ಕರಾವಳಿಯ ಕಂಬಳಕ್ಕೆ ನೂತನ ನಿಯಮಗಳು; ನಿಯಮ ಉಲ್ಲಂಘಿಸಿದರೆ ಅಮಾನತು
ಮಂಗಳೂರು, ಜುಲೈ 17: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ವಿಶ್ವ ಮಾನ್ಯತೆ ದೊರಕಿದೆ. ಕಂಬಳ ಪ್ರಸಿದ್ಧಿಯ ಉತ್ತುಂಗದಲ್ಲಿರುವಂತೆಯೇ ಕಂಬಳದ ಕೆಲ ನಿಯಮಗಳನ್ನು ಮಾರ್ಪಾಟು ಮಾಡಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ.
ಕಂಬಳ ಶಿಸ್ತು ಪಾಲನಾ ಸಮಿತಿ ಕಂಬಳ ನಿಯಮದಲ್ಲಿ ಹಲವು ಮಾರ್ಪಾಟುಗಳನ್ನು ಮಾಡಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಹಲವು ನಿರ್ಧಾರಗಳನ್ನು ಮಾಡಿದೆ. ಒಬ್ಬ ಓಟಗಾರನಿಗೆ ಮೂರು ಜೊತೆ ಕೋಣೆಗಳನ್ನು ಓಡಿಸಲು ಮಾತ್ರ ಅವಕಾಶ ನೀಡಲಾಗಿದೆ.
ಪ್ರಸಿದ್ಧ ಕಂಬಳ ಓಟಗಾರ ಶ್ರೀನಿವಾಸ ಗೌಡಗೆ ಕೊಲೆ ಬೆದರಿಕೆ ಹಾಕಿದ ರಾಮ ಸೇನೆ ಕಾರ್ಯಕರ್ತ!
ಆದರೆ ಒಂದೇ ತಂಡದ ಎರಡು ಜೊತೆಯ ಕೋಣಗಳಿದ್ದರೆ ಮಾತ್ರ 4 ಜೊತೆ ಕೋಣಗಳನ್ನು ಓಡಿಸಬಹುದಾಗಿದೆ. ಇದರಿಂದ ಹೊಸ ಓಟಗಾರರಿಗೆ ಅವಕಾಶ ನೀಡಿದಂತಾಗುತ್ತದೆ.
ಇನ್ನು ಕಂಬಳವನ್ನು 24 ಗಂಟೆಯೊಳಗೆ ಮುಗಿಸಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ. ಬೆಳಗ್ಗೆ 9 ಗಂಟೆಗೆ ಕಂಬಳ ಆರಂಭ ಮಾಡಿ ಮರುದಿನ ಬೆಳಿಗ್ಗೆ 9 ಗಂಟೆಗೆ ಕಂಬಳವನ್ನು ಮುಗಿಸಬೇಕೆಂದು ತೀರ್ಮಾನ ಮಾಡಲಾಗಿದೆ.
ಕಂಬಳ ವಿಳಂಬವಾಗುವುದನ್ನು ತಪ್ಪಿಸಲು ಕಂಬಳ ಕೋಣಗಳನ್ನು 5 ನಿಮಿಷದ ಒಳಗಾಗಿ ಕಂಬಳದ ಗದ್ದೆಗೆ ತರಬೇಕೆಂಬ ನಿಯಮ ಮಾಡಲಾಗಿದೆ. ತಡವಾದರೆ ಆ ತಂಡವನ್ನು ಕೈಬಿಟ್ಟು ವಾಕ್ ಓವರ್ ಅಂತಾ ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ.
ಇನ್ನು ಕಂಬಳದ ತೀರ್ಪುಗಾರರ ಮದ್ಯಪಾನ ಮಾಡಿ ಬರುವಂತಿಲ್ಲ ಎಂಬುವುದಾಗಿ ಆದೇಶ ಮಾಡಲಾಗಿದೆ. ಇನ್ನು ಕಂಬಳದ ಬಗ್ಗೆ ಯಾವುದಾದರೂ ದೂರುಗಳಿದ್ದರೂ, ಜಿಲ್ಲಾ ಕಂಬಳ ಸಮಿತಿಯ ಗಮನಕ್ಕೆ ತರಬೇಕು.
ಯಾವುದಾದರೂ ತಂಡದ ತಪ್ಪು ಸಾಬೀತಾದರೆ ಒಂದು ವರ್ಷಗಳ ಕಾಲ ಆ ತಂಡವನ್ನು ಕಂಬಳದಿಂದ ಅಮಾನತು ಮಾಡುವ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಂಬಳ ಓಟಗಾರರು ಮತ್ತು ಕೋಣಗಳ ಯಜಮಾನರು ಕಂಬಳ ಸಮಿತಿಯ ಸದಸ್ಯತ್ವ ಪಡೆಯಬೇಕೆಂಬ ನಿರ್ಧಾರವನ್ನೂ ಮಾಡಲಾಗಿದೆ.