ವೀರೇಂದ್ರ ಹೆಗ್ಗಡೆಯವರ ಬಳಿ ನಿಂತಾಗ ಆಧ್ಯಾತ್ಮಿಕ ಶಕ್ತಿಯ ಅನುಭವವಾಗುತ್ತದೆ:ನಿರ್ಮಲಾ ಸೀತಾರಾಮನ್
ಮಂಗಳೂರು, ಅಕ್ಟೋಬರ್ 30: ಸಾಲದ ಹೊರೆಯಿಂದ ಬೇಸತ್ತು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಸಾಲ ಭಯ ಹೋಗಲಾಡಿಸಿದೆ. ಸರ್ಕಾರ ಮಾಡಲಾಗದ ಯೋಜನೆಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶಂಸಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ತಂಡಗಳ ಸದಸ್ಯರ ಪ್ರಗತಿ ರಕ್ಷಾ ಕವಚ ವಿಮಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳದಲ್ಲಿ ಕೆಲವೇ ಕ್ಷಣಗಳಲ್ಲಿ ಪ್ರಗತಿ ರಕ್ಷಾ ಕವಚ ಯೋಜನೆಗೆ ಚಾಲನೆ
ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ , ನಾನು ಚಿಕ್ಕವಳಿದ್ದಾಗ ಧರ್ಮಸ್ಥಳಕ್ಕೆ ನನ್ನ ಹೆತ್ತವರ ಜೊತೆ ಬಂದಿದ್ದೆ. ಈಗ ಮತ್ತೆ ಈ ಕ್ಷೇತ್ರಕ್ಕೆ ಬಂದಿರೋದು ನನ್ನ ಸೌಭಾಗ್ಯ. ಧರ್ಮಸ್ಥಳ ಧರ್ಮ, ನ್ಯಾಯದಿಂದ ಕೂಡಿದೆ.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಬಳಿ ಕೂತಾಗ, ನಿಂತಾಗ ಅತೀವ ಆಧ್ಯಾತ್ಮಿಕ ಶಕ್ತಿಯ ಅನುಭವವಾಗುತ್ತದೆ. ಶ್ರೀ ಮಂಜುನಾಥನೇ ಹೆಗ್ಗಡೆಯವರನ್ನು ನ್ಯಾಯಕ್ಕಾಗಿ ಓರ್ವ ಪ್ರತಿನಿಧಿಯನ್ನಾಗಿ ಆರಿಸಿದ್ದಾನೆ. ದೇವರ ಆಶೀರ್ವಾದದೊಂದಿಗೆ ಅಭಿವೃದ್ಧಿಯ ದೃಷ್ಟಿಯೊಂದಿಗೆ ಹೆಗ್ಗಡೆಯವರು ಧರ್ಮ ಪಾಲಿಸುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೊಂದು ಉತ್ತಮ ಸೌಲಭ್ಯ
"ಬಡವರನ್ನು ಸಶಕ್ತಗೊಳಿಸುವ ಕೆಲಸ ಧರ್ಮಸ್ಥಳ ಮಾಡುತ್ತಲೇ ಬರುತ್ತಿದೆ. 50 ವರ್ಷಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜದ ಅಭಿವೃದ್ಧಿಗೆ ತಮ್ಮನ್ನೇ ಅರ್ಪಿಸಿದ್ದಾರೆ. ಇಲ್ಲಿ ಸಾಲವನ್ನು ಮರುಪಾವತಿಸಲು ಒತ್ತಾಯಿಸಲಾಗುವುದಿಲ್ಲ.
ಬದಲಾಗಿ, ಜನರನ್ನು ಸುಶಿಕ್ಷಿತರನ್ನಾಗಿಸುವ ಮೂಲಕ ಸಾಲ ಮರುಪಾವತಿಸುವಂತೆ ಮಾಡಲಾಗುತ್ತದೆ. ಪ್ರಗತಿ ರಕ್ಷಾ ಕವಚ ಇನ್ಶೂರೆನ್ಸ್ 40 ಲಕ್ಷ ಜನರಿಗೆ ಸುರಕ್ಷತೆ ಒದಗಿಸುತ್ತಿದೆ. ಜನರಿಗೆ ಇದೊಂದು ಉತ್ತಮ ಸೌಲಭ್ಯವಾಗಿದೆ" ಎಂದು ನಿರ್ಮಲಾ ಹರ್ಷ ವ್ಯಕ್ತಪಡಿಸಿದರು.
ಹೆಗ್ಗಡೆಯವರ ಕೊಡುಗೆ ಅಪಾರ
ಪ್ರತಿಯೊಂದು ರೀತಿಯಲ್ಲೂ ಧರ್ಮ ಇಲ್ಲಿ ಮಾರ್ಗದರ್ಶನ ನೀಡುತ್ತಿದೆ. ಹೀಗಾಗಿ ಈ ಪ್ರದೇಶ ಅಭಿವೃದ್ಧಿ ಕಾಣುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಸಮಾಜದ ಅಭಿವೃದ್ಧಿಗೆ ಹೆಗ್ಗಡೆಯವರು ನೀಡಿದ ಕೊಡುಗೆಗಾಗಿ ಅವರ ಮುಂದೆ ತಲೆ ತಗ್ಗಿಸಿ ವಂದಿಸುತ್ತೇನೆ ಎಂದು ನಿರ್ಮಲಾ ಭಾವುಕರಾದರು.
'ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀರಾಮನ ಎತ್ತರಕ್ಕೆ ಏರಿದ್ದಾರೆ'
ಸೈನಿಕರು ದೇಶದ ಪ್ರಮುಖ ಆಸ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಕೃಷಿಕರು ಹಾಗೂ ಗಡಿಕಾಯುವ ಸೈನಿಕರು ದೇಶದ ಪ್ರಮುಖ ಆಸ್ತಿ. ಕೃಷಿಕನ ಮಕ್ಕಳೇ ಇಂದು ದೇಶದ ಗಡಿಯನ್ನು ಕಾಯುತ್ತಿದ್ದಾರೆ. ಸೈನಿಕರಂತೆ ರೈತರು ಕೂಡ ಬಿಸಿಲು, ಮಳೆ, ಚಳಿಯಲ್ಲಿ ದುಡಿಯುತ್ತಾರೆ.
ಸ್ವಯಂ ಸೇವಾ ಸಂಸ್ಥೆಗಳು ಜನರಿಗೆ ಶಕ್ತಿ, ಹಕ್ಕು, ಜೀವನ ಪೂರಕ ಸಹಾಯ ಒದಗಿಸಬೇಕು. ಎಲ್ಲದಕ್ಕೂ ಪವಾಡವನ್ನೇ ನಂಬದೆ ಸರಿಯಾದ ಮಾರ್ಗದಲ್ಲಿ ನಡೆಯುವುದೇ ಧರ್ಮದ ಭಾಗ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಲ ಬಂಡವಾಳವಾಗಬೇಕು
ರೈತರ ಆತ್ಮಹತ್ಯೆಗೆ ಸಾಲ ಕಾರಣವಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯಡಿ ಸಾಲ ಪಡೆದವರು ಕಡ್ಡಾಯವಾಗಿ ಪ್ರಗತಿ ರಕ್ಷಾ ಕವಚ ಮಾಡಬೇಕಿದೆ. ಸಾಲ ಪಡೆದ ವ್ಯಕ್ತಿಗೆ ಸಮಸ್ಯೆ ಉಂಟಾದಲ್ಲಿ ಎಲ್ ಐ ಸಿ ಸಹಾಯಕ್ಕೆ ನಿಲ್ಲುತ್ತದೆ. ಸಾಲ ಶೂಲವಾಗಬಾರದು, ಅದು ಬಂಡವಾಳವಾಗಬೇಕು ಎಂದು ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಗ್ಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ, ಸಂಜೀವ ಮಠಂದೂರು, ಬಿಜೆಪಿ ಮುಖಂಡ ಲಾಲಾಜಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.