ಬಂಟ್ವಾಳದಲ್ಲಿ ಅಪ್ರಾಪ್ತೆಯ ನಿಶ್ಚಿತಾರ್ಥ ತಡೆದ ಅಧಿಕಾರಿಗಳು
ಮಂಗಳೂರು, ಆಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಬಾಲ್ಯ ವಿವಾಹ ಪ್ರಕರಣವೊಂದನ್ನು ತಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲ್ಯ ವಿವಾಹ ನಡೆಸಲು ನಿಶ್ಚಿತಾರ್ಥ ನಡೆಯುತ್ತಿದ್ದ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಮದುವೆಗೆ ಬ್ರೇಕ್ ಹಾಕಿ ಬಾಲಕಿಯನ್ನು ರಕ್ಷಿಸಿದ್ದಾರೆ.
'ಸ್ಪೆಷಲ್ ಛಬ್ಬಿಸ್' ಸಿನಿಮಾ ರೀತಿ ಲೂಟಿ ಮಾಡುತ್ತಿದ್ದ ಖತರ್ ನಾಕ್ ಗ್ಯಾಂಗ್ ತನಿಖೆ ಚುರುಕು
ನಾವೂರಿನಲ್ಲಿ ಬಾಲಕಿಯೊಬ್ಬಳನ್ನು ಮೂಡಬಿದಿರೆಯ ಯುವಕನ ಜೊತೆ ಮದುವೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಾವೂರ ಗ್ರಾಮದ ಪರ್ಲ ಶಾಲಾ ಬಳಿಯ ಮನೆಯೊಂದರಲ್ಲಿ ನಾವೂರದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ನಿಶ್ಚಿತಾರ್ಥ ನಡೆಯುತ್ತಿತ್ತು.
ಈ ಸಂದರ್ಭ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಗಾಯತ್ರಿ ಕಂಬಳಿ, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮನೆಗೆ ಭೇಟಿ ನೀಡಿದರು.
ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಮನೆಯವರಿಗೆ ಎಚ್ಚರಿಕೆ ನೀಡಿದರು. ಬಳಿಕ ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡದಂತೆ ಅಧಿಕಾರಿಗಳು ಬಾಲಕಿಯ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡರು.