ವಲ್ಡ್ ಹೆಲ್ತ್ ಆರ್ಗನೈಝೇಷನ್ ಡೈರೆಕ್ಟರ್ ಎಂದು ತಿರುಗುತ್ತಿದ್ದ ಆ ಶಂಕಿತ ಕಾಶ್ಮೀರಿ ಯಾರು?
ಮಂಗಳೂರು ಆಗಸ್ಟ್ 24: ಮಂಗಳೂರಿನಲ್ಲಿ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ಶಂಕಿತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಜಾಬಿನ ಬಲ್ಜೀಂದರ್ ಸಿಂಗ್ (48), ಕಾಶ್ಮೀರದ ಗಂಜೀಪುರ ಗ್ರಾಮದ ಶೌಖತ್ ಅಹಮ್ಮದ್ ಲೋನ್ ಎಂದು ಗುರುತಿಸಲಾಗಿದೆ.
ಬಂಧಿತರು ತಮ್ಮ ಕಾರಿಗೆ 'ವಲ್ಡ್ ಹೆಲ್ತ್ ಆರ್ಗನೈಝೇಷನ್' ಎಂದು ಫಲಕ ಹಾಕಿಕೊಂಡು ನಗರದಲ್ಲಿ ಅನುಮಾನಾಸ್ಪದವಾಗಿ ಸುತ್ತುತ್ತಿದ್ದರು ಎಂದು ಹೇಳಲಾಗಿದೆ. ಬಂಧಿತರಲ್ಲಿದ್ದ ಗುರುತಿನ ಚೀಟಿ ಮತ್ತು ಇನ್ನಿತರ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದು, ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ವಂಚಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೇ ಆಗಸ್ಟ್ 17ರಂದು ಮಂಗಳೂರು ನಗರ ನಿಸ್ತಂತು ಕೊಠಡಿಗೆ ಸಂದೇಶವೊಂದನ್ನು ರವಾನಿಸಲಾಗಿತ್ತು. ನಗರದಲ್ಲಿ 'ವಲ್ಡ್ ಹೆಲ್ತ್ ಆರ್ಗನೈಝೇಷನ್ ಡೈರೇಕ್ಟರ್ ಎಂಬ ನಾಮಫಲಕ ಅಳವಡಿಸಿ ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗುತ್ತಿದ್ದು, ಅದನ್ನು ತಡೆದು ವಿಚಾರಣೆ ನಡೆಸುವಂತೆ ತಿಳಿಸಲಾಗಿತ್ತು.
ಅದರಂತೆ ಪಂಜಾಬ್ ರಾಜ್ಯದ ಚಾಕೊಲೇಟ್ ಬಣ್ಣದ ಕಾರಿಗೆ ಭಾರತ ಸರಕಾರ ಎಂದು ಸ್ಟಿಕ್ಕರ್ ಅಂಟಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರನ್ನು ಟ್ರಾಫಿಕ್ ಪೊಲೀಸರು ನಗರದ ಲಾಲ್ ಬಾಗ್ ಬಳಿ ತಡೆದು ವಿಚಾರಣೆ ನಡೆಸಿದ್ದಾರೆ. ಸಂಶಯ ಕಂಡುಬಂದಿದ್ದರಿಂದ ಅವರನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಕಾರು ಚಾಲಕ ತನ್ನನ್ನು ಬಲ್ಜೀಂದರ್ ಸಿಂಗ್ (48) ಎಂದು ಗುರುತಿಸಿಕೊಂಡಿದ್ದಾನೆ. ಇನ್ನೊಬ್ಬ ತನ್ನನ್ನು ಡಾ ಬಸೀತ್ ಷಾ, 'ವಲ್ಡ್ ಹೆಲ್ತ್ ಆರ್ಗನೈಝೇಷನ್ ಡೈರೆಕ್ಟರ್' ಎಂದು ಹೇಳಿದ್ದಾನೆ. ಅನುಮಾನಗೊಂಡ ಪೊಲೀಸರು ಈ ಕುರಿತು ತೀವ್ರ ವಿಚಾರಣೆ ನಡೆಸಿದಾಗ ಇಬ್ಬರೂ ಸುಳ್ಳು ಹೇಳುತ್ತಿರುವುದು ತಿಳಿದುಬಂದಿದೆ.
ಮಂಗಳೂರಿನಲ್ಲಿ ಶಂಕಿತ ಕಾಶ್ಮೀರಿ ತೀವ್ರ ವಿಚಾರಣೆ?
ಪೊಲೀಸರು ಕಾರನ್ನು ಶೋಧಿಸಿದಾಗ ಕಾರಿನಲ್ಲಿ ಡಾ.ಬಸೀತ್ ಷಾ ನ ವಶದಲ್ಲಿ WORLD HEALTH ORGANIZATION, Dr. Basit Sha, MBBS/MS/MCH - Gold Medalist, Director Reg. No. MCI/2013/3184 ಎಂಬುದಾಗಿ ಇಗ್ಲೀಷಿನಲ್ಲಿ ಮುದ್ರಿಸಲ್ಪಟ್ಟ ಐಡಿ ಕಾರ್ಡ್ ಮತ್ತು ಇನ್ನಿತರ ದಾಖಲೆ ಪತ್ರಗಳು ದೊರೆತಿವೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬಸೀತ್ ಷಾ, ತನ್ನ ಹೆಸರು ಶೌಖತ್ ಅಹಮ್ಮದ್ ಲೋನ್, ತಾನು ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನಕಲಿ ದಾಖಲಾತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತ ಕಾಶ್ಮೀರದ ಕುರಾ ಜಿಲ್ಲೆ, ಗಂಜೀಪುರ ಗ್ರಾಮ ನಿವಾಸಿ, ಬಟಿವಿನ ತಾಲೂಕು, ವಕುರಾ ಜಿಲ್ಲೆಯ ನಿವಾಸಿ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಬಂಧಿತ ಆರೋಪಿ ಶೌಖತ್ ಅಹಮ್ಮದ್ ಲೋನ್ ವಿರುದ್ಧ ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ 420, 406, 419 ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡು ಇಲ್ಲಿ ಸುತ್ತಾಡಿಕೊಂಡು ವಂಚನೆ ನಡೆಸುತ್ತಿರುವುದು ವಿಚಾರಣೆ ಸಮಯ ತಿಳಿದು ಬಂದಿದೆ.
ಡಾ ಬಸೀತ್ ಷಾ ಎಂಬ ಹೆಸರಿನಲ್ಲಿ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಹೆಸರು ನೊಂದಾಯಿಸಿ ಮದುವೆ ಆಗುವುದಾಗಿ ನಂಬಿಸಿ ಹಲವಾರು ಮಹಿಳೆಯರನ್ನು ಗೋವಾ, ಬೆಳಗಾವಿ, ಮುಂಬೈ, ಜಾರ್ಖಂಡ್, ಜೈಪುರ, ಕೊಲ್ಕಾತ್ತಾ, ಛತ್ತೀಸ್ ಗಡ, ಅಮೃತ್ ಸರ್, ಹೈದರಾಬಾದ್ ಮುಂತಾದ ಕಡೆಗಳಲ್ಲಿ ವಂಚಿಸಿದ್ದಾನೆಂದು ತಿಳಿದು ಬಂದಿದೆ. ಅದರಂತೆ ಮ್ಯಾಟ್ರಿಮೋನಿಯಲ್ ಮೂಲಕ ಮಂಗಳೂರಿನಲ್ಲಿ ಹೆಸರು ನೋಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದಾಗಿ ಆತ ತಿಳಿಸಿದ್ದಾನೆ. ಈ ಬಗ್ಗೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಆರೋಪಿ ಶೌಖತ್ ಅಹಮ್ಮದ್ ಲೋನ್ ಇತರ ದೇಶದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಬಗ್ಗೆ ತನಿಖೆಯಿಂದ ತಿಳಿದು ಬಂದಿರುವುದಾಗಿ ಮಂಗಳೂರು ಪೊಲೀಸ್ ಕಮೀಷನರ್ ಡಾ ಹರ್ಷ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು, ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ವಿಚಾರಣಾ ಹಂತದಲ್ಲಿರುವ ಕಾರಣ ಈ ಸಂದರ್ಭದಲ್ಲಿ ರಾಷ್ಟ್ರೀಯ ಭಧ್ರತೆಯ ದೃಷ್ಟಿಯಿಂದ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.