ಕೆ.ಆರ್.ನಂದಿನಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 1ಲಕ್ಷ ರೂ. ಬಹುಮಾನ
ಮಂಗಳೂರು, ಜೂನ್ 2: ಯುಪಿಎಸ್ಸಿಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದ ಕೋಲಾರದ ಕೆ.ಆರ್.ನಂದಿನಿಗೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 1ಲಕ್ಷ ರೂ.ನೀಡುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಘೋಷಣೆ ಮಾಡಿದ್ದಾರೆ.
"ಈ ವರ್ಷದ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಕೆ.ಆರ್ ನಂದಿನಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಯುಪಿಎಸ್ಸಿಯಲ್ಲಿ ಕರ್ನಾಟಕದವರೊಬ್ಬರು ದೇಶಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ನಂದಿನ ನಮ್ಮ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದಾರೆ. ಇದು ನಮಗೆ ನಿಜವಾಗಿಯೂ ಹೆಮ್ಮಯ ವಿಷಯ," ಎಂದು ಮೋಹನ್ ಆಳ್ವ 'ಒನ್ ಇಂಡಿಯಾ' ಕನ್ನಡದೊಂದಿದೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.[ಕರ್ನಾಟಕದ ಹೆಮ್ಮೆ ಕೋಲಾರಕ್ಕೆ ನಂದಿನಿ ಎಂಬ ಮತ್ತೊಂದು ಕೋಡು!]
ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿರುವ ನಂದಿನಿ, ಬಳಿಕ ಬೆಂಗಳೂರಿನ ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪೂರೈಸಿದ್ದಾರೆ.[ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ]
2014ರಲ್ಲಿ ಯುಪಿಎಸ್ಸಿಯಲ್ಲಿ 625ನೇ ರ್ಯಾಂಕ್ ಪಡೆದಿದ್ದ ಇವರು, ಇಂಡಿಯನ್ ರಿವೆನ್ಯೂ ಸರ್ವಿಸ್ಗೆ ಪೋಸ್ಟಿಂಗ್ ಪಡೆದಿದ್ದರು. ಇದೀಗ 2016ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ.