'ನಿಪಾಹ್ ವೈರಸ್ ಕುರಿತ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ'
ಮಂಗಳೂರು, ಮೇ 24: "ಮಂಗಳೂರಲ್ಲಿ ನಿಪಾಹ್ ಪ್ರಕರಣ ಪತ್ತೆಯಾಗಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ . ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ," ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಲ್ಲಿ ಮಾರಣಾಂತಿಕ ನಿಪಾಹ್ ವೈರಸ್ ಜ್ವರದ ಹಾವಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಿಪಾಹ್ ವೈರಸ್ ಆತಂಕ: ದ.ಕ. ಜಿಲ್ಲೆ ಶ್ರೀ ಕ್ಷೇತ್ರಗಳಲ್ಲಿ ಕಟ್ಟೆಚ್ಚರ
ದಕ್ಷಿಣ ಕನ್ನಡ ಜಿಲ್ಲೆಯ ಜನರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಅವರು ಸಾರ್ವಜನಿಕರಿಗೆ ಕರೆ ನೀಡಿದರು. "ಮಂಗಳೂರಲ್ಲಿ 2 ಶಂಕಿತ ನಿಪಾಹ್ ಪ್ರಕರಣ ಪತ್ತೆಯಾಗಿತ್ತು. ಈ ಶಂಕಿತರಿಬ್ಬರ ರಕ್ತ ಹಾಗು ಗಂಟಲ ದ್ರವದ ಮಾದರಿಯನ್ನು ಮಣಿಪಾಲಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವು ನಿಪಾಹ್ ವೈರಸ್ ಸೋಂಕೆಂದು ದೃಢಪಟ್ಟಿಲ್ಲ. ಅದನ್ನು ಹೊರತುಪಡಿಸಿ ಈ ವರೆಗೆ ಯಾವುದೇ ನಿಪಾಹ್ ಸೋಂಕು ತಗುಲಿದ ಪ್ರಕರಣಗಳು ಪತ್ತೆಯಾಗಿಲ್ಲ," ಎಂದು ಅವರು ಹೇಳಿದರು.
ನಿಪಾಹ್ ವೈರಸ್ ಕಾಣಿಸಿಕೊಂಡ ನಂತರ, "ವಾಟ್ಸಪ್, ಫೇಸ್ಬುಕ್ ನಲ್ಲಿ ನಿಪಾಹ್ ವೈರಸ್ ಗೆ ಗಿಡ ಮೂಲಿಕೆ ಮದ್ದು ಇದೆ. ಯಾವುದೋ ಗಿಡಮೂಲಿಕೆ ಸೇವಿಸಿದರೆ ನಿಪಾಹ್ ವೈರಸ್ ಗುಣವಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ವಾಟ್ಸಪ್ , ಫೇಸ್ಬುಕ್ ನಲ್ಲಿ ಬರುವ ಇಂತಹ ಸುದ್ದಿಗಳನ್ನು ನಂಬಬೇಡಿ," ಎಂದು ಅವರು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ನಿಪಾಹ್ ವೈರಸ್ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೆ ಪ್ರಾಣಿಗಳು, ಪಕ್ಷಿಗಳು ಕಚ್ಚಿರುವ ಹಣ್ಣುಗಳ ಸೇವನೆಯಿಂದ ದೂರ ಇರುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮ
ಈ ನಡುವೆ ನಿಪಾಹ್ ವೃರಸ್ ಸೋಂಕು ಬಾಧಿತ ಪ್ರದೇಶಗಳಿಗೆ ಭೇಟಿ ನೀಡದಂತೆ ಅವರು ಸಾರ್ಜನಿಕರನ್ನುಎಚ್ಚರಿಸಿದರು. ಬಾವಲಿಗಳು ಹೆಚ್ಚಿರುವ ಪ್ರದೇಶಗಳ ನೀರು ಕುಡಿಯಬೇಡಿ ಎಂದು ಹೇಳಿದ ಅವರು, ಯಾವುದೇ ನೆರವು ಬೇಕಿದ್ದರೆ 104 ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು.