ಗಾಯ ಶುಚಿಗೊಳಿಸದೇ ಹೊಲಿಗೆ ಹಾಕಿದ ದಾದಿಯರು: ವ್ಯಕ್ತಿ ಆಸ್ಪತ್ರೆಗೆ ದಾಖಲು
ಮಂಗಳೂರು, ಮೇ 7: ಅಪಘಾತದಲ್ಲಿ ತೀವ್ರ ಗಾಯಗೊಳಗಾದ ವ್ಯಕ್ತಿಯ ಕಾಲಿನ ಗಾಯದಲ್ಲಿದ್ದ ಕಲ್ಲು ಮಣ್ಣನ್ನು ಶುಚಿಗೊಳಿಸದೇ ಆಸ್ಪತ್ರೆಯ ಸಿಬ್ಬಂದಿ ಗಾಯಕ್ಕೆ ಹೊಲಿಗೆ ಹಾಕಿದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ ಪುರುಷೋತ್ತಮ ಎಂಬುವವರಿಗೆ ಎಪ್ರಿಲ್ 25 ರಂದು ಸ್ಕೂಟಿ ಸ್ಕಿಡ್ ಆಗಿ ಮೊಣಕಾಲಿಗೆ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯರು ಕಡಬ ಸಮುದಾಯದ ಕೇಂದ್ರಕ್ಕೆ ತರಲಾಗಿತ್ತು. ಗಾಯ ಪರಿಶೀಲಿಸಿದ ಆಸ್ಪತ್ರೆ ವೈದ್ಯರು ಗಾಯಕ್ಕೆ ಹೊಲಿಗೆ ಹಾಕುವಂತೆ ದಾದಿಯರಿಗೆ ಸೂಚಿಸಿದ್ದರು.ಆದರೆ ದಾದಿಯರು ಗಾಯವನ್ನು ಶುಚಿಗೊಳಿಸದೇ ಹೊಲಿಗೆ ಹಾಕಿ ಪುರುಷೋತ್ತಮ ಅವರನ್ನು ಕಳುಹಿಸಿದ್ದರು.
ಗಾಯ ಉಲ್ಬಣ:
ಇದಾದ ಬಳಿಕ ಒಂದು ವಾರ ಕಳೆದರೂ ಕಾಲಿನ ಗಾಯ ಗುಣವಾಗದೇ ಗಾಯ ಉಲ್ಬಣಗೊಂಡಿದೆ. ಗಾಯವಾಗದ ಭಾಗದಲ್ಲಿ ವಿಪರೀತ ಬಾವು ಮತ್ತು ನೋವು ಕಾಣಿಸಿಕೊಂಡಿದೆ.ಈ ಹಿನ್ನೆಲೆಯಲ್ಲಿ ಪುರುಷೋತ್ತಮ ಕಡಬದ ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಕಾಲಿನ ಎಕ್ಸ್ ರೇ ತೆಗೆಸಿದ್ದರು. ಆರಂಭದಲ್ಲಿ ಮೂಳೆ ಮುರಿತವಾಗಿರಬಹುದು ಎಂದುಕೊಂಡಿದ್ದ ಪುರುಷೋತ್ತಮ ಅವರಿಗೆ ಶಾಕ್ ಕಾದಿತ್ತು..
ಎಕ್ಸರೇ ಪರಿಶೀಲಿಸಿದ ವೈದ್ಯರು ಗಾಯದೊಳಗೆ ಕಲ್ಲು ಮಣ್ಣು ಇರುವ ಬಗ್ಗೆ ಹೇಳಿದ್ದಾರೆ. ಇದರಿಂದ ಆತಂಕಗೊಂಡ ಪುರುಷೋತ್ತಮ ನೆಲ್ಯಾಡಿಯ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಪುರುಷೋತ್ತಮ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು,ಈ ವೇಳೆ ವೈದ್ಯರಿಗೆ ಮಣ್ಣು ಸಹಿತ 14 ಕಲ್ಲು ತುಂಡು ಹೊರತೆಗೆದಿದ್ದಾರೆ. ಗಾಯಕ್ಕೆ ಹೊಲಿಗೆ ಹಾಕುವಾದ ಸರಿಯಾಗಿ ಗಾಯವನ್ನು ಶುಚಿಗೊಳಿಸದೇ ಹೊಲಿಗೆ ಹಾಕಿದ್ದರಿಂದ, ದಾದಿಯರ ನಿರ್ಲಕ್ಷ್ಯ ದಿಂದ ಗಾಯ ಉಲ್ಬಣವಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ..
ಇನ್ನು ಈ ಎಲ್ಲಾ ಘಟನೆ ಯ ಬಗ್ಗೆ ಗಾಯಾಳು ಪುರುಷೋತ್ತಮ ಪ್ರತಿಕ್ರಿಯೆ ನೀಡಿದ್ದು, "ಎಪ್ರಿಲ್ 15 ರಂದು ರಾತ್ರಿ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಸ್ಕೂಟಿ ಸ್ಕಿಡ್ ಆಗಿದೆ. ಈ ವೇಳೆ ಸ್ಥಳೀಯರು ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಗಾಯವಾಗದ ಹಿನ್ನೆಲೆಯಲ್ಲಿ ಸಮುದಾಯ ಕೇಂದ್ರದಲ್ಲೇ ಚಿಕಿತ್ಸೆ ಪಡೆದೆವು. ಆದರೆ, ವಾರ ಕಳೆದಂತೆ ಕಾಲಿನಲ್ಲಿ ನೋವು ವಿಷರೀತವಾಯಿತು. ಎಕ್ಸ್ ರೇ ಪರಿಶೀಲನೆ ವೇಳೆ ಕಾಲಿನಲ್ಲಿ ಕಲ್ಲು ಮಣ್ಣು ಇರುವುದು ಗೊತ್ತಾಯಿತು. ನಮ್ಮೂರ ಆಸ್ಪತ್ರೆ ಅಂತಾ ಧೈರ್ಯದಿಂದ ಆಸ್ಪತ್ರೆಗೆ ಹೋದರೆ ಈ ಗತಿ ಬಂದಿದೆ. ಆಸ್ಪತ್ರೆ ವೇಳೆ ವಿಶ್ವಾಸ ಕಳೆದುಕೊಂಡಿದ್ದೇನೆ,'' ಎಂದು ಹೇಳಿದ್ದಾರೆ.
ಸೂಕ್ತ ಕ್ರಮ:
ಇನ್ನು ಘಟನೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಕಡಬ ತಾಲೂಕು ವೈದ್ಯಾಧಿಕಾರಿಗಳ ಬಳಿ ವರದಿ ಕೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, "ಘಟನೆ ಬಗ್ಗೆ ವರದಿ ಕೇಳಿದ್ದೇನೆ. ಲೋಪ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ'' ಹೇಳಿದ್ದಾರೆ.