ಡಿ. ಕೆ. ಶಿವಕುಮಾರ್ ವಿರುದ್ಧದ ಷಡ್ಯಂತ್ರ ಬಿಚ್ಚಿಟ್ಟ ಕಟೀಲ್!
ಮಂಗಳೂರು, ಅಕ್ಟೋಬರ್ 13: ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮುನ್ನ ವಿ. ಎಸ್. ಉಗ್ರಪ್ಪ ಮತ್ತು ಸಲೀಂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಗ್ಗೆ ನಡೆಸಿದ ಸಂಭಾಷಣೆ ರಾಜ್ಯ ರಾಜಕೀಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮಾತುಕತೆಯ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಉಂಟಾಗಿದೆ.
ಕಾಂಗ್ರೆಸ್ ನಾಯಕರು ತಮ್ಮ ಹೇಳಿಕೆಗೆ ತೇಪೆ ಹಚ್ಚೋಕೆ ಪ್ರಯತ್ನಿಸಿದರೆ, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಇದೊಂದು ಡಿಕೆಶಿಯನ್ನು ಮುಗಿಸಲು ಕಾಂಗ್ರೆಸ್ನಲ್ಲಿ ಮಾಡಲಾಗುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ನ ಭ್ರಷ್ಟಾಚಾರ, ಕರ್ಮಕಾಂಡ ಇವತ್ತು ಬಯಲಿಗೆ ಬಂದಿದೆ. ಡಿ. ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿಗಳು ಅಂತ ನಾವು ಹೇಳಿಲ್ಲ, ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಬಹಳ ಕೀಳಾಗಿ ಕಲೆಕ್ಷನ್ ಗಿರಾಕಿ, ಹಫ್ತಾ ವಸೂಲಿ, ಭ್ರಷ್ಟಾಚಾರ ಎಲ್ಲಾ ಹೊರಗೆ ಹಾಕಿದ್ದಾರೆ. ಅವರ ಹುಡುಗರಲ್ಲೇ 500 ಕೋಟಿ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ಅಗತ್ಯವಾಗಿ ಸಿಬಿಐ ಮತ್ತು ಐಟಿ ತನಿಖೆ ಆಗಬೇಕು" ಎಂದು ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಹೇಳಿದ ಸುಳ್ಳುಗಳು ಅಸಹ್ಯ ಹುಟ್ಟಿಸುತ್ತಿವೆ: ಕುಮಾರಸ್ವಾಮಿ
"ಈ ಹಿಂದೆ ಡಿ. ಕೆ. ಶಿವಕುಮಾರ್ ಆದಾಯ ತೆರಿಗೆ ದಾಳಿ ವೇಳೆ ಅದು ರಾಜಕೀಯ ಪ್ರೇರಿತ ಅಂತಾ ಹೇಳಿದ್ದರು. ಆದರೆ ಇವತ್ತು ಯಾವುದೇ ರಾಜಕೀಯ ಪ್ರೇರಿತ ಇಲ್ಲದೇ ಕಾಂಗ್ರೆಸ್ ಕಚೇರಿಯಲ್ಲೇ ಮಾತನಾಡಿದ್ದಾರೆ. ಉಗ್ರಪ್ಪ ಮತ್ತು ಸಲೀಂ ಹೇಳಿರೋದು ಕಾಂಗ್ರೆಸ್ನ ಭ್ರಷ್ಟಾಚಾರದ ಅನಾವರಣವಾಗಿದೆ" ಎಂದು ನಳಿನ್ ಕುಮಾರ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರ ಇದೆಂಥಾ ಮಾತುಗಳು?
"ಇದರ ಜೊತೆಗೆ ಡಿ. ಕೆ. ಶಿವಕುಮಾರ್ ಮುಗಿಸೋ ತಂತ್ರಗಾರಿಕೆಯೂ ಇದೆ. ಡಿ. ಕೆ. ಶಿವಕುಮಾರ್ ಪ್ರಭಾವ ಕಡಿಮೆ ಮಾಡಲು ಮತ್ತು ಕುಗ್ಗಿಸಲು ಸಿದ್ದರಾಮಯ್ಯ ಮಾಡಿರೋ ತಂತ್ರಗಾರಿಕೆ ಇರಬಹುದು. ಸಿದ್ದರಾಮಯ್ಯ, ಉಗ್ರಪ್ಪ ಹಾಗೂ ಸಲೀಂ ಮೂಲಕ ಈ ಹೇಳಿಕೆ ಮಾಡಿಸಿದ್ದಾರೆ. ಸತ್ಯಾಸತ್ಯತೆ ಬಯಲಾಗಲು ತನಿಖೆ ಆಗಲಿ, ಆಗ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ತಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
"ಇದನ್ನು ಬಿಜೆಪಿ ಹೇಳಿದರೆ ರಾಜಕಾರಣ ಅಂತಾರೆ. ಆದರೆ ಉಗ್ರಪ್ಪ ತಕ್ಕಡಿ ಮೇಲೆಲ್ಲ ಅಂದಿದ್ದಾರೆ. ಕಾಂಗ್ರೆಸ್ ನಾಶದ ಅಂಚಿನಲ್ಲಿದೆ, ಮತ್ತೆ ಮೇಲೆ ಏಳೋದೇ ಇಲ್ಲ. ಮುಂದಿನ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣೆ ಕಳೆದುಕೊಳ್ಳೋದಕ್ಕೆ ಇದು ಸಾಕ್ಷಿ. ಕಾಂಗ್ರೆಸ್ನ ಈ ಹೇಳಿಕೆಗಳು ಬಿಜೆಪಿ ರಾಜಕೀಯ ಪ್ರೇರಿತವಲ್ಲ. ಸಿದ್ದರಾಮಯ್ಯನ ಗುಂಪುಗಾರಿಕೆ ಪ್ರೇರಿತ" ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
"ಉಪಚುನಾವಣೆಯಲ್ಲಿ ಇದರ ನೇರ ಪರಿಣಾಮವನ್ನು ಕಾಂಗ್ರೆಸ್ ಅನುಭವಿಸುತ್ತದೆ. ಜನ ಇದನ್ನೆಲ್ಲಾ ಗಮನಿಸ್ತಾರೆ, ಇನ್ನಷ್ಟು ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಾರೆ. ಬಿಜೆಪಿ ಇವರ ಒಳಜಗಳದ ಲಾಭ ಯಾವತ್ತೂ ಪಡೆಯಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನ ಭದ್ರತೆಗೆ ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ಈ ರಾಜ್ಯದ ಹಿಟ್ಲರ್, ಅವರಿದ್ದಾಗ 24 ಹಿಂದೂ ಯುವಕರ ಹತ್ಯೆಯಾಗಿದೆ. ಸಿದ್ದರಾಮಯ್ಯ ಆರ್ಎಸ್ಎಸ್ಗೆ ಬೈದಾಗ ಯೋಚನೆ ಮಾಡಬೇಕಿತ್ತು. ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಇವರ ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ" ಎಂದು ಟೀಕಿಸಿದರು.
"ಸಿದ್ದರಾಮಯ್ಯ ಕೋಟಿಗಟ್ಟಲೇ ಆಸ್ತಿ ಮಾಡಿದ್ದಾರೆ. ಒಂದು ಕಾಂಗ್ರೆಸ್ ಕಚೇರಿ ಕೂಡ ಮಾಡಿಲ್ಲ. ಸಿದ್ಧರಾಮಯ್ಯದ್ದು ಒಂದು ತಂತ್ರ ಪ್ರಚಾರದಲ್ಲಿ ಉಳಿಯೋದು, ಡಿ. ಕೆ. ಶಿವಕುಮಾರ್ ಮುಗಿಸೋದು ಇನ್ನೊಂದು ಕುತಂತ್ರ. ಸಿದ್ಧರಾಮಯ್ಯ ಜೆಡಿಎಸ್ನಲ್ಲಿ ಇದ್ದಾಗಲೂ ದೇವೇಗೌಡರನ್ನು ತುಳಿದವರು. ಸೋನಿಯಾ ಗಾಂಧಿ ಬಗ್ಗೆಯೇ ಕೆಟ್ಟ ಶಬ್ದದಲ್ಲಿ ಮಾತನಾಡಿದವರು ಮತ್ತೆ ಅದೇ ಸೋನಿಯಾ ಕಾಲಿಗೆ ಬಿದ್ದಿದ್ದಾರೆ. ಇವರ ವಿಷಯ ಮಾತನಾಡೋದಕ್ಕಿಂತ ಬಿಡೋದೇ ಒಳಿತು" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.