ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ಪ್ರಕರಣ: ತನಿಖೆ ಕೈಗೆತ್ತಿಕೊಂಡ ಎನ್ಐಎ
ಮಂಗಳೂರು, ಜುಲೈ 28: ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ ನಗರಿ ಮಂಗಳೂರಿಗೆ ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ಪ್ರಕರಣದ ಬಗ್ಗೆ ಎನ್ಐಎ ತನಿಖೆ ಕೈಗೆತ್ತಿಕೊಂಡಿದೆ. ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಪ್ರಕರಣದ ತನಿಖೆ ಆರಂಭವಾಗಿದೆ.
ಮಂಗಳೂರು ಪೊಲೀಸರಿಂದ ಎಫ್ಐಆರ್ ಪ್ರತಿ ಮತ್ತು ಸಮಗ್ರ ಮಾಹಿತಿ ಪಡೆದಿರುವ ಎನ್ಐಎ ತಂಡ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಕಳೆದ ಜೂನ್ 10ರಂದು ಮಂಗಳೂರಿನಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇವರೆಲ್ಲರೂ ಎಲ್ಟಿಟಿಇ ಪ್ರಭಾವ ಇದ್ದ ಉತ್ತರ ಶ್ರೀಲಂಕಾ ಪ್ರದೇಶದವರಾಗಿರುವುದರಿಂದ ಎನ್ಐಎ ಈ ಪ್ರಕರಣವನ್ನು ತನಿಖೆಗೆ ತೆಗೆದುಕೊಂಡಿದೆ.
ಕೆನಡಾದಲ್ಲಿ ಉದ್ಯೋಗದ ಆಮಿಷ ಒಡ್ಡಿ 38 ಮಂದಿಯನ್ನು ಶ್ರೀಲಂಕಾದಿಂದ ಕರೆ ತರಲಾಗಿತ್ತು. ತಮಿಳುನಾಡಿನ ತೂತುಕಡಿಗೆ ಬಂದಿದ್ದ ಇವರು ಅಲ್ಲಿನ ಚುನಾವಣೆ ಹಿನ್ನೆಲೆ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಲ್ಲಿ ಅಕ್ರಮ ವಾಸವಿದ್ದ ಹಿನ್ನೆಲೆಯಲ್ಲಿ 38 ಜನರನ್ನು ಬಂಧಿಸಲಾಗಿತ್ತು. ಸದ್ಯ ಇವರ ವಿರುದ್ಧ ತಮಿಳುನಾಡಿನಲ್ಲೂ ಪ್ರಕರಣ ದಾಖಲಾಗಿದೆ.