ವಾಟ್ಸಪ್ ಮೆಸೇಜ್ ಮೂಲಕ ಹಣ ಕೀಳ್ತಾರೆ ಹ್ಯಾಕರ್ಗಳು!
ಮಂಗಳೂರು, ಡಿಸೆಂಬರ್ 03; ದಿನದಿಂದ ದಿನಕ್ಕೆ ತಂತ್ರಜ್ಞಾನ ಬದಲಾದಂತೆ ಸೈಬರ್ ಕ್ರೈಂ ಅಪರಾಧಗಳ ವಿಧಾನ ಸಹ ಬದಲಾಗುತ್ತಿದೆ. ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಸಂದೇಶ ಕಳಿಸಿ ಹಣ ಎಗರಿಸುವ ಐಡಿಯಾದ ಬಳಿಕ ಇದೀಗ ವಾಟ್ಸಪ್ಗೂ ಹ್ಯಾಕರ್ಸ್ ಕಾಲಿಟ್ಟಿದ್ದಾರೆ. ಮಂಗಳೂರಿನ ಪ್ರಸಿದ್ದ ಕೈಗಾರಿಕೆಯೊಂದರ ಇ-ಮೇಲ್ ಅಕೌಂಟ್ ಅನ್ನು ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ.
ಸಾಮಾಜಿಕ ತಾಣ ಫೇಸ್ಬುಕ್ನಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ವ್ಯಕ್ತಿಯ ಸ್ನೇಹಿತರಲ್ಲಿ ಹಣಕ್ಕೆ ಬೇಡಿಕೆ ಇಡುವ ಐಡಿಯಾ ಈಗ ಹಳೆದಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಸೈಬರ್ ಅಪರಾಧಿಗಳು ನಕಲಿ ವಾಟ್ಸಪ್ ಅಕೌಂಟ್ ಕ್ರಿಯೇಟ್ ಮಾಡಿ ಹಣ ದೋಚುವ ಕೃತ್ಯ ನಡೆಸುತ್ತಿದ್ದಾರೆ.
ಸೈಬರ್ ವಂಚನೆಗೆ ಒಳಗಾದ ಕೂಡ್ಲೇ ಈ ಪ್ಲಾನ್ ಬಳಿಸಿ ಮೋಸದಿಂದ ಬಚಾವ್ ಆಗಿ
ಪ್ರಾರಂಭದಲ್ಲಿ ವಾಟ್ಸಪ್ ಗ್ರೂಪ್ಗೆ ಸೇರಿಕೊಳ್ಳುವ ಈ ಖದೀಮರು ಅದರಲ್ಲಿ ಪ್ರೊಫೈಲ್ ಪಿಕ್ಚರ್ಸ್ ಕಾಣುವವರ ಫೋಟೋ ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಆ ಫೋಟೋವನ್ನು ತಮ್ಮ ಪ್ರೊಫೈಲ್ಗೆ ಬಳಸಿಕೊಂಡು ಆ ವ್ಯಕ್ತಿಯ ಸ್ನೇಹಿತರ ನಂಬರ್ಗಳಿಗೆ ಮೇಸೆಜ್ ಮಾಡುತ್ತಾರೆ. ಇದು ನನ್ನ ಎರಡನೇ ನಂಬರ್ ಎಂದು ಮಧ್ಯರಾತ್ರಿ ಮೇಸೆಜ್ ಮಾಡುವ ಇವರು ಆ ಬಳಿಕ ನಂಬಿಕೆ ಗಳಿಸಿಕೊಂಡು ತುರ್ತು ಹಣ ಕಳಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಇದನ್ನು ನಂಬಿ ಹಣವನ್ನು ಕಳೆದುಕೊಂಡವರು ಅನೇಕರಿದ್ದಾರೆ.
ಹ್ಯಾಕರ್ಗಳ ಈ ಮೋಸದ ಬಗ್ಗೆ ಮಂಗಳೂರಿನ ಫ್ರೋಫೆಸರ್, ಖ್ಯಾತ ಸೈಬರ್ ತಜ್ಞ ಡಾ. ಅನಂತ್ ಫ್ರಭು ಮಾತನಾಡಿದ್ದಾರೆ. "ಹ್ಯಾಕರ್ಗಳ ಈ ಮೋಸಕ್ಕೆ ಹೆಚ್ಚು ಶ್ರಮ ಇಲ್ಲ. ನೇರವಾಗಿ ಫೀಲ್ಡ್ಗೆ ಹೋಗಿ ಹಣ ಲಪಟಾಯಿಸಬೇಕಂತಿಲ್ಲ. ಮನೆಯಲ್ಲೇ ಕೂತು ಅಪರಾಧಗಳನ್ನು ಮಾಡುತ್ತಾರೆ. ಮೊದಲು ಫೇಸ್ಬುಕ್ನಲ್ಲಿ ಫೇಕ್ ಫ್ರೊಫೈಲ್ ಮಾಡಿ ಹಣ ಕೇಳುತ್ತಿದ್ದ ಹ್ಯಾಕರ್ಗಳು ಈಗ ವಾಟ್ಸಪ್ಗೆ ಇಳಿದಿದ್ದಾರೆ" ಎಂದು ಹೇಳಿದ್ದಾರೆ.
ಬಿಟ್ಕಾಯಿನ್ ಹ್ಯಾಕಿಂಗ್ನಲ್ಲಿ ಶ್ರೀಕಿ ಪಾತ್ರವಿದೆ ಎಂದ ಸೈಬರ್ ಐಡಿ ಟೆಕ್ ಲ್ಯಾಬ್!
"ಮೊದಲು ವಾಟ್ಸಪ್ನಲ್ಲಿ ಫೇಕ್ ನಂಬರ್ ಮೂಲಕ ಖಾತೆ ತೆಗೆಯುತ್ತಾರೆ. ಬೇರೆ ಬೇರೆ ಗ್ರೂಪ್ಗಳಿಗೆ ಲಿಂಕ್ ಮೂಲಕ ಆ್ಯಡ್ ಆಗುತ್ತಾರೆ. ಆ ಬಳಿಕ ಆ ಗ್ರೂಪ್ನಲ್ಲಿರುವ ಹೈ ಪ್ರೊಫೈಲ್ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಪೊಲೀಸ್ ಅಧಿಕಾರಿಗಳು ಅಥವಾ ಉನ್ನತ ಸ್ಥಾನದಲ್ಲಿರುವವರಿದ್ದರೆ ಅವರ ಯೂನಿಫಾರ್ಮ್ ನಲ್ಲಿದ್ದ ಫೋಟೋವನ್ನು ತೆಗೆದು ತಮ್ಮ ನಂಬರ್ನ ಪ್ರೊಫೈಲ್ ಫೋಟೋವಾಗಿ ಹಾಕಿಕೊಳ್ಳುತ್ತಾರೆ" ಎಂದು ವಿವರಿಸಿದ್ದಾರೆ.
ಜಾಹೀರಾತು ನೋಡಿ ಹಣ ಗಳಿಸಿ ಎಂಬ ಹೊಸ ಸೈಬರ್ ಸ್ಕ್ಯಾಮ್ ಜಾಲ: ಹುಷಾರ್!
"ರಾತ್ರಿ ನಂಬರ್ನಿಂದ ಗ್ರೂಪ್ನಿಂದ ಹಲವು ಮಂದಿಗೆ ಮೆಸೇಜ್ ಮಾಡಿ ಇದು ನನ್ನ ಪರ್ಸನಲ್ ನಂಬರ್ ಸೇವ್ ಮಾಡಿಕೊಳ್ಳಿ ಅಂತಾ ಕೇಳಿಕೊಳ್ಳುತ್ತಾರೆ. ಬಳಿಕ ಸ್ವಲ್ಪ ಹಣ ಬೇಕಾಗಿತ್ತು ಅಂತಾ ಹೇಳಿ ಅನಾಯಾಸವಾಗಿ ಹಣ ಲಪಟಾಯಿಸುತ್ತಾರೆ. ರಾತ್ರಿ ಹೊತ್ತು ಮೆಸೇಜ್ ಮಾಡೋದರಿಂದ ಮೂಲ ವ್ಯಕ್ತಿಗೆ ಆ ಸಂದರ್ಭದಲ್ಲಿ ಕಾಲ್ ಮಾಡಿ ಆ ನಂಬರ್ ನಿಮ್ಮದೇನಾ? ಎಂಬುವುದಾಗಿ ಯಾರೂ ಕೇಳಲ್ಲ ಎಂಬ ಲಾಜಿಕ್ ಅನ್ನು ಹ್ಯಾಕರ್ ಗಳು ಅರ್ಥಮಾಡಿಕೊಂಡಿದ್ದಾರೆ. ವಾಟ್ಸಪ್ ಕೂಡಾ ಯಾರು ಯಾರಿಗೆ ಬೇಕಾದರೂ ಮೆಸೇಜ್ ಮಾಡಬಹುದು ಯಾರ ಪ್ರೊಫೈಲ್ ಫೋಟೋ ನೂ ಕದಿಯಲು ಅವಕಾಶ ನೀಡಿದೆ. ಹಾಗಾಗಿ ಬೇರೆ ನಂಬರ್ನಿಂದ ಬಂದ ಮೆಸೇಜ್ಗೆ ಉತ್ತರಿಸುವ ಮುನ್ನ ಜನ ಯೋಚಿಸಬೇಕು" ಎಂದು ಅನಂತ್ ಪ್ರಭು ಮನವಿ ಮಾಡಿದ್ದಾರೆ.
ಇನ್ನೂ ಮುಂದುವರಿದು ಮಂಗಳೂರಿನಲ್ಲಿ ಪ್ರಸಿದ್ದ ಎಂ.ಆರ್.ಪಿ.ಎಲ್ ಸಂಸ್ಥೆಯ ನಿರ್ದೇಶಕರ ಇಮೇಲ್ ಅನ್ನು ಸೈಬರ್ ಕ್ರಿಮಿನಲ್ಸ್ ಹ್ಯಾಕ್ ಮಾಡಿದ್ದಾರೆ. ಆ ಬಳಿಕ ಇಮೇಲ್ನಿಂದ ಸಂಸ್ಥೆಯ 350 ಸಿಬ್ಬಂದಿಗಳಿಗೆ ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುವಂತೆ ಸಂದೇಶ ಕಳುಹಿಸಲಾಗಿದೆ. ಇದನ್ನು ನಂಬಿದ 141 ಮಂದಿ ತಮ್ಮ ವೈಯಕ್ತಿಯ ಮಾಹಿತಿ ನೀಡಿದ್ದಾರೆ.
ಆ ಬಳಿಕ ಆ ವೈಯಕ್ತಿಕ ಮಾಹಿತಿಯಲ್ಲಿನ ಮೊಬೈಲ್ ನಂಬರ್ಗಳಿಗೆ ಸಂಸ್ಥೆಯ ನಿರ್ದೇಶಕರ ಫೋಟೋ ಬಳಸಿದ ಫೇಕ್ ವಾಟ್ಸಪ್ ಪ್ರೊಫೈಲ್ನಿಂದ ಮೇಸೆಜ್ ಮಾಡಿದ್ದಾರೆ. ಆದರೆ ಈ ವಿಚಾರವನ್ನು ಸಿಬ್ಬಂದಿಯೊಬ್ಬರು ಕ್ರಾಸ್ ಚೆಕ್ ಮಾಡಿದಾಗ ಇ-ಮೇಲ್ ಅಕೌಂಟ್ ಹ್ಯಾಕ್ ಆಗಿರೋದು ಗೊತ್ತಾಗಿದೆ. ಸೈಬರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲುಗೊಂಡಿದ್ದು ಸೈಬರ್ ಕ್ರಿಮಿನಲ್ ದೆಹಲಿಯಲ್ಲಿ ಕೂತು ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಫೇಸ್ಬುಕ್ ಫೇಕ್ ಪ್ರೊಫೈಲ್ ಬಗ್ಗೆ ಜನ ಜಾಗೃತಗೊಂಡಿದ್ದಾರೆ. ಆದರೆ ಫೇಕ್ ವಾಟ್ಸಪ್ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದಿರುವುದರಿಂದ ಜನ ಮೋಸ ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಜನತೆ ಈ ಬಗ್ಗೆ ಎಚ್ಚರಿಕೆಯಿಂದ ಇದ್ದು ಹಣ ಕಳುಹಿಸುವ ಮುನ್ನ ಕರೆ ಮಾಡಿಕೊಂಡು ಸತ್ಯಶೋಧನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.