ಹಿಂದೂ ಕಾರ್ಯಕರ್ತರಿಂದ ದೇಯಿ ಬೈದ್ಯೆತಿ ವಿಗ್ರಹಕ್ಕೆ ಹಾಲೆರೆದು ಶುದ್ಧೀಕರಣ
ಮಂಗಳೂರು, ಸೆಪ್ಟೆಂಬರ್ 13: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿ ಅವರ ವಿಗ್ರಹ ಅರಣ್ಯ ಇಲಾಖೆಯ ವಿರೋಧದ ನಡುವೆಯೇ ಕ್ಷೀರಾಭಿಷೇಕ ಮೂಲಕ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗಿದೆ.
ಕೋಟಿ-ಚೆನ್ನಯ್ಯರ ತಾಯಿಯ ವಿಗ್ರಹಕ್ಕೆ ಯುವಕನಿಂದ ಅಪಮಾನ, ಭಾರಿ ಆಕ್ರೋಶ
ಕೋಟಿ ಚೆನ್ನಯರ ಜನ್ಮಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ದೇಯಿ ಬೈದ್ಯೆತಿ ಔಷಧ ವನವಿದ್ದು, ಈ ಔಷಧ ವನದಲ್ಲಿ ದೇಯಿ ಬೈದ್ಯೆತಿಯ ವಿಗ್ರಹ ಸ್ಥಾಪಿಸಲಾಗಿತ್ತು.
ಕೆಲವು ದಿನಗಳ ಹಿಂದೆ ಯುವಕನೋರ್ವ ದೇಯಿ ಬೈದ್ಯೆತಿ ಅವರ ವಿಗ್ರಹಕ್ಕೆ ಈಶ್ವರಮಂಗಲದ ಹನೀಫ್ ಎಂಬಾತ ಅಪಮಾನ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ವಿಗ್ರಹ ಶುದ್ದೀಕರಣಕ್ಕೆ ಯತ್ನ
ಈ ಹಿನ್ನಲೆಯಲ್ಲಿ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿ ವಿಗ್ರಹಕ್ಕೆ ಶುದ್ಧೀಕರಣ ಪ್ರಕ್ರಿಯೆ ನಿರ್ವಹಿಸಲು ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ದುರ್ಗಾ ವಾಹಿನಿ ಕಾರ್ಯಕರ್ತರು ನಿರ್ಧರಿಸಿದ್ದರು. ದೇಯಿ ಬೈದ್ಯೆತಿ ವಿಗ್ರಹಕ್ಕೆ ಕ್ಷೀರಾಭಿಷೇಕ ಮೂಲಕ ಶುದ್ಧೀಕರಣ ನಡೆಸಲು ಕಾರ್ಯಕರ್ತರು ಮುಂದಾಗಿದ್ದರು.
ಕಾರ್ಯಕರ್ತರಿಂದ ಪ್ರತಿಭಟನೆ
ಆದರೆ, ಔಷಧವನವನ್ನು ಪ್ರವೇಶಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಧೋರಣೆ ವಿರೋಧಿಸಿ ಔಷಧಿ ವನದ ಹೊರಗೆ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಕ್ಷೀರಾಭಿಷೇಕ
ಅವಕಾಶ ನೀಡದಿದ್ದರೂ ಹಿಂದೂ ಸಂಘಟನೆಯ ಕಾರ್ಯಕರ್ತರು ಗೌಪ್ಯವಾಗಿ ಔಷಧವನ್ನು ಪ್ರವೇಶಿಸಿ, ದೇಯಿ ಬೈದ್ಯೆತಿ ವಿಗ್ರಹಕ್ಕೆ ಕ್ಷೀರಾಭಿಷೇಕ ನೆರವೇರಿಸಿದ್ದಾರೆ. ಈ ಮೂಲಕ ಶುದ್ಧೀಕರಣ ನೆರವೇರಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಯುವಕನ ಬಂಧನ
ಇನ್ನು ಜಿಲ್ಲೆಯ ಬಿಲ್ಲವ ಸಂಘಟನೆಗಳು ಹನೀಫ್ ನ್ನು ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮನವಿ ಸ್ವೀಕರಿಸಿ ಅಪಮಾನ ಮಾಡಿದ ಯುವಕ ಈಶ್ವರಮಂಗಲ ನಿವಾಸಿ ಹನೀಫ್ ನನ್ನು ಬಂಧಿಸಿತ್ತು