ನಿಪಾಹ್ ವೈರಸ್ ಆತಂಕ; ಮಂಗಳೂರಿನಲ್ಲಿ ಹೈ ಅಲರ್ಟ್
ಮಂಗಳೂರು ಜೂನ್ 06: ಕೇರಳದಲ್ಲಿ ತೀವ್ರ ಜ್ವರದಿಂದ ಆಸ್ಪತ್ರೆ ಸೇರಿದ್ದ 23 ವರ್ಷದ ವಿದ್ಯಾರ್ಥಿ ದೇಹದಲ್ಲಿ ನಿಪಾಹ್ ವೈರಸ್ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಿಪಾಹ್ ವೈರಸ್ ಭೀತಿ ಕೇರಳದ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಆವರಿಸಿದೆ.
ನಿಪಾಹ್ ವೈರಸ್ ಲಕ್ಷಣಗಳು ಕಂಡುಬಂದರೆ ತತ್ಕ್ಷಣ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ. ಕೇರಳದ ವಿದ್ಯಾರ್ಥಿಯೊಬ್ಬರಲ್ಲಿ ನಿಪಾಹ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗಡಿಯ ದಕ್ಷಿಣ ಕನ್ನಡದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಒಂದು ಪ್ರಕರಣ ದೃಢ
ಕೇರಳದ ಗಡಿಭಾಗವಾಗಿರುವ ಕಾರಣ ಮಂಗಳೂರಿಗೆ ಪ್ರತಿದಿನ ಸಾವಿರಾರು ಮಂದಿ ಸಂಚರಿಸುತ್ತಿರುತ್ತಾರೆ. ಅಲ್ಲದೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.
ನಿಪಾಹ್ ವೈರಸ್ ಬಗ್ಗೆ ಮಂಗಳೂರಿನ ರೈಲು ನಿಲ್ದಾಣದಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಕೇರಳದಿಂದ ಮಂಗಳೂರಿಗೆ ಬಹುತೇಕ ಮಂದಿ ರೈಲಿನಲ್ಲೇ ಆಗಮಿಸುತ್ತಾರೆ. ಹಾಗಾಗಿ ರೈಲ್ವೇ ವೈದ್ಯರು ಈ ಬಗ್ಗೆ ಗಮನ ಹರಿಸುತ್ತಿರಬೇಕು. ಜ್ವರ ಅಥವಾ ಇತರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಬಂದಲ್ಲಿ ಸೂಕ್ತ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.