ಬೆಳ್ತಂಗಡಿ ಸ್ಯಾಟಲೈಟ್ ಫೋನ್ ಕರೆ ಪ್ರಕರಣ; ಬಂಧನ ವದಂತಿ ತಳ್ಳಿಹಾಕಿದ ಅಧಿಕಾರಿಗಳು
ಮಂಗಳೂರು, ಆಗಸ್ಟ್ 19: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗೋವಿಂದೂರಿಗೆ ಸ್ಯಾಟಲೈಟ್ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಎಲ್ಲೆಲ್ಲೂ ಹರಿದಾಡುತ್ತಿದೆ.
ಸ್ಯಾಟಲೈಟ್ ಫೋನ್ ಕಾಲ್ ಪತ್ತೆ; ಕರಾವಳಿಯಲ್ಲಿ ಎನ್ ಐ ಎ ತನಿಖೆ
ಗೋವಿಂದೂರಿನಲ್ಲಿ ನಿಡ್ಲೆ ಎಂಬಲ್ಲಿ ರವೂಫ್ ಎಂಬುವರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಬಂಧಿತ ರವೂಫ್ ಕೇರಳದಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದಾನೆ ಎಂದು ತಿಳಿಸಲಾಗಿದೆ. ಎನ್ ಐಎ ಅಧಿಕಾರಿಗಳು ರವೂಫ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಮಾಹಿತಿಯನ್ನು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಲು ನಿರಾಕರಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಸ್ಯಾಟಲೈಟ್ ಫೋನ್ ಕರೆ; ತನಿಖೆ ಚುರುಕುಗೊಳಿಸಿದ ಎನ್ ಐಎ
ಸ್ಯಾಟಲೈಟ್ ಫೋನ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರೆ ವಿನಿಮಯದ ಬಗ್ಗೆ "ರಾ" ಎನ್ ಐಎಗೆ ಮಾಹಿತಿ ನೀಡಿತ್ತು. ಈ ನಡುವೆ ತುರಾಯ ಸ್ಯಾಟಲೈಟ್ ಫೋನ್ ನಿಂದ ಬಂದ ಕರೆಯೊಂದು ಟ್ರೇಸ್ ಆದ ಕಾರಣ ರಾಷ್ಟ್ರೀಯ ತನಿಖಾ ದಳ ಬೆಳ್ತಂಗಡಿಯ ನಿಡ್ಲೆ ಹಾಗೂ ಚಿಕ್ಕಮಗಳೂರಿನ ಕಳಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಎನ್ ಐ ಎ ಸಂಪರ್ಕದಲ್ಲಿದ್ದು ತನಿಖೆಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಶಂಕಿತ ವ್ಯಕ್ತಿಯೊಬ್ಬನನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ವದಂತಿ ಹಬ್ಬುತ್ತಿದೆ. ಆದರೆ ಈ ವಿಷಯವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.