ಮಂಗಳೂರು ಮಾಜಿ ಪೊಲೀಸ್ ಅಧಿಕಾರಿ ಜೊತೆಗಿದ್ದ ಯುವಕನ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಮಂಗಳೂರು, ನವೆಂಬರ್. 29: ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮದನ್ ಮಹಿಳೆಯೊಬ್ಬರ ಜೊತೆ ಹೊಂದಿದ್ದ ಸಂಬಂಧ ತಮ್ಮ ಮಗನ ನಾಪತ್ತೆಗೆ ಪ್ರಮುಖ ಕಾರಣ ಎಂದು ವಿನಾಯಕನ ಪೋಷಕರು ಇದೀಗ ಆರೋಪಿಸಿದ್ದಾರೆ.
ಮದನ್ ಮಹಿಳೆಯೊಂದಿಗೆ ಹೊಂದಿದ್ದ ಸಂಬಂಧ ಕುರಿತು ವಿನಾಯಕ ತನ್ನ ತಾಯಿ ಬಳಿ ಹೇಳಿಕೊಂಡಿದ್ದ. ಅನೈತಿಕ ಸಂಬಂಧ ವಿಚಾರ ಹೊರಬರುತ್ತೆ ಎನ್ನುವ ಭಯದಿಂದ ಮದನ್ ಮತ್ತು ಆತನ ಜೊತೆಗಿದ್ದ ಮಹಿಳೆ ಸೇರಿ ಮಗನನ್ನು ಏನೋ ಮಾಡಿದ್ದಾರೆಂದು ವಿನಾಯಕನ ಹೆತ್ತವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಜಿ ಪೊಲೀಸ್ ಅಧಿಕಾರಿ ಜೊತೆಗಿದ್ದ ಯುವಕ ಕಣ್ಮರೆ ಪ್ರಕರಣ:ಹೇಬಿಯಸ್ ಕಾರ್ಪಸ್ ಸಲ್ಲಿಸಿದ ಕುಟುಂಬಸ್ಥರು
ಕಳೆದ ಚುನಾವಣೆ ಸಂದರ್ಭದಲ್ಲಿ ದಿಢೀರ್ ಎಂದು ಪಿಎಸ್ಐ ಹುದ್ದೆಯನ್ನು ತ್ಯಜಿಸಿದ್ದ ಮದನ್ ಚುನಾವಣಾ ಕಣಕ್ಕಿಳಿದಿದ್ದರು. ಪ್ರಚಾರದ ವೇಳೆ ಒಂದಷ್ಟು ಯುವಕರು ಜೊತೆಗೆ ನಿಂತು ಕೆಲಸ ಮಾಡಿದ್ದರು. ಅದರಲ್ಲಿ ಮಂಗಳೂರಿನ ಶಕ್ತಿನಗರದ ನಿವಾಸಿ, ಇಂಜಿನಿಯರಿಂಗ್ ಸ್ಟೂಡೆಂಟ್ ವಿನಾಯಕನೂ ಒಬ್ಬ.
ಚುನಾವಣೆ ನಂತರ ಓದನ್ನು ಬಿಟ್ಟು ಮದನ್ ಜೊತೆಯಲ್ಲಿ ನೆಲೆಸಿದ್ದ ವಿನಾಯಕ್ ಅಕ್ಟೋಬರ್ 8ರ ಬಳಿಕ ನಾಪತ್ತೆಯಾಗಿದ್ದ. ವಿನಾಯಕ್ ಕಾಣೆಯಾಗಿರುವುದನ್ನು ಮದನ್ ಒಂದು ವಾರದ ನಂತರ ಅಂದರೆ ಅಕ್ಟೋಬರ್ 15ರಂದು ಆತನ ಹೆತ್ತವರಿಗೆ ತಿಳಿಸಿದ್ದರು.
ಮಾಜಿ ಪಿಎಸ್ಐ ಮದನ್ ಜೊತೆಗಿದ್ದ ಯುವಕ ನಿಗೂಢವಾಗಿ ಕಣ್ಮರೆ!
ಆತಂಕಗೊಂಡ ಹೆತ್ತವರು ಮಂಗಳೂರಿನ ಉರ್ವಾ ಠಾಣೆಯಲ್ಲಿ ನಾಪತ್ತೆ ಕೇಸು ದಾಖಲಿಸಿದ್ದರು. ಆದರೆ, ಮದನ್ ಪೊಲೀಸ್ ಅಧಿಕಾರಿಯಾಗಿದ್ದ ಕಾರಣ ಪೊಲೀಸ್ ತನಿಖೆಯಲ್ಲಿ ನಂಬಿಕೆ ಕಳೆದುಕೊಂಡ ಹೆತ್ತವರು ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಈ ನಡುವೆ, ಮದನ್ ಜೊತೆಗಿದ್ದ ಮಹಿಳೆಯ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಹೆತ್ತವರು "ಅವರಿಬ್ಬರ ಅನೈತಿಕ ಸಂಬಂಧ ಹೊರಬರುತ್ತದೆ ಅಂತ ತಮ್ಮ ಮಗನನ್ನು ಅಪಹರಿಸಿದ್ದಾರೆ" ಎಂದು ದೂರು ಕೊಟ್ಟಿದ್ದರು. ಆದರೆ, ಈ ಬಗ್ಗೆ ಪೊಲೀಸರು ಹೆಚ್ಚು ಮುತುವರ್ಜಿವಹಿಸಿರಲಿಲ್ಲ.
ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣಿಯಾಗಲು ಹೊರಟ ಮಂಗಳೂರಿನ ಮದನ್
ಹೈಕೋರ್ಟಿನಲ್ಲಿ ಈ ಬಗ್ಗೆ ಪ್ರಶ್ನೆ ಬಂದಾಗ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಮಹಿಳೆಯ ವಿಚಾರಣೆಗೆ ಅನಾರೋಗ್ಯದ ಕಾರಣ ನೀಡಿದ್ದರು.