ಕಾಲೇಜಿನ ವಿರುದ್ಧವೇ ಪತ್ರಿಕಾಗೋಷ್ಠಿ: ಹಿಜಾಬ್ ವಿದ್ಯಾರ್ಥಿನಿಯರಿಗೆ ನೋಟೀಸ್
ಮಂಗಳೂರು, ಜೂನ್ 6: ಹಿಜಾಬ್ ಬೇಕೆಂದು ಹಠ ಹಿಡಿದು ಪತ್ರಿಕಾಗೋಷ್ಠಿ ನಡೆಸಿದ್ದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಹಿಜಾಬ್ ವಿದ್ಯಾರ್ಥಿನಿಯರ ವಿರುದ್ಧ ಕಾಲೇಜು ಪ್ರಾಂಶುಪಾಲೆ ನೋಟಿಸ್ ಜಾರಿಗೊಳಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಕಾಲೇಜಿನ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ಮೂಲಕ ಎರಡು ದಿನಗಳ ಅವಕಾಶವನ್ನು ನೀಡಿದ ಹಿನ್ನೆಲೆಯಲ್ಲಿ ಕಾಲೇಜಿನ ಶಿಸ್ತು ಮತ್ತು ಘನತೆಗೆ ಧಕ್ಕೆ ಬಂದಿದೆ ಎಂದು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ವಿದ್ಯಾರ್ಥಿನಿಯರಿಗೆ ನೋಟಿಸ್ ಕಳುಹಿಸಿದ್ದಾರೆ.
ಪಾಕ್, ಸೌದಿಗೆ ಹೋದರೆ ಭಾರತದ ಕಾನೂನು ಅರಿವಾಗುತ್ತದೆ: ಯುಟಿ ಖಾದರ್
ಮಂಗಳೂರು ವಿವಿ ಕಾಲೇಜಿನ ಒಟ್ಟು 16 ಮಂದಿ ವಿದ್ಯಾರ್ಥಿನಿಯರಿಗೆ ನೋಟಿಸನ್ನು ಕಳುಹಿಸಿದ್ದು , ಕಾಲೇಜಿನ ಶಿಸ್ತನ್ನು ಉಲ್ಲಂಘಿಸಿ ಘನತೆಗೆ ತಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿರುವುದಾಗಿ ಹೇಳಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಗಡುವು ನೀಡಿದ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ .
ಕಾಲೇಜಿನ ಘನತೆಗೆ ಧಕ್ಕೆ
ಮಾತ್ರವಲ್ಲದೆ ನೀವು ಬಾಹ್ಯ ಶಕ್ತಿಗಳ ಜೊತೆ ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಕಾಲೇಜಿನ ವಿರುದ್ಧವಾಗಿ, ಪ್ರಾಂಶುಪಾಲರ ವಿರುದ್ಧವಾಗಿ ಕೆಲವೊಂದು ಹೇಳಿಕೆ ನೀಡಿ ಕಾಲೇಜಿನ ಘನತೆಗೆ ಉಂಟುಮಾಡಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ವರ್ತನೆಯ ಬಗ್ಗೆ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎನ್ನುವ ಬಗ್ಗೆ ಸಮಜಾಯಿಷಿಕೆಯನ್ನು ಈ ಪತ್ರ ತಲುಪಿದ ಮೂರುದಿನದ ಒಳಗಾಗಿ ಪ್ರಾಂಶುಪಾಲರಿಗೆ ನೀಡುವಂತೆ ಸೂಚಿಸಲಾಗಿದೆ ಅಂತ ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ..
ಮುಸ್ಲಿಂ ಧಾರ್ಮಿಕ ಮುಖಂಡರು ನಮಗೆ ಬೆಂಬಲ ನೀಡಿ: ಹಿಜಾಬ್ ವಿದ್ಯಾರ್ಥಿನಿಯರ ಮನವಿ
ನಿಯಮ ಮೀರಿ ನಡೆದುಕೊಂಡರೆ ಅಮಾನತು
ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಜಾಬ್ ಹೋರಾಟಗಾರ್ತಿ ವಿದ್ಯಾರ್ಥಿನಿ ಗೌಸಿಯಾ ಸೇರಿದಂತೆ ಇತರ ವಿದ್ಯಾರ್ಥಿನಿಯರಿಗೆ ನೋಟಿಸನ್ನು ನೀಡಲಾಗಿದೆ. ಮೊದಲ ಹಂತವಾಗಿ ನೋಟಿಸ್ ನೀಡಿ ವಿದ್ಯಾರ್ಥಿನಿಯರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ನೋಟಿಸ್ ಬಳಿಕವೂ ನಿಯಮ ಮೀರಿ ವರ್ತಿಸಿದರೆ ಕಾಲೇಜಿನಿಂದ ಅಮಾನತು ಆಗುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.
ಶಾಂತಿಭಂಗಕ್ಕೆ ಯತ್ನ
ಕಾಲೇಜಿನ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ ಎಂಬ ಆದೇಶ ವಿರುತ್ತದೆ. ಈ ಬಗ್ಗೆ ವಿಶ್ವವಿದ್ಯಾನಿಲಯದ ಮಾರ್ಗಸೂಚಿ ಹಾಗೂ ಹೈಕೋರ್ಟಿನ ಆದೇಶವನ್ನು ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ. ಈ ಕಾಲೇಜಿನಲ್ಲಿ ಸುಮಾರು 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ತರಗತಿಗೆ ಹಾಜರಾಗದೆ ಕಾಲೇಜಿನ ಆವರಣದಲ್ಲಿ ಆತಂಕ ಶಾಂತಿಭಂಗ ಮತ್ತು ಅಶಿಸ್ತು ಸೃಷ್ಟಿ ಮಾಡುತ್ತಿರುವುದು ಕಂಡುಬರುತ್ತಿದೆ. ಇದು ಕಾಲೇಜಿನ ಘನತೆಯನ್ನು ತಗ್ಗಿಸುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಯುಟಿ ಖಾದರ್ ಬುದ್ದಿ ಮಾತು
ಹಿಜಾಬ್ ವಿದ್ಯಾರ್ಥಿನಿಯರು ಒಮ್ಮೆ ಪಾಕಿಸ್ಥಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಎಲ್ಲಾ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ. ಇಲ್ಲಿ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ಆಗ ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ. ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ " ಎಂದು ಹಿಜಾಬ್ ವಿದ್ಯಾರ್ಥಿನಿಯರಿಗೆ ಯು. ಟಿ. ಖಾದರ್ ಬುದ್ದಿಮಾತು ಹೇಳಿದ್ದರು.
ಈಗಾಗಲೆ ಉಡುಪಿ ಪಿಯು ಕಾಲೇಜಿನ ಹಿಜಾಬ್ ವಿವಾದ ಇದೇ ರೀತಿಯಲ್ಲಿ ಆರಂಭವಾಗಿ ರಾಜ್ಯ, ರಾಜ್ಯದಿಂದ ದೇಶ ನಂತರ ದೇಶದ ಗಡಿಯನ್ನು ದಾಟಿ ಹೋಗಿತ್ತು. ಇದೀಗ ಮಂಗಳೂರಿನಲ್ಲಿ ಎರಡನೇ ಬಾರಿಗೆ ಮತ್ತೆ ವಿವಾದ ದಿನದಂದ ದಿನಕ್ಕೆ ಏರಿಕೆಯಾಗುತ್ತಿದೆ. ವಿದ್ಯಾರ್ಥಿನಿಯರು ಕೋರ್ಟ್ಗೆ ಹೋಗಲು ಸಿದ್ದರಿಲ್ಲ, ವಿಶ್ವವಿದ್ಯಾಲಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ಬಯಸುತ್ತಿದ್ದಾರೆ. ಆದರೆ ಕಾಲೇಜು ಆಡಳಿತ ಮಂಡಳಿ ಮಾತ್ರ ಹಿಜಾಬ್ಗೆ ನಿಷೇಧವೇರಿದ್ದು, ಕೋರ್ಟ್ ನಿಯಮ ಪಾಲಿಸಬೇಕೆಂದು ಸೂಚನೆ ನೀಡಿದೆ. ಒಟ್ಟಿನಲ್ಲಿ ಈ ವಿವಾದ ಎಲ್ಲಿಗೆ ಹೋಗಿ ಮುಟ್ಟಲಿದೆ ಎಂದು ಕಾದು ನೋಡಬೇಕಿದೆ.
(ಒನ್ಇಂಡಿಯಾ ಸುದ್ದಿ)