ಮೈಸೂರು- ಮಂಗಳೂರು -ಕಾರವಾರ ಮಧ್ಯೆ ಓಡಲಿದೆ ನೂತನ ರೈಲು
ಮಂಗಳೂರು ಆಗಸ್ಟ್ 19: ಕೆಲವೇ ದಿನಗಳಲ್ಲಿ ಮೈಸೂರು- ಮಂಗಳೂರು -ಕಾರವಾರದ ನಡುವೆ ನೇರ ರೈಲು ಸೇವೆ ಆರಂಭವಾಗಲಿದೆ. ಈ ನೂತನ ರೈಲು ಸೇವೆಯಿಂದ ಕರಾವಳಿ ಭಾಗದಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಮೈಸೂರು-ಕಾರವಾರ ಮಧ್ಯೆ ವಾರದಲ್ಲಿ ನಾಲ್ಕು ದಿನ ಹೊಸ ರೈಲು ಓಡಾಟಕ್ಕೆ ಅವಕಾಶ ನೀಡುವಂತೆ ಇತ್ತೀಚೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಮೈಸೂರು ರೈಲ್ವೇ ವಿಭಾಗವು ನೈಋತ್ಯ ರೈಲ್ವೇ ವಿಭಾಗದಿಂದ ಅನುಮತಿ ಕೇಳಿತ್ತು. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ರೈಲು ಯಾನ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಇದಕ್ಕೆ ಸದ್ಯ ಅವಕಾಶ ದೊರೆಯುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತದೆ.
ಮೈಸೂರು- ಮಂಗಳೂರು -ಕಾರವಾರ ಮಧ್ಯೆ ಓಡಲಿದೆ ನೂತನ ರೈಲು
ಈಗಾಗಲೇ ಈ ಕುರಿತು ನೈಋತ್ಯ ರೈಲ್ವೇ ವಿಭಾಗಕ್ಕೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆಗೆ ಅನುಮತಿಗಾಗಿ ಪತ್ರ ಬರೆದಿದೆ. ಎರಡೂ ವಿಭಾಗಗಳಿಂದ ಅನುಮತಿ ದೊರೆತ ತತ್ಕ್ಷಣ ನೈಋತ್ಯ ರೈಲ್ವೆ ಅಧಿಕಾರಿಗಳು ರೈಲ್ವೆ ಮಂಡಳಿಗೆ ಅನುಮೋದನೆಗೆ ಸಲ್ಲಿಸಲಿದ್ದಾರೆ. ಅಲ್ಲಿಂದ ಒಪ್ಪಿಗೆ ದೊರೆತ ಕೂಡಲೇ ರೈಲು ಓಡಾಟ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಸಿದ್ಧಪಡಿಸಿರುವ ವೇಳಾಪಟ್ಟಿಯಂತೆ ಪ್ರತಿ ಶನಿವಾರ ರಾತ್ರಿ 11:30ಕ್ಕೆ ಮೈಸೂರಿನಿಂದ ಹೊರಡುವ ರೈಲು 1:30ಕ್ಕೆ ಹಾಸನ, ರವಿವಾರ ಬೆಳಗ್ಗೆ 8:05ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮುಂದೆ ಸಂಚರಿಸಲಿರುವ ರೈಲು ಮಧ್ಯಾಹ್ನ 3:30ಕ್ಕೆ ಕಾರವಾರ ತಲುಪಲಿದೆ. ಬಳಿಕ ರವಿವಾರ ಸಂಜೆ 4:45ಕ್ಕೆ ಕಾರವಾರದಿಂದ ಹೊರಟು ರಾತ್ರಿ 11:45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಸೋಮವಾರ ಬೆಳಗ್ಗೆ 4:55ಕ್ಕೆ ಹಾಸನ ಮತ್ತು ಬೆಳಗ್ಗೆ 7:30ಕ್ಕೆ ಮೈಸೂರು ತಲುಪಲಿದೆ.