ಮಂಗಳೂರು ಪಿಎಫ್ಐ ಕಚೇರಿ ಮೇಲೆ ಎನ್ಐಎ ದಾಳಿ ಅಂತ್ಯ; ಪಿಎಫ್ಐ, ಎಸ್ಡಿಪಿಐ ಆಕ್ರೋಶ
ಮಂಗಳೂರು, ಸೆಪ್ಟೆಂಬರ್, 22: ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ, ಪಿಎಫ್ಐ ಕಚೇರಿಯಲ್ಲಿ ಎನ್ಐಎ ದಾಳಿ ಅಂತ್ಯಗೊಂಡಿದೆ. ಹಲವು ಮಹತ್ವದ ದಾಖಲೆಗಳು, ಕಡತಗಳು, ಲ್ಯಾಪ್ಟಾಪ್ಗಳೊಂದಿಗೆ ಎನ್ಐಎ ಅಧಿಕಾರಿಗಳು ಮರಳಿದ್ದಾರೆ.
Breaking: ಮಂಗಳೂರು: ಎಸ್ಡಿಪಿಐ, ಪಿಎಫ್ಐ ಕಚೇರಿಗಳ ಮೇಲೆ ಎನ್ಐಎ ದಾಳಿ
ದಾಳಿಯ ಬಗ್ಗೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಪ್ರತಿಕ್ರಿಯಿಸಿ, "ಎನ್ಐಎ ತಂಡ ಪಿಎಫ್ಐ ಕಚೇರಿ ಮೇಲೆ ದಾಳಿ ನಡೆಸಿದೆ. ಆದರೆ ಅವರಿಗೆ ತಿಳಿಸದೆ ಎಸ್ಡಿಪಿಐ ಕಚೇರಿಗೆ ದಾಳಿ ನಡೆಸಿದ್ದಾರೆ. ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ ಕಚೇರಿ ಕಟ್ಟಡ, ಪಿಎಫ್ಐ ಕಚೇರಿಗಳ ಮೇಲೆ ದಾಳಿ ಮಾಡಿದೆ. ಬಳಿಕ ಎರಡೂ ಕಚೇರಿಗಳನ್ನು ಪರಿಶೀಲನೆ ಮಾಡಿದ್ದಾರೆ. ದಾಳಿ ವೇಳೆ ನಮ್ಮ ಲ್ಯಾಪ್ಟಾಪ್, ಕೆಲವೊಂದು ದಾಖಲೆಗಳನ್ನು ಎನ್ಐಎ ವಶಕ್ಕೆ ತೆಗೆದುಕೊಂಡಿದೆ. ನಮ್ಮನ್ನು ಯಾವುದೇ ರೀತಿಯಲ್ಲಿ ವಿಚಾರಣೆ ಮಾಡಿಲ್ಲ. ನಮ್ಮ ಕಪಾಟುಗಳನ್ನು ಸಂಪೂರ್ಣ ಪರಿಶೀಲನೆ ಮಾಡಿದ್ದಾರೆ. ಯಾವ ಕಾರಣಕ್ಕೆ ಈ ದಾಳಿ ನಡೆಸಿದೆ ಎಂದು ಎನ್ಐಎ ತಂಡ ಇನ್ನು ತಿಳಿಸಿಲ್ಲ. ಆದರೆ ನಾವು ರಾಜಕೀಯವಾಗಿ ಬೆಳವಣಿಗೆ ಆಗುತ್ತಿದ್ದೇವೆ ಎಂಬ ಕುತಂತ್ರದಿಂದ ಬಿಜೆಪಿ ಈ ದಾಳಿಯನ್ನು ನಡೆಸಿದೆ," ಎಂದು ಆರೋಪಿಸಿದರು.
ಇದಕ್ಕೂ ಮೊದಲು ಎನ್ಐಎ ದಾಳಿಯ ವೇಳೆ ಪ್ರತಿಭಟನೆ ನಡೆಸಿದ ಪಿಎಫ್ಐ, ಎಸ್ಡಿಪಿಐನ 50ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ, ಎಸ್ಡಿಪಿಐ ಕಚೇರಿಗೆ ಎನ್ಐಎ ಬೆಳ್ಳಂಬೆಳಗ್ಗೆ ದಾಳಿ ನಡೆಸಿತ್ತು. ಈ ವೇಳೆ 200ಕ್ಕೂ ಅಧಿಕ ಜನ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ನಂತರ ಪೊಲೀಸರು 50ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದೆ.
ಸದ್ಯ ಸ್ಥಳದಲ್ಲಿ ಅರೆಮೀಸಲು ಪಡೆ, ಪೊಲೀಸರು ಬೀಡು ಬಿಟ್ಟಿದ್ದು ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಪಿಎಫ್ಐ, ಎಸ್ಡಿಪಿಐ ಕಚೇರಿ ಇರುವ ಮಂಗಳೂರಿನ ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದು, ಎಸ್ಐಎ ದಾಳಿ ಅಂತ್ಯವಾದ ಬಳಿಕ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.