ಅಣ್ಣನ ಮಗಳಿಗೆ ಆಸ್ತಿ ಬರೆದು ಆತ್ಮಹತ್ಯೆಗೆ ಶರಣಾದ ಉಳ್ಳಾಲದ ವೃದ್ಧ ದಂಪತಿ
ಮಂಗಳೂರು, ಫೆಬ್ರವರಿ 19:ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಕಾರು ಬೀರಿ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ವೃದ್ಧ ದಂಪತಿ ದೇವರಾಜ್ (74), ವಸಂತಿ (64) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಆಕಾಶವಾಣಿಯ ನಿವೃತ್ತ ಉದ್ಯೋಗಿ ದೇವರಾಜ್ ಗಾಣಿಗ ಹಲವಾರು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಅದಲ್ಲದೇ ಪತ್ನಿ ವಸಂತಿ ಕೂಡ ಅಸೌಖ್ಯದಿಂದ ಬಳಲುತ್ತಿದ್ದು, ಕಳೆದ ರಾತ್ರಿ ನೇಣಿಗೆ ಶರಣಾಗಿದ್ದಾರೆ.
ಕೌಟುಂಬಿಕ ಸಮಸ್ಯೆಗೆ ಬೇಸತ್ತು ವೃದ್ಧ ದಂಪತಿ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ದೇವರಾಜ್ ಹಾಗೂ ವಸಂತಿ ಅವರು ಅಸೌಖ್ಯ ಹಾಗೂ ಮಕ್ಕಳಿಲ್ಲದ ಕೊರಗಿನಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.
ತಮ್ಮ ಆಸ್ತಿಯನ್ನು ವಸಂತಿ ಅವರ ಅಣ್ಣನ ಮಗಳಾದ ಶ್ವೇತಾಳಿಗೆ ನೀಡುವಂತೆ ಹಾಗೂ ತಾವು ಅತ್ಯಂತ ಪ್ರೀತಿಯಿಂದ ಸಾಕಿದ ನಾಯಿ, ಬೆಕ್ಕನ್ನು ನೋಡಿಕೊಳ್ಳುವಂತೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.