ಕಾನೂನು ವಿದ್ಯಾರ್ಥಿನಿ ರೇಷ್ಮಾ ಶಂಕಿತ ಲವ್ ಜಿಹಾದ್ ಪ್ರಕರಣದಲ್ಲಿ ಟ್ವಿಸ್ಟ್
ಮಂಗಳೂರು, ಜನವರಿ 2: ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿ ರೇಷ್ಮಾ ಶಂಕಿತ ಲವ್ ಜಿಹಾದ್ ಪ್ರಕರಣಕ್ಕೆ ಟ್ವೀಸ್ಟ್ ಸಿಕ್ಕಿದೆ. ಕಾಸರಗೋಡು ಮೂಲದ ಹಿಂದೂ ಸಂಘಟನೆಯ ಮುಖಂಡರೊಬ್ಬರ ಪುತ್ರಿ ರೇಷ್ಮಾ ಮುಂಬೈನ ಇಕ್ಬಾಲ್ ಚೌಧರಿ ಎಂಬವರೊಂದಿಗೆ ಕಾಣೆಯಾಗಿದ್ದು ಇದು 'ಲವ್ ಜಿಹಾದ್' ಪ್ರಕರಣ ಎಂದು ರೇಷ್ಮಾ ಹೆತ್ತವರು ಹಾಗು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದ್ದರು.
ಮಂಗಳೂರಲ್ಲಿ ಶಂಕಿತ ಲವ್ ಜಿಹಾದ್ ಪ್ರಕರಣ, ಎನ್ಐಎ ತನಿಖೆಗೆ ಆಗ್ರಹ
ಆದರೆ ಈಗ ಈ ಶಂಕಿತ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ತನ್ನ ಪತ್ನಿ ರೇಷ್ಮಾಳನ್ನ ಬಲವಂತವಾಗಿ ಆಕೆಯ ಕುಟುಂಬದ ಸದಸ್ಯರು ಅಪಹರಿಸಿದ್ದಾರೆ ಎಂದು ಪತಿ ಇಕ್ಬಾಲ್ ಚೌಧರಿ ಆರೋಪಿಸಿದ್ದಾರೆ. 'ಹೀಗಾಗಿ ಪತ್ನಿ ರೇಷ್ಮಾಳನ್ನು ಪತ್ತೆ ಮಾಡಿ ಕೊಡಿ ಎಂದು ಪತಿ ಇಕ್ಬಾಲ್ ಚೌಧರಿ ಮುಂಬೈ ಹೈಕೋರ್ಟ್ ನಲ್ಲಿ 'ಹೆಬಿಯಸ್ ಕಾರ್ಪಸ್' ಅರ್ಜಿ ಸಲ್ಲಿಸಿದ್ದಾರೆ. ಇದು ಮುಂಬಯಿ ಪೊಲೀಸರ ನಿದ್ದೆಗೆಡಿಸಿದೆ.
ಮುಂಬೈ ಹೈಕೋರ್ಟ್ ಒಂದು ವಾರದೊಳಗೆ ರೇಷ್ಮಾಳನ್ನು ಪತ್ತೆ ಮಾಡಿ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ಮುಂಬೈ ಪೊಲೀಸರಿಗೆ ಆದೇಶ ನೀಡಿದೆ. ಹೀಗಾಗಿ ಮುಂಬೈ ಪೊಲೀಸರು ಮಂಗಳೂರಿಗೆ ಆಗಮಿಸಿದ್ದು, ಮಂಗಳೂರಿನಲ್ಲಿರುವ ರೇಷ್ಮಾಳ ಮನೆ ಸೇರಿದಂತೆ ಸಂಬಂಧಿಕರಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿಯೇ ಮುಂಬೈ ಪೊಲೀಸರು ಬೀಡು ಬಿಟ್ಟಿದ್ದಾರೆ.
ನಗರಕ್ಕೆ ಬಂದಿದ್ದರೂ ರೇಷ್ಮಾಳನ್ನು ಪತ್ತೆ ಮಾಡುವಲ್ಲಿ ಮುಂಬಯಿ ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಒಂದು ಕಡೆಯಾದರೆ ಅತ್ತ ರೇಷ್ಮಾ ಮಾತ್ರ ತನ್ನನ್ನ ಯಾರೂ ಅಪಹರಿಸಿಲ್ಲ, ನನ್ನ ಇಚ್ಛೆಯನುಸಾರವೇ ತಂದೆ-ತಾಯಿಯ ಜೊತೆಗೆ ಬಂದಿದ್ದೇನೆ ಎಂದು ಅಫಿಡವಿಟ್ ಸಲ್ಲಿಸಿದ್ದಾಳೆ. ಈ ಪ್ರತಿಯನ್ನು ಮುಂಬೈ ಪೊಲೀಸರಿಗೆ ಸಲ್ಲಿಸಲು ರೇಷ್ಮಾ ಪೋಷಕರು ಮುಂದಾಗಿದ್ದಾರೆ.
ರೇಷ್ಮಾ ಮತ್ತು ಇಕ್ಬಾಲ್ ಪ್ರೇಮ ಪ್ರಕರಣವನ್ನು ಹಿಂದೂ ಸಂಘಟನೆಗಳ ಮುಖಂಡರು ಲವ್ ಜಿಹಾದ್ ಎಂದು ಆರೋಪಿಸಿದ್ದರು. ಮಾತ್ರವಲ್ಲ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ರೇಷ್ಮಾ ಲವ್ ಜಿಹಾದ್ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲು ಮನವಿಯನ್ನೂ ಸಲ್ಲಿಸಿದ್ದರು.