ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಸಿದ ಹೆಣ್ಮಕ್ಕಳ ಸಂಖ್ಯೆ!
ಒಂದು ವೇಳೆ ಹೆರಿಗೆ ವೇಳೆ ನಿರ್ಲಕ್ಷ್ಯದಿಂದ ತಾಯಿ ಮಗು ಸಾವನ್ನಪ್ಪಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ನಮ್ಮ 'ಒನ್ಇಂಡಿಯಾ ಕನ್ನಡ'ಕ್ಕೆ ಹೇಳಿಕೆ ನೀಡಿದ್ದಾರೆ.
ಮಂಗಳೂರು, ಫೆಬ್ರವರಿ 18 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಖ್ಯೆ ಅನುಪಾತದಲ್ಲಿ ಏರಿಳಿತವಾಗಿದೆ. ಪುರುಷರಿಗಿಂತ ಹೆಣ್ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಪ್ರಸ್ತುತ ಜನನ ಪ್ರಮಾಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,000 ಪುರುಷರ ಅನುಪಾತಕ್ಕೆ ಹೆಣ್ಣುಮಕ್ಕಳ ಅನುಪಾತ ಇರುವುದು ಕೇವಲ 948 ಮಾತ್ರ.
ದ.ಕ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇದೆ. ಆದರೂ ಹೆರಿಗೆ ವೇಳೆ ಅಥವಾ ಹೆರಿಗೆಯ ನಂತರ ತಾಯಿ ಸಾವಿನಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಸಂಭವಿಸುತ್ತಿವೆ. ಈ ಹಿಂದೆ ಹಲವು ಜಿಲ್ಲಾಧಿಕಾರಿಗಳ ಸಭೆಗಳಲ್ಲಿ ಗಂಭೀರ ಹೆರಿಗೆ ಪ್ರಕರಣಗಳನ್ನು ನಿಭಾಯಿಸುವ ಬಗ್ಗೆ ಹಲವು ಸೂಚನೆಗಳನ್ನು ನೀಡಲಾಗಿತ್ತು. ಆದರೂ ಹೆರಿಗೆ ವೇಳೆ ಸಾವನ್ನಪ್ಪುವ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ.
ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಸ್ವರೂಪದ ಹೆರಿಗೆ ನಿಭಾಯಿಸುವ ಸಾಮರ್ಥ್ಯ ಇಲ್ಲವೆಂದರೆ, ಸಾಕಷ್ಟು ಮುಂಚೆಯೇ ಉನ್ನತ ಆಸ್ಪತ್ರೆಗಳಿಗೆ ಅಥವಾ ಖಾಸಗಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಗರ್ಭಿಣಿಯರನ್ನ ಚಿಕಿತ್ಸೆಗೆ ಕಳುಹಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಗೊತ್ತಿಲ್ಲ. ಅಷ್ಟೇ ಅಲ್ಲ, ಈ ಕುರಿತು ಮಾಹಿತಿ ನೀಡುವ ಅಭಿಯಾನ ಇರಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಹ ಮಾಹಿತಿ ನೀಡಲಾಗುತ್ತಿಲ್ಲ. ಹೀಗಾಗಿ ಹೆಚ್ಚಿನವರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. [ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗದು]
ಗಂಭೀರ ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ ಆಸ್ಪತ್ರೆಯವರೇ ಸೂಕ್ತ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಹೇಳಿಕೆ ನೀಡಿದ ಜಿಲ್ಲಾಧಿಕಾರಿ ಡಾ. ಜಗದೀಶ್, 'ಈ ಎಲ್ಲಾ ಸೌಲಭ್ಯ ಇರುವುದು ನಿಜ. ಆದರೂ ಹೆರಿಗೆ ವೇಳೆ ಸಾವಿನ ಪ್ರಕರಣ ನಡೆಯುತ್ತಿರುವುದು ಖೇದಕರ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಸೌಲಭ್ಯಗಳನ್ನು ಕೊಡದೇ ರೋಗಿಯ ಕುಟುಂಬದವರನ್ನು ಅಲೆದಾಡಿಸಬಾರದು ಎಂದು ಸೂಚನೆ ನೀಡಿದ್ದೇನೆ' ಅಂದರು.
2016ರ ನವೆಂಬರ್ 25ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಫಾತಿಮಾ ಜೋಹರ ಎಂಬ ಮಹಿಳೆ ಮಗುವಿಗೆ ಜನ್ಮವಿತ್ತು ಬಳಿಕ ರಕ್ತಸ್ರಾವವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯ ಇದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ತಕ್ಷಣವೇ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. [ಗರ್ಭಿಣಿ ಮಹಿಳೆಗೆ ಮಿಡಿದ ಪೊಲೀಸ್ ಹೃದಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ]
ಒಂದು ವೇಳೆ ಹೆರಿಗೆ ವೇಳೆ ನಿರ್ಲಕ್ಷ್ಯದಿಂದ ತಾಯಿ ಮಗು ಸಾವನ್ನಪ್ಪಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ನಮ್ಮ 'ಒನ್ಇಂಡಿಯಾ ಕನ್ನಡ'ಕ್ಕೆ ಹೇಳಿಕೆ ನೀಡಿದ್ದಾರೆ.
ಹೆಣ್ಮಕ್ಕಳ ಕುರಿತಾದ ಕೀಳು ಭಾವನೆಯೇ ಈ ಎಲ್ಲಾ ಆವಾಂತರಕ್ಕೆ ಕಾರಣ. ಅಷ್ಟೇ ಅಲ್ಲದೆ ಪ್ರಸವಪೂರ್ವ ಲಿಂಗ ಪತ್ತೆ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಬೇಕು. ಹಾಲಿ ಸ್ಕ್ಯಾನಿಂಗ್ ಕೇಂದ್ರಗಳು, ಆಸ್ಪತ್ರೆಗಳಲ್ಲಿರುವ ಸ್ಕ್ಯಾನಿಂಗ್ ಯಂತ್ರಗಳ ಕಾರ್ಯಚಟವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು. ಜಿಲ್ಲೆಯಲ್ಲಿ ಯಾವುದೇ ಹೊಸ ಸ್ಕ್ಯಾನಿಂಗ್ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸದಂತೆ ತಡೆಯಬೇಕು. ಹೀಗಾದಲ್ಲಿ ಮಾತ್ರ ಹೆಣ್ಮಕ್ಕಳ ಸಂಖ್ಯೆಯನ್ನು ಕಾಪಾಡಬಹುದು..