ವಿಶೇಷ ವರದಿ: ವಿದ್ಯಾರ್ಥಿಗಳಿಗೆ ಆನ್ಲೈನ್ ನರಕ ದರ್ಶನ!
ಮಂಗಳೂರು, ಜೂನ್ 17: ಕೊರೊನಾ ಕಾರಣದಿಂದ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಮಾಡುತ್ತಿದೆ. ತರಗತಿ ಇಲ್ಲದಿದ್ದರೂ ಪಾಠ/ ಪರೀಕ್ಷೆಗಳು ನಿಲ್ಲಬಾರದು ಎನ್ನುವ ದೃಷ್ಟಿಯಿಂದ ಡಿಜಿಟಲ್ ಕ್ಲಾಸ್ ನಡೆಯುತ್ತಿದೆ.
ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಎಂಬುವುದು ನರಕ ದರ್ಶನವನ್ನು ಮಾಡಿಸುತ್ತಿದೆ. 21ನೇ ಶತಮಾನದಲ್ಲೂ ಹಳ್ಳಿಗಳನ್ನು ತಲುಪದ ಇಂಟರ್ನೆಟ್ ಜಗತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಬಾಳಿಗೆ ಸಂಚಕಾರವನ್ನು ತರುತ್ತಿದೆ. ಎಲ್ಲಾ ಗ್ರಾಮೀಣ ಭಾಗಗಳ ಪರಿಸ್ಥಿತಿ ಇದೇ ರೀತಿ ಇದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಮೊಗ್ರದ ಬಳ್ಳಕ್ಕ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಎನ್ನುವುದು ಗಗನ ಕುಸುಮವಾಗಿದೆ.
ಗುಡ್ಡದ ಮೇಲಿನ ರಸ್ತೆಯಲ್ಲಿ ಕೂರಬೇಕಾಗಿದೆ
ಭಾರೀ ಗಾಳಿ, ಮಳೆಗೆ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಆನ್ಲೈನ್ ಕ್ಲಾಸ್ಗೆ ಹಾಜರಾಗುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಇಂಟರ್ನೆಟ್ ಮರೀಚಿಕೆಯಾಗಿದ್ದು, ಗ್ರಾಮದ ಗುಡ್ಡದ ಮೇಲಿನ ರಸ್ತೆಯಲ್ಲಿ ಇಡೀ ದಿನ ಕೂತು ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ಗೆ ಹಾಜರಾಗುತ್ತಿದ್ದಾರೆ. ಭಾರೀ ಮಳೆಗೆ ವಿದ್ಯಾರ್ಥಿಗಳಿಗೆ ಪೋಷಕರು ಸ್ವತಃ ಛತ್ರಿಯ ಆಸರೆ ನೀಡುತ್ತಿದ್ದು, ರಸ್ತೆಯಲ್ಲಿಯೇ ನಿಂತು ಪಾಠ ಕೇಳಬೇಕಾದ ಅನಿವಾರ್ಯತೆ ಇದೆ.
ಭಟ್ಕಳ: 'ಡಿಜಿಟಲ್ ಇಂಡಿಯಾ' ಪರಿಕಲ್ಪನೆ ನಾಚಿಸುವಂತಿದೆ ಈ ಊರಿನ ಪರಿಸ್ಥಿತಿ
ಗಾಳಿ- ಮಳೆಗೆ ಮರಗಳು ಬೀಳುವ ಆತಂಕ
ನೆಟ್ವರ್ಕ್ ಸಿಗದೆ ವಿದ್ಯಾರ್ಥಿಗಳು ಪಡಬಾರದ ಕಷ್ಟ ಪಡುತ್ತಿದ್ದು, ಕೆಲ ವಿದ್ಯಾರ್ಥಿಗಳು ಗುಡ್ಡದ ಮೇಲೆ, ಇಳಿಜಾರು ಪ್ರದೇಶದ ಮರದ ಕೆಳಗೆ ಪ್ಲಾಸ್ಟಿಕ್ ಗುಡಿಸಲಿನಲ್ಲೇ ದಿನವಿಡೀ ಇರಬೇಕಾಗಿದೆ. ಭಾರೀ ಗಾಳಿ- ಮಳೆಗೆ ಮರಗಳು ಬೀಳುವ ಆತಂಕದಲ್ಲೇ ವಿದ್ಯಾರ್ಥಿಗಳು ಆನ್ಲೈನ್ ಪಾಠ ಕೇಳುತ್ತಿದ್ದಾರೆ. ಎಸ್ಎಸ್ಎಲ್ಸಿ ಸೇರಿದಂತೆ ಕಾಲೇಜು, ಡಿಪ್ಲೊಮಾಗಳಿಗೆ ಹೋಗುವ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಆನ್ಲೈನ್ ತರಗತಿಗೆ ಹಾಜರಾಗದಿದ್ದರೆ, ಪಾಠ ತಪ್ಪುವ ಆತಂಕವಿದೆ.
ವಿದ್ಯುತ್ ಕೈ ಕೊಟ್ಟರೆ ನೆಟ್ವರ್ಕ್ ಮಾಯ
ಗುತ್ತಿಗಾರು ಗ್ರಾಮದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎನ್ ಟವರ್ ಇದ್ದು, ಕೆಲವು ಎತ್ತರದ ಭಾಗಗಳಲ್ಲಿ ಕೇವಲ 3G ನೆಟ್ವರ್ಕ್ ಮಾತ್ರ ಸಿಗುತ್ತಿದೆ. ವಿದ್ಯುತ್ ಕೈ ಕೊಟ್ಟರೆ ನೆಟ್ವರ್ಕ್ ಮಾಯವಾಗುತ್ತದೆ. ಜಿಲ್ಲಾಡಳಿತ ಇಂಟರ್ನೆಟ್ ಸಮಸ್ಯೆ ನೀಗಿಸಲು ಸಭೆ ಮಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂಬ ಆಶ್ವಾಸನೆ ನೀಡುತ್ತಾ ಬಂದಿದೆಯಾದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ಡೀಸೆಲ್ ಹಾಕಿ ಜನರೇಟರ್ ಹಾಕಬೇಕಾಗುತ್ತದೆ. ಆದರೆ ಡೀಸೆಲ್ ಪೂರೈಕೆಯೂ ಆಗುತ್ತಿಲ್ಲ.
Recommended Video
ಪೋಷಕರು ಮನೆಗೆ ಬರುವ ದಾರಿಯನ್ನೇ ಕಾಯುತ್ತಾರೆ
ತಾವು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮಾತಾನಾಡಿರುವ ವಿದ್ಯಾರ್ಥಿಗಳಾದ ಉಚಿತ್, ಶ್ಯಾಮ್ ಮತ್ತು ಗಣೇಶ್ ಇಂಟರ್ನೆಟ್ ಸಮಸ್ಯೆಯಿಂದ ಮುಕ್ತಿ ನೀಡುವಂತೆ ಸರ್ಕಾರದ ಬಳಿ ವಿನಂತಿ ಮಾಡಿಕೊಂಡಿದ್ದಾರೆ. ""ಗಾಳಿ ಮಳೆ ಬಂದರೆ ಮರದ ಕೆಳಗೆ ನಿಲ್ಲಲೂ ಭಯವಾಗುತ್ತಿದೆ. ಭಯದಲ್ಲೇ ಆನ್ಲೈನ್ ಕ್ಲಾಸ್ಗೆ ಹಾಜರಾಗಬೇಕಾಗುತ್ತದೆ. ಮನೆಯಲ್ಲಿ ಪೋಷಕರೂ ನಾವು ಆನ್ಲೈನ್ ಕ್ಲಾಸ್ ಮುಗಿಸಿ ಮನೆಗೆ ಬರುವ ದಾರಿಯನ್ನೇ ಕಾಯುತ್ತಾರೆ. ಇಂಟರ್ನೆಟ್ ಇರುವ ಪೇಟೆಗೆ ಹೋಗಿ ರೂಂ ಬಾಡಿಗೆ ಪಡೆದು ಕೆಲವರು ಕ್ಲಾಸ್ಗಳಿಗೆ ಹಾಜರಾಗುತ್ತಾರೆ. ಆದರೆ ಆರ್ಥಿಕ ಸಮಸ್ಯೆಯಿರುವ ನಮ್ಮಂತವರಿಗೆ ಬಹಳ ಕಷ್ಟ ಆಗುತ್ತಿದೆ,'' ಎಂದು ಅಳಲು ತೋಡಿಕೊಂಡಿದ್ದಾರೆ.