ಗಂಡನಿಗೆ ಮೆಸೇಜ್ ಕಳಿಸಿ ಆಸ್ಪತ್ರೆಯಿಂದ ಪರಾರಿಯಾದ ನವವಿವಾಹಿತೆ
ಮಂಗಳೂರು, ಆಗಸ್ಟ್ 1: ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತೆ ಆಸ್ಪತ್ರೆಯಿಂದಲೇ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕೇವಲ 24 ದಿನಗಳ ಹಿಂದಷ್ಟೇ ಈಕೆಗೆ ಮದುವೆಯಾಗಿತ್ತು.
ಅನಾರೋಗ್ಯದ ನಿಮಿತ್ತ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಪತ್ನಿ ಪ್ರೇಮಾ (18) ಆಸ್ಪತ್ರೆಯಿಂದ ನಾಪತ್ತೆಯಾಗಿರುವುದಾಗಿ ಕೇರಳ ಕಣ್ಣೂರು ನಿವಾಸಿ ಶಿನೋಜ್ ಪುತ್ತೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಲ್ಲಾ ಆಯಾಮಗಳಲ್ಲೂ ಸಿದ್ಧಾರ್ಥ್ ಆತ್ಮಹತ್ಯೆ ಪ್ರಕರಣ ತನಿಖೆ: ಸಂದೀಪ್ ಪಾಟೀಲ್
ಸೋಮವಾರಪೇಟೆಯ ಕುಶಾಲನಗರ ಮಧುಲಾಪುರ ನಿವಾಸಿ ತಾಯಮ್ಮ ಎಂಬುವರ ಪುತ್ರಿ ಪ್ರೇಮಾ ಮತ್ತು ಕಣ್ಣೂರು ನಿವಾಸಿ ಶಿನೋಜ್ ಅವರ ವಿವಾಹವು ಜುಲೈ8ರಂದು ನಡೆದಿತ್ತು. ಜುಲೈ26ರಂದು ಶಿನೋಜ್ ಪತ್ನಿ ಪ್ರೇಮಾ ಅವರೊಂದಿಗೆ ಪುತ್ತೂರಿನ ಹಾರಾಡಿಯಲ್ಲಿನ ತನ್ನ ಸೋದರಿ ಮನೆಗೆ ಬಂದಿದ್ದರು.
ಎರಡು ದಿನಗಳ ಹಿಂದೆ ಪ್ರೇಮಾ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯೂ ಇರುವ ಸಂಶಯದ ಮೇಲೆ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೇಮಾ ಅವರು ಆಸ್ಪತ್ರೆಯ ಮಹಿಳಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಮಹಿಳಾ ವಾರ್ಡ್ ನಲ್ಲಿದ್ದರಿಂದ ಪತಿ ಶಿನೋಜ್ ಆಸ್ಪತ್ರೆಯ ಹಾಲ್ ನಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಹೆಂಡತಿಯನ್ನು ನೋಡಲೆಂದು ವಾರ್ಡ್ ಗೆ ಬಂದಾಗ ಆಕೆ ಆಸ್ಪತ್ರೆಯಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸಿದ್ಧಾರ್ಥ ದೇಹವನ್ನು ಪತ್ತೆ ಮಾಡಿದ ಮೀನುಗಾರನ ಮಾತುಗಳು
ಹೀಗೆ ಪರಾರಿಯಾದ ನಂತರ ಪ್ರೇಮಾ ಅವರು ಶಿನೋಜ್ ಅವರ ಮೊಬೈಲ್ ಗೆ "ನಾನು ನನ್ನ ಲವರ್ ಜೊತೆ ಹೋಗಿದ್ದೇನೆ. ನನ್ನನ್ನು ಹುಡುಕಬೇಡಿ' ಎಂದು ಮೆಸೇಜ್ ಕಳುಹಿಸಿದ್ದಾರೆ. ಈ ಪ್ರಕರಣದ ಕುರಿತು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರೇಮಾ ಹಾಗೂ ಆಕೆಯ ಪ್ರಿಯಕರನಿಗೆ ಶೋಧ ನಡೆಸುತ್ತಿದ್ದಾರೆ.