ರಾತ್ರೋರಾತ್ರಿ ಕಟೀಲು ಮೇಳದಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಔಟ್
ಮಂಗಳೂರು, ನ 23: ತೆಂಕುತಿಟ್ಟು ಯಕ್ಷಗಾನ ಲೋಕದ ಜನಪ್ರಿಯ ಭಾಗವತ, ಪಟ್ಲ ಸತೀಶ್ ಶೆಟ್ಟಿ ಮತ್ತು ಮೇಳದ ಯಜಮಾನರ ನಡುವಿನ ವೈಮನಸ್ಸು, ಮೇಳದ ತಿರುಗಾಟದ ಮೊದಲನೇ ಹರಕೆಯಾಟದಂದೇ ಬಹಿರಂಗಗೊಂಡಿದೆ.
ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಐದು ಮೇಳಗಳ ತಿರುಗಾಟದ ಮೊದಲ ಸೇವೆಯಾಟ ಏಕಕಾಲಕ್ಕೆ, ಶುಕ್ರವಾರ (ನ 22) ಕಟೀಲು ಕ್ಷೇತ್ರದಲ್ಲಿ ನಡೆಯುತ್ತಿತ್ತು. ತಡರಾತ್ರಿ 12.45 ಸುಮಾರಿಗೆ ಭಾಗವತಿಕೆಗಾಗಿ ವೇದಿಕೆಗೆ ಆಗಮಿಸಿದ ಪಟ್ಲ ಸತೀಶ್ ಅವರನ್ನು ವೇದಿಕೆಯಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ.
ಯಕ್ಷಗಾನ ಕಲೆಯ ತಪ್ಪಾದ ಬಳಕೆ; "ರಂಗನಾಯಕ"ನ ವಿರುದ್ಧ ಕರಾವಳಿಗರು ಗರಂ
ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದ ಪಟ್ಲ ಸತೀಶ್, ಭಾಗವತಿಕೆಯ ಪೇಟವನ್ನು, ದುರ್ಗಾಪರಮೇಶ್ವರಿ ದೇವಾಲಯದ ಮುಂದಿಟ್ಟು, ಕಟೀಲು ದೇವಿಗೆ ನಮಸ್ಕರಿಸಿ ಹೊರನಡೆದಿದ್ದಾರೆ. ಪಟ್ಲ ಯಕ್ಷಧೃವ ಫೌಂಡೇಶನಿನ ಅಧ್ಯಕ್ಷರೂ ಆಗಿರುವ ಪಟ್ಲ ಸತೀಶ್ ಅವರಿಗಾದ ಅವಮಾನಕ್ಕೆ, ಅವರ ಅಭಿಮಾನಿಗಳಿಂದ, ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
"ತಾಯಿಯ ಸೇವೆಯನ್ನು ಮಾಡುವ ಉದ್ದೇಶ ಮಾತ್ರ ನನ್ನಲ್ಲಿದೆ. ನಾನು ಯಾವುದೇ ರೀತಿಯ ಅಪೇಕ್ಷೆಯನ್ನು ಪಟ್ಟವನಲ್ಲ. ಇದು ಕಲಾವಿದನಿಗಾದ ಸಾವು, ನನಗಾದ ರೀತಿ ಬೇರೆ ಯಾವ ಕಲಾವಿದನಿಗೂ ಆಗದಿರಲಿ" ಎಂದು ಪಟ್ಲ ಸತೀಶ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಟೀಲು ದೇವಸ್ಥಾನದ ಅರ್ಚಕರು ಮತ್ತು ಯಕ್ಷಗಾನ ಮಂಡಳಿಯ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಒಂದು ಕಡೆ, ಇನ್ನೊಂದು ಕಡೆ ಪಟ್ಲ ಶೆಟ್ಟಿ. ಇವರ ನಡುವಿನ ಶೀತಲ ಸಮರಕ್ಕೆ ತಿರುಗಾಟದ ಮೊದಲನೇ ಹರಕೆಯಾಟವೇ ಸಾಕ್ಷಿಯಾಗಿದ್ದು ಮಾತ್ರ ದುರಂತ.
ಕಟೀಲು ಐದು ಮೇಳಗಳ ಪೈಕಿ, ಪಟ್ಲ, ನಾಲ್ಕನೇ ಮೇಳದಲ್ಲಿ ಭಾಗವತಿಕೆ ಮಾಡುತ್ತಿದ್ದರು. ಈ ಬಾರಿಯ ತಿರುಗಾಟದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೂ ಮೇಳದ ಮಾಲಕರು ಬಂದಿದ್ದಾರೆಂದು ತಿಳಿದು ಬಂದಿದೆ.
ಈ ಹಿಂದೆ, ದೇವಾಲಯದ ಅಸ್ರಣ್ಣ ಅವರ ಬಳಗದಿಂದ ಎದುರಾದ ಕಿರುಕುಳಕ್ಕೆ ಪಟ್ಲ ಸತೀಶ್ ಮೇಳಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಮೇಳದ ಕಲಾವಿದರಿಗೆ ಕನಿಷ್ಟ ಸೌಲಭ್ಯವನ್ನು ನೀಡಬೇಕೆಂದು ಪಟ್ಲ ಸತೀಶ್ ಒತ್ತಾಯಿಸಿದ್ದರು. ಇಲ್ಲಿಂದ, ಮೇಳದ ಯಜಮಾನರು ಮತ್ತು ಪಟ್ಲ ಸತೀಶ್ ಶೆಟ್ಟಿ ನಡುವೆ ವೈಮನಸ್ಸು ಆರಂಭವಾಗಿತ್ತು.
ಮೇಳದ ತಿರುಗಾಟವನ್ನು ಏಲಂ ಮೂಲಕ ನಡೆಸಬೇಕು ಎನ್ನುವ ಅರ್ಜಿ ಕೋರ್ಟಿನಲ್ಲಿದೆ. ಹಾಗಾಗಿ, ಜಿಲ್ಲಾಧಿಕಾರಿಗಳು ಕಟೀಲು ಮೇಳದ ಉಸ್ತುವಾರಿಯನ್ನು ಮುಂದಿನ ಆದೇಶವರೆಗೆ ವಹಿಸಿಕೊಳ್ಲಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಇದರಿಂದ, ಕಟೀಲು ಮೇಳದ ಯಜಮಾನ ಕಲ್ಲಾಡಿ ಶೆಟ್ಟಿಯವರಿಗೆ, ಪಟ್ಲ ಸತೀಶ್ ಶೆಟ್ಟಿಯವರನ್ನು ಮೇಳದಿಂದ ಹೊರಕ್ಕೆ ಕಳುಹಿಸುವ ಪವರ್ ಇಲ್ಲ ಎಂದೂ ಹೇಳಲಾಗುತ್ತಿದೆ.