕ್ಕೆ ತಲುಪಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಇತಿಹಾಸ ಸೃಷ್ಟಿಸಲು ತೀರ್ಮಾನ
ಕಳೆದ 400 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿದ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದ್ದು, ಇದರ ಬದಲಿಗೆ 1.99 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದೆ. ಈ ಬಾರಿ ಜಾತ್ರೆಯಲ್ಲಿ ಹಳೆಯ ತೇರನ್ನೇ ಎಳೆಯಲಾಗುತ್ತಿದೆ. ಐತಿಹಾಸಿಕ ರಥವನ್ನು ಕೊನೆಯ ಬಾರಿಗೆ ಎಳೆಯುವ ಮೂಲಕ ಇತಿಹಾಸವೊಂದು ಸೃಷ್ಟಿಸಲು ಭಕ್ತರು ತೀರ್ಮಾನಿಸಿದ್ದಾರೆ.
ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರೋತ್ಸವ ಸಂಭ್ರಮ
ಸ್ಯಂದನ ರಥ
ಆರು ಚಕ್ರ ಹೊಂದಿರುವ ಬ್ರಹ್ಮರಥವನ್ನು ಶಾಸ್ತ್ರೀಯವಾಗಿ ಸ್ಯಂದನ ರಥವೆನ್ನುವರು. ಅಡಿಪಾಯ, ಅಡಿಸ್ಥಾನ, ಮಂಟಪ, ಗೋಪುರ, ಶಿಖರ ಇವು ರಥದ ಪ್ರಮುಖ ಭಾಗಗಳು. ಅಡಿಪಾಯದಿಂದ ಮಂಟಪದವರೆಗಿನ ಒಟ್ಟು ಭಾಗ ಸ್ಥಿರ ರಥ. ಚಕ್ರದ ಎತ್ತರ 8 ಅಡಿ 6 ಅಂಗುಲ. ಒಂದು ಚಕ್ರದಲ್ಲಿ 5 ಬೃಹತ್ ಮರದ ತುಂಡುಗಳು ಇವೆ. ರಥದ ಚಕ್ರಗಳ ಅಗಲ 21 ಅಂಗುಲ. ರಥದ ಚಕ್ರದ ದಪ್ಪ 10 ಅಂಗುಲ ಎಂಬ ಲೆಕ್ಕವಿದೆ.
ನೂತನ ಬ್ರಹ್ಮರಥ ಸಿದ್ಧ
ದೇಗುಲದ ಪ್ರಶ್ನೆ ವೇಳೆ ಈಗಿನ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪುತ್ತಿರುವುದರಿಂದ ನೂತನ ರಥ ಹೊಂದುವ ಕುರಿತು ಕಂಡುಬಂದಿತ್ತು. ಅದರಂತೆ ಬಿಡದಿ ರಿಯಾಲಿಟಿ ವೆಂಚರ್ ಫೋರ್ ಗ್ರೂಪ್ ಸಂಸ್ಥೆಯ ಪಾಲುದಾರರಾದ ಮುತ್ತಪ್ಪ ರೈ ಮತ್ತು ಅಜಿತ್ ರೈ ನೂತನ ಬ್ರಹ್ಮರಥ ನಿರ್ಮಿಸಿಕೊಡುತ್ತಿದ್ದಾರೆ. ಕೋಟೇಶ್ವರದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಬ್ರಹ್ಮರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂದಿನ ಮಾರ್ಚ್ ತಿಂಗಳಲ್ಲಿ ನೂತನ ಬ್ರಹ್ಮರಥ ಸಿದ್ಧಗೊಂಡು ದೇಗುಲಕ್ಕೆ ಹಸ್ತಾಂತರಗೊಳ್ಳಲಿದೆ.